ರಾಬರ್ಟ್: ನಾಯಕನ ದ್ವಿಮುಖ ದರ್ಶನ

Update: 2021-03-13 19:30 GMT

ಲಕ್ನೊದಲ್ಲಿ ಕುಸ್ತಿ ಕಾಳಗದೊಂದಿಗೆ ಆರಂಭವಾಗುವ ಚಿತ್ರ. ಆದರೆ ಆ ಕುಸ್ತಿಯಲ್ಲಿ ನಾಯಕನಿಲ್ಲ. ಆದರೆ ಅಲ್ಲಿ ಮೂಡಿದ ಹಗೆ ರಾಜಕಾರಣಿಯೋರ್ವನ ಹತ್ಯೆಗೆ ಪ್ರೇರಣೆಯಾಗುತ್ತದೆ. ನಾಯಕ ರಾಘವ ತನ್ನ ಪುಟ್ಟ ಮಗನನ್ನು ಉಳಿಸುವ ಪ್ರಯತ್ನದಲ್ಲಿ ಆ ರಾಜಕಾರಣಿಯೂ ಬದುಕುತ್ತಾನೆ. ರಾಘವ ಕನ್ನಡಿಗ. ಲಕ್ನೊದಲ್ಲಿ ವಾಸವಾಗಿರುವ ಕನ್ನಡಿಗರ ಕುಟುಂಬದ ಜೊತೆಗಿರುವಾತ. ಅದು ಅಡುಗೆ ವ್ಯಾಪಾರ ನಡೆಸುವ ಅಡುಗೆ ಭಟ್ಟನ ಕುಟುಂಬ. ಅಮೃತಾ ಕ್ಯಾಟರಿಂಗ್ ಸರ್ವೀಸ್ ಅದು. ಅಲ್ಲಿ ಪ್ರಧಾನ ಅಡುಗೆ ರಾಘವನದ್ದೇ. ಇವಿಷ್ಟು ಚಿತ್ರದ ಆರಂಭ ನಮಗೆ ನೀಡುವ ನಾಯಕನ ಹಿನ್ನೆಲೆ. ಆದರೆ ಅವೆಲ್ಲ ಸುಳ್ಳಾಗಿರಬಹುದು ಎನ್ನುವ ಪ್ರೇಕ್ಷಕರ ನಿರೀಕ್ಷೆಯನ್ನು ನಿಜವಾಗಿಸುತ್ತದೆ ಮುಂದಿನ ಕತೆ.

ಹಾಗಾದರೆ ನಿಜ ಏನು? ರಾಬರ್ಟ್ ಎನ್ನುವ ನಾಯಕ ಯಾಕೆ ರಾಘವನ ರೂಪ ತಾಳಿದ ಎನ್ನುವುದನ್ನು ಚಿತ್ರಮಂದಿರದಲ್ಲಿ ನೋಡಬೇಕು ಎಂದು ಬಯಸುವುದು ಚಿತ್ರ ತಂಡದ ಆಶಯ. ಲಕ್ನ್ನೋದಲ್ಲಿ ಆರಂಭಗೊಳ್ಳುವ ಕತೆ. ಹಾಗಾಗಿ ಪಾತ್ರಗಳೆಲ್ಲ ಉತ್ತರ ಪ್ರದೇಶದವುಗಳು. ಇದೇನು ಡಬ್ಬಿಂಗ್ ರೈಟ್ಸ್‌ಗಾಗಿ ಕನ್ನಡತನದಿಂದ ನಿರ್ದೇಶಕರು ದೂರ ಹೋಗಿದ್ದಾರೆಯೇ ಎನ್ನುವ ಸಂದೇಹ ಸಹಜ. ಆದರೆ ಮಧ್ಯಂತರದ ಹೊತ್ತಿಗೆ ಅದಕ್ಕೊಂದು ಸಕಾರಣ ನೀಡುವಲ್ಲಿ ನಿರ್ದೇಶಕರು ಯಶಸ್ವಿಯಾಗುತ್ತಾರೆ.

ಹಾಗಂತ ಇದು ಎಲ್ಲೂ ಕೇಳಿರದ ಕತೆ ಏನೂ ಅಲ್ಲ. ‘ಬಾಷಾ’ (ವಿಷ್ಣುವರ್ಧನ್ ಅವರ ‘ಕೋಟಿಗೊಬ್ಬ’) ಚಿತ್ರದಲ್ಲಿ ಮುಂಬೈ ಭೂಗತ ಜಗತ್ತಿನಿಂದ ಬಂದ ನಾಯಕ ತವರೂರಲ್ಲಿ ರಿಕ್ಷಾ ಚಾಲಕನಾಗಿ ಗುರುತು ಮರೆಸಿರುತ್ತಾನೆ. ಆದರೆ ಈ ಚಿತ್ರದಲ್ಲಿ ತವರಿನಿಂದ ಭೂಗತ ಜಗತ್ತು ತೊರೆದ ನಾಯಕ ಲಕ್ನೊದಲ್ಲಿ ಸೈಕಲ್ ರಿಕ್ಷಾದಲ್ಲಿ ಓಡಾಡುತ್ತಿರುತ್ತಾನೆ! ದರ್ಶನ್ ಕೈಲಿ ಕಡಗವೂ ಕಾಣಿಸುತ್ತದೆ! ಅಲ್ಲಿಯೂ ಪೊಲೀಸ್ ಅಧಿಕಾರಿಯಾಗಿ ದೇವರಾಜ್ ಇದ್ದಾರೆ! ಇಲ್ಲಿಯೂ ಅವರಿದ್ದಾರೆ. ಉಳಿದಂತೆ ಒಂದಷ್ಟು ವ್ಯತ್ಯಾಸಗಳೂ ಇವೆ.

ಮೊದಲಾರ್ಧದಲ್ಲಿ ಹೆಚ್ಚು ಪಂಚೆಯಲ್ಲಿಯೇ ಕಾಣಿಸುವ ದರ್ಶನ್ ಅವರ ಲುಕ್ ನಮಗೆ ಹೊಸದೇನೂ ಅಲ್ಲ, ಯಾಕೆಂದರೆ ಈಗಾಗಲೇ ಪಂಚೆ ಜಾಹೀರಾತಿನಲ್ಲಿ ನೋಡಿರುವಂಥದೇ ಬಿಲ್ಡಪ್! ತೊದಲು ನುಡಿಯಿಂದ ಬದಲಾಗುವ ಮಡಿಯವರೆಗಿನ ದೃಶ್ಯಗಳೆಲ್ಲವೂ ಒಂದೊಂದು ರೀತಿಯಲ್ಲಿ ಪಾತ್ರಕ್ಕೆ ಆಕರ್ಷಕವಾದ ಕಟ್ಟುವಿಕೆಯನ್ನು ತಂದುಕೊಟ್ಟಿವೆ. ಚಿತ್ರದಲ್ಲಿ ವಿನೋದ್ ಪ್ರಭಾಕರ್ ಸ್ನೇಹಕ್ಕೆ ಋಣ ಸಲ್ಲಿಸುವ ದರ್ಶನ್ ಇದ್ದಾರೆ. ಅದು ಚಿತ್ರದ ಹೊರಗೆ ಕೂಡ ಅವರಿಬ್ಬರ ಸ್ನೇಹದ ಪ್ರತೀಕವಾಗಿಯೇ ಕಾಣಿಸುತ್ತದೆ. ನಾಯಕನ ಜೊತೆಗೆ ಮತ್ತೊಂದು ಪಾತ್ರಕ್ಕೂ ಸಾಕಷ್ಟು ಪ್ರಾಮುಖ್ಯತೆ ದೊರಕಿದ್ದಕ್ಕೇನೇ ಇರಬಹುದು, ನಾಯಕಿಗೆ ಹೇಳಿಕೊಳ್ಳುವ ಅವಕಾಶಗಳಿಲ್ಲ. ಜೋಡಿ ಗೀತೆಯಿದ್ದರೂ ಅವುಗಳು ಕೂಡ ಆಶಾ ಭಟ್ ಅವರನ್ನು ಜನಪ್ರಿಯಗೊಳಿಸಲು ಸಹಕಾರ ನೀಡಿಲ್ಲ.

ಅಂದಹಾಗೆ ವಿನೋದ್ ಪ್ರಭಾಕರ್ ಜೋಡಿಯಾಗಿ ಸೊನಾಲ್ ಮೊಂತೆರೋ ಕೂಡ ಇದ್ದಾರೆ. ಇಬ್ಬರು ಕರಾವಳಿಯ ಬೆಡಗಿಯರು ತಮಗೆ ಸಿಕ್ಕ ಅವಕಾಶವನ್ನು ಚೊಕ್ಕವಾಗಿ ಬಳಸಿದ್ದಾರೆ ಎನ್ನಬಹುದು. ಭರ್ಜರಿ ಖಳ ಸಹೋದರರಾಗಿ ರವಿಶಂಕರ್ ಮತ್ತು ಜಗಪತಿ ಬಾಬು ನಟಿಸಿದ್ದಾರೆ. ಅದರಲ್ಲಿಯೂ ಕ್ಲೈಮ್ಯಾಕ್ಸ್ ಫೈಟ್‌ನಲ್ಲಿ ಎರಡೆರಡು ಭಾವ ತೋರಿಸುವ ದರ್ಶನ್ ನಟನೆಗೆ ರವಿಶಂಕರ್ ನೀಡುವ ಪ್ರತಿಕ್ರಿಯೆಯಿಂದಾಗಿ ಅದು ಇನ್ನಷ್ಟು ಹೈಲೈಟ್ ಆಗುತ್ತದೆ. ರವಿ ಕಿಶನ್, ಚಂದು ಗೌಡ, ಚಿಕ್ಕಣ್ಣ ಸೇರಿದಂತೆ ಎಲ್ಲ ಪ್ರಮುಖ ಪಾತ್ರಗಳನ್ನು ಆಕರ್ಷಕವಾಗಿ ಪರಿಚಯಿಸುವ ನಿರ್ದೇಶಕ ತರುಣ್ ಪರದೆ ಮೇಲಿನ ಅವುಗಳ ನಿರ್ಗಮನವನ್ನು ಪ್ರಭಾವಶಾಲಿಯಾಗಿ ತೋರಿಸುವಲ್ಲಿ ಸೋತಿದ್ದಾರೆ.

ಅದಕ್ಕೊಂದು ಅಪವಾದ ಇದ್ದರೆ, ಶಿವರಾಜ್ ಕೆ. ಆರ್. ಪೇಟೆ ಪಾತ್ರ ಮಾತ್ರ. ಮಂಗಳಮುಖಿಯಾಗಿ ಅವರ ನಟನೆ ಅಮೋಘ. ಸಂಭಾಷಣೆ ಕೂಡ ಅವರಿಗೆ ಸಾಥ್ ನೀಡಿದೆ. ಸಂಭಾಷಣೆಕಾರರ ವಿಚಾರಕ್ಕೆ ಬಂದರೆ ಮುಖ್ಯ ಸಂದರ್ಭದಲ್ಲೇ ಒಬ್ಬರು ಕೈ ಕೊಟ್ಟ ಹಾಗಿದೆ. ದೇವರಾಜ್ ಅವರಿಂದ ‘‘ಶಿಲೆಯಾಗಿರುವ ಕಲ್ಲಿಗೆ ಮತ್ತೆ ಪೆಟ್ಟು ಕೊಡುವ ಅವಶ್ಯಕತೆ ಇಲ್ಲ’ ಎನ್ನುವ ವಾಕ್ಯ ಹೇಳಿಸಲಾಗಿದೆ. ಅದು ಅರ್ಥಪೂರ್ಣವಾಗಬೇಕಿದ್ದರೆ, ‘ಶಿಲೆ’ ಎನ್ನುವ ಪದದ ಬದಲಿಗೆ ‘ಶಿಲ್ಪ’ಎನ್ನುವ ಪದವನ್ನು ಬಳಸಬೇಕಿತ್ತು.

ಒಟ್ಟು ಚಿತ್ರದ ವಿಚಾರಕ್ಕೆ ಬಂದರೆ ರಾಬರ್ಟ್ ಹೆಚ್ಚು ತಕರಾರುಗಳಿಲ್ಲದೆ ಒಪ್ಪಬಹುದಾದ ಒಂದು ಕಮರ್ಷಿಯಲ್ ಸಿನೆಮಾ. ದರ್ಶನ್ ಅಭಿಮಾನಿಗಳು ಬಯಸುವ, ಪ್ರಸ್ತುತ ಕಾಲಘಟ್ಟದ ಕೌಟುಂಬಿಕ ಪ್ರೇಕ್ಷಕರು ಸಹಿಸುವ ಎಲ್ಲ ಅಂಶಗಳು ಚಿತ್ರದಲ್ಲಿವೆ.

ತಾರಾಗಣ: ದರ್ಶನ್, ಆಶಾ ಭಟ್
ನಿರ್ದೇಶನ: ತರುಣ್ ಸುಧೀರ್
ನಿರ್ಮಾಣ: ಉಮಾಪತಿ ಶ್ರೀನಿವಾಸ್

 

Writer - ಶಶಿಕರ ಪಾತೂರು

contributor

Editor - ಶಶಿಕರ ಪಾತೂರು

contributor

Similar News