ಉವೈಸಿಯ ಭದ್ರಕೋಟೆಯಲ್ಲಿ ಹಾಡಹಗಲೇ ಎಐಎಂಐಎಂ ಮುಖಂಡನ ಹತ್ಯೆ

Update: 2021-04-01 12:16 GMT

ಹೈದರಾಬಾದ್: ಹಾಡಹಗಲೇ ರಸ್ತೆಯಲ್ಲಿ ಆಲ್ ಇಂಡಿಯಾ ಮಜ್ಲಿಸೇ ಇತ್ತಿಹಾದುಲ್ ಮುಸ್ಲಿಮೀನ್ ಪಕ್ಷದ ಮುಖಂಡ ಅಸದ್‌ ಖಾನ್‌ (೪೦) ಎಂಬವರನ್ನು ಹತ್ಯೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಘಟನೆಯು ಹೈದರಾಬಾದ್‌ ನ ಓಲ್ಡ್‌ ಸಿಟಿಯಲ್ಲಿರುವ ಮೈಲಾರದೇವಪಲ್ಲಿ ಪೊಲೀಸ್‌ ಸ್ಟೇಷನ್‌ ಹತ್ತಿರದ ವಟ್ಟಪ್ಪಲ್ಲಿ ಎಂಬಲ್ಲಿ ನಡೆದಿದೆ. ಈ ಪ್ರದೇಶ ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್‌ ಉವೈಸಿಯವರ ಭದ್ರಕೋಟೆ ಎಂದೇ ಗುರುತಿಸಲಾಗಿದೆ.

ಸ್ಥಳೀಯ ಎಐಎಂಐಎಂ ಮುಖಂಡ ಅಸದ್‌ ಖಾನ್‌ ಈ ಹಿಂದೆ ಕ್ರಿಮಿನಲ್‌ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದ. ಇದೊಂದು ಸೇಡಿನ ಹತ್ಯೆಯಾಗಿರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ. ಪೊಲೀಸರು ಈ ಕುರಿತು ತನಿಖೆ ನಡೆಸುತ್ತಿದ್ದು, ಅಪರಾಧಿಗಳನ್ನು ಬಂಧಿಸಲು ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದ್ದಾರೆ.

ಅಸದ್‌ ಖಾನ್‌ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವೇಳೆ ಶಾಸ್ತ್ರಿಪುರಂನಲ್ಲಿರುವ ಪಬ್ಲಿಕ್‌ ಹಾಲ್‌ ಸಮೀಪ ಆಯುಧಗಳೊಂದಿಗೆ ಬಂದಿದ್ದ ಗುಂಪೊಂದು ಹಾಡಹಗಲೇ ಶಸ್ತ್ರಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿದೆ ಎಂದು ತಿಳಿದು ಬಂದಿದೆ. ಕೂಡಲೇ ಅವರನ್ನು ಉಸ್ಮಾನಿಯಾ ಆಸ್ಪತ್ರೆಗೆ ದಾಖಲಿಸಿದ್ದು, ವೈದ್ಯರು ವ್ಯಕ್ತಿ ಮೃತಪಟಿದ್ದಾಗಿ ಘೋಷಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News