ಕೊರೋನ ಸೋಂಕಿನ ವೈರಸ್ ಕಣ ಗಾಳಿಯಲ್ಲಿ 10 ಮೀಟರ್ ತನಕ ಸಾಗಬಲ್ಲದು: ಕೇಂದ್ರದ ಮಾರ್ಗಸೂಚಿಯಲ್ಲಿ ಮಾಹಿತಿ
ಹೊಸದಿಲ್ಲಿ, ಮೇ 20: ಕೊರೋನ ವೈರಸ್ ಹರಡುವುದನ್ನು ತಡೆಗಟ್ಟುವ ವಿಧಾನದ ಬಗ್ಗೆ ವಿವರಿಸಲು ಕೇಂದ್ರ ಸರಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ ಕೆ ವಿಜಯರಾಘವನ್ ಗುರುವಾರ ಮಾರ್ಗಸೂಚಿಯೊಂದನ್ನು ಬಿಡುಗಡೆ ಮಾಡಿದ್ದಾರೆ. ವೈರಸ್ನ ಕಣವು ಗಾಳಿಯಲ್ಲಿ 10 ಮೀಟರ್ ತನಕ ಸಾಗಬಲ್ಲದು ಎಂದು ಮಾರ್ಗಸೂಚಿಯಲ್ಲಿ ಹೇಳಿದೆ. ಸುರಕ್ಷಿತ ಅಂತರ ಪಾಲನೆ, ಮಾಸ್ಕ್ ಧಾರಣೆಯ ಹೊರತಾಗಿ, ಉತ್ತಮ ವಾತಾಯನ(ಗಾಳಿ ಬೆಳಕಿನ) ವ್ಯವಸ್ಥೆಯು ಸೋಂಕು ಪ್ರಸಾರವಾಗುವ ಅಪಾಯವನ್ನು ಕಡಿಮೆಗೊಳಿಸಬಹುದು ಎಂದು ಮಾರ್ಗಸೂಚಿ ಹೇಳಿದೆ.
ಕೋಣೆಯಲ್ಲಿ ವಾಸನೆ ತುಂಬಿದ್ದರೆ ಕಿಟಕಿ, ಬಾಗಿಲನ್ನು ತೆರೆದು ತಿಳಿಗೊಳಿಸುವಂತೆಯೇ, ಉತ್ತಮ ಗಾಳಿ ಬೆಳಕಿನ ವ್ಯವಸ್ಥೆಯಿದ್ದರೆ ಗಾಳಿಯಲ್ಲಿರುವ ಸೋಂಕಿನ ವೈರಸ್ನ ಪ್ರಮಾಣವನ್ನು ಕಡಿಮೆಗೊಳಿಸುತ್ತದೆ. ಇದರಿಂದ ಸೋಂಕು ಹರಡುವ ಅಪಾಯ ಕಡಿಮೆಯಾಗುತ್ತದೆ ಎಂದು ಮಾರ್ಗಸೂಚಿ ಹೇಳಿದೆ. ವಾತಾಯನ ವ್ಯವಸ್ಥೆ ಮನೆಯಲ್ಲಿ ಅಥವಾ ಕೆಲಸದ ಸ್ಥಳದಲ್ಲಿರುವ ಎಲ್ಲರನ್ನೂ ಸೋಂಕಿನಿಂದ ರಕ್ಷಿಸುವ ಸಮುದಾಯ ರಕ್ಷಣಾ ವ್ಯವಸ್ಥೆಯಾಗಿದೆ. ಕಚೇರಿ, ಮನೆ ಅಥವಾ ಜನಸಂದಣಿ ಸೇರುವ ಸ್ಥಳದಲ್ಲಿ ಹೊರಗಿನ ಗಾಳಿ ಒಳಬರುವ ವ್ಯವಸ್ಥೆ ಮಾಡಬೇಕು. ಈ ಸ್ಥಳಗಳಲ್ಲಿ ವೆಂಟಿಲೇಷನ್ ವ್ಯವಸ್ಥೆ ಸುಧಾರಿಸುವ ಕ್ರಮಗಳನ್ನು ಆದ್ಯತೆಯ ಮೇರೆಗೆ ಕೈಗೊಳ್ಳಬೇಕು.
ಫ್ಯಾನ್ಗಳು, ಕಿಟಕಿ ಬಾಗಿಲು, ಬಾಗಿಲುಗಳನ್ನು ಸರಿಯಾದ ಸ್ಥಳದಲ್ಲಿ ಇಟ್ಟರೆ ವೆಂಟಿಲೇಟರ್ ವ್ಯವಸ್ಥೆಗೆ ಪೂರಕವಾಗುತ್ತದೆ ಮತ್ತು ಕೋಣೆಯ ಒಳಗಿನ ಗಾಳಿಯ ಗುಣಮಟ್ಟ ಹೆಚ್ಚುತ್ತದೆ. ಕ್ರಾಸ್ ವೆಂಟಿಲೇಷನ್ ಮತ್ತು ಎಕ್ಸಾಸ್ಟ್ ಫ್ಯಾನ್( ಕೋಣೆಯೊಳಗಿಂದ ಗಾಳಿ ಹೊರಹಾಕುವ ಫ್ಯಾನ್) ಬಳಕೆ, ಸೆಂಟ್ರಲ್ ಏರ್ಕಂಡಿಷನ್ ವ್ಯವಸ್ಥೆ, ಸೆಂಟ್ರಲ್ ಏರ್ಫಿಲ್ಟ್ರೇಷನ್ ವ್ಯವಸ್ಥೆ ಸೋಂಕಿನ ಪ್ರಸಾರಕ್ಕೆ ತಡೆಯೊಡ್ಡುತ್ತದೆ ಎಂದು ಸಲಹೆ ನೀಡಲಾಗಿದೆ.
ಕಚೇರಿಗಳಲ್ಲಿ, ಸಭಾಂಗಣಗಳಲ್ಲಿ, ಶಾಪಿಂಗ್ ಮಾಲ್ಗಳಲ್ಲಿ ಎಕ್ಸಾಸ್ಟ್ ಫ್ಯಾನ್ ಅಳವಡಿಕೆಗೆ ಗೇಬಲ್ ಫ್ಯಾನ್ (ರೂಫ್ಟಾಪ್ ಎಕ್ಸಾಸ್ಟ್ ಫ್ಯಾನ್) ಅಥವಾ ರೂಫ್ ವೆಂಟಿಲೇಟರ್ ವ್ಯವಸ್ಥೆ ಒಳ್ಳೆಯದು. ಈ ಸಾಧನಗಳ ಫಿಲ್ಟರ್ಗಳನ್ನು ಆಗಿಂದಾಗ್ಗೆ ಸ್ವಚ್ಛಗೊಳಿಸುವ ಜೊತೆಗೆ ಬದಲಾಯಿಸುತ್ತಾ ಇರಬೇಕು. ಎಂಜಲು ಅಥವಾ ಸೀನಿದಾಗ ಮೂಗಿನಿಂದ ಹಾರುವ ಹನಿಗಳು ವೈರಸ್ ಹರಡುವ ಮೂಲ ವಿಧಾನಗಳಾಗಿವೆ. ಕೊರೋನದ ಲಕ್ಷಣವಿಲ್ಲದ ಸೋಂಕಿತ ವ್ಯಕ್ತಿಗಳೂ ವೈರಸ್ ಹರಡಬಲ್ಲರು. ಸೋಂಕಿನ ಲಕ್ಷಣವಿಲ್ಲದವರೂ ಹರಡಬಲ್ಲರು. ಆದ್ದರಿಂದ ಡಬಲ್ ಮಾಸ್ಕ್ ಅಥವಾ ಎನ್95 ಮಾಸ್ಕ್ ಧರಿಸಬೇಕು.
ಸೋಂಕಿತ ವ್ಯಕ್ತಿ ಹೊರಸೂಸುವ ಹನಿಯು ವಾತಾವರಣವನ್ನು ಸೇರಿ ಅಲ್ಲಿ ದೀರ್ಘಾವಧಿಯವರೆಗೆ ಉಳಿದುಕೊಳ್ಳುತ್ತದೆ. ಈ ಅಶುದ್ಧ ಗಾಳಿಯನ್ನು ಯಾರಾದರೂ ಸ್ಪರ್ಶಿಸಿದರೆ ಮತ್ತು ಸಾಬೂನು ಹಾಕಿ ಕೈಯನ್ನು ತೊಳೆದುಕೊಳ್ಳದೆ ತಮ್ಮ ಕಿವಿ, ಮೂಗು ಅಥವಾ ಬಾಯಿಯನ್ನು ಮುಟ್ಟಿಕೊಂಡರೆ ಅವರಿಗೆ ಸೋಂಕು ತಗುಲುತ್ತದೆ. ಆದ್ದರಿಂದ ಸದಾ ಬಳಕೆಯಾಗುವ ಮನೆಬಾಗಿಲಿನ ಹ್ಯಾಂಡಲ್ಗಳು, ಲೈಟ್ನ ಸ್ವಿಚ್ಗಳು, ಕುರ್ಚಿ, ನೆಲವನ್ನು ಸೋಂಕು ನಿವಾರಕ ದ್ರಾವಣ ಬಳಸಿ ಸ್ವಚ್ಛಗೊಳಿಸುತ್ತಿರಬೇಕು ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ.