ಈ ವಾರದ ಬಿಗ್ ಬಾಸ್ ಪಂಚಾಯ್ತಿಯಲ್ಲಿ ಸುದೀಪ್ ಇಲ್ಲ

Update: 2021-04-16 14:44 GMT

ಅನಾರೋಗ್ಯದ ಕಾರಣದಿಂದಾಗಿ, ಬಿಗ್ ಬಾಸ್ ಶೋನ ಈ ವಾರಾಂತ್ಯದ ಸಂಚಿಕೆಗಳಲ್ಲಿ ನಟ ಸುದೀಪ್ ಭಾಗವಹಿಸುತ್ತಿಲ್ಲ. ಎಂಟು ಸೀಸನ್ನುಗಳಲ್ಲಿ ಹೀಗಾಗುತ್ತಿರುವುದು ಇದೇ ಮೊದಲು. ಸುದೀಪ್ ಅವರ ಅನುಪಸ್ಥಿತಿಯಲ್ಲಿ  ಈ ವಾರದ ಎಲಿಮಿನೇಶನ್ ಹೇಗೆ ನಡೆಯಲಿದೆ ಎಂಬುದು ಎಲ್ಲರಲ್ಲಿ ಕುತೂಹಲ ಹುಟ್ಟಿಸಿದೆ.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್ ಬಾಸ್ ಕಾರ್ಯಕ್ರಮದ  ಶನಿವಾರದ ‘ವಾರದ ಕತೆ ಕಿಚ್ಚನ ಜತೆ’ ಹಾಗೂ ರವಿವಾರದ “ಸೂಪರ್ ಸಂಡೆ ವಿತ್ ಸುದೀಪ’ ಸಂಚಿಕೆಗಳನ್ನು ನೋಡುಗರು ವಿಶೇಷ ಕುತೂಹಲದಿಂದ ಕಾಯುತ್ತಾರೆ. ಬಿಡುವಿರದ ಶೂಟಿಂಗುಗಳಿದ್ದಾಗಲೂ ಸುದೀಪ್ ಈ ಸಂಚಿಕೆಗಳನ್ನು ಒಮ್ಮೆಯೂ ತಪ್ಪಿಸಿಕೊಂಡ ಉದಾಹರಣೆಗಳಿರಲಿಲ್ಲ.

ಆದರೆ ಅನಿವಾರ್ಯವಾಗಿ ಎದುರಾಗಿರುವ ಈ ಸವಾಲಿಗೆ ಕಲರ್ಸ್ ಕನ್ನಡದ ಬಿಗ್ ಬಾಸ್ ತಂಡ ಸಜ್ಜಾಗುತ್ತಿದೆ. ಸುದೀಪ್ ಅವರಿಲ್ಲದೆ ಈ ಎರಡು ಸಂಚಿಕೆಗಳನ್ನು ಕುತೂಹಲಕರವಾಗಿ, ವಿನೂತನವಾಗಿ ರೂಪಿಸುವುದರ ಬಗ್ಗೆ ಚಿಂತನೆ ನಡೆದಿದೆ. ಹಾಗಾಗಿ ಈ ವಾರದ ಸಂಚಿಕೆಗಳು ಹೊಸ ವಿನ್ಯಾಸದಲ್ಲಿ ಮೂಡಿಬರಲಿವೆ.

ಈ ಕುರಿತು ಮಾತನಾಡಿರುವ ಕಲರ್ಸ್ ಕನ್ನಡ ಕ್ಲಸ್ಟರ್ ಹೆಡ್ ಹಾಗೂ ಬಿಗ್ ಬಾಸ್ ಶೋನ ನಿರ್ದೇಶಕ ಪರಮೇಶ್ವರ ಗುಂಡ್ಕಲ್, ‘ಸುದೀಪ್ ಇಲ್ಲದ ಬಿಗ್ ಬಾಸ್ ಪಂಚಾಯ್ತಿ ನಿಜಕ್ಕೂ ಸವಾಲಿನ ಸಂಗತಿ. ಆದರೆ ಎರಡೂ ಸಂಚಿಕೆಗಳು ಎಂದಿನಂತೆ ರಾತ್ರಿ ಒಂಬತ್ತು ಗಂಟೆಗೆ ಪ್ರಸಾರವಾಗಲಿವೆ. ಅತಿ ಕಡಿಮೆ ವೋಟ್ ಗಳಿಸಿದ ಒಬ್ಬ ಸ್ಪರ್ಧಿ ಮನೆಯಿಂದ ಹೊರಬೀಳುವುದು ಖಂಡಿತ’ ಎಂದಿದ್ದಾರೆ. ಆದರೆ ಬದಲಾದ ಸನ್ನಿವೇಶದಲ್ಲಿ ಎಲಿಮಿನೇಶನ್ ಹೇಗೆ ನಡೆಯುತ್ತದೆ ಎಂಬ ಗುಟ್ಟನ್ನು ಅವರು ಬಿಟ್ಟುಕೊಡಲಿಲ್ಲ. ಅದನ್ನು ನೀವು ಸಂಚಿಕೆಗಳನ್ನು ನೋಡಿಯೇ ತಿಳಿದುಕೊಳ್ಳಬೇಕು. 

ಇದೇ ವೇಳೆ ಈ ಕುರಿತು ಟ್ವೀಟ್ ಮಾಡಿರುವ ಸುದೀಪ್ ಅವರು, ‘ವೈದ್ಯರ ಸಲಹೆಯ ಮೇರೆಗೆ ವಿಶ್ರಾಂತಿ ಪಡೆಯುತ್ತಿರುವುದರಿಂದ ಈ ವಾರಾಂತ್ಯದ ಸಂಚಿಕೆಗಳಲ್ಲಿ ಭಾಗವಹಿಸಲು ಆಗುತ್ತಿಲ್ಲ. ಬಿಗ್ ಬಾಸ್ ತಂಡದವರು ಈ ವಾರದ ಎಲಿಮಿನೇಶನ್ ಅನ್ನು ಹೇಗೆ ಮಾಡುತ್ತಾರೆಂದು ನೋಡಲು ಕುತೂಹಲದಿಂದ ಕಾಯುತ್ತಿದ್ದೇನೆ’ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News