ಉತ್ತರಪ್ರದೇಶ ಕಳ್ಳಭಟ್ಟಿ ದುರಂತ ಪ್ರಕರಣ: ಬಿಜೆಪಿ ಶಾಸಕ ರಿಷಿ ಶರ್ಮಾ ಪಕ್ಷದಿಂದ ವಜಾ
Update: 2021-06-07 20:58 IST
ಅಲಿಗಡ: ಉತ್ತರಪ್ರದೇಶದ ಅಲಿಗಡ ಜಿಲ್ಲೆಯಲ್ಲಿ ನಡೆದ ಕಳ್ಳಭಟ್ಟಿ ದುರಂತ ಪ್ರಕರಣದ ಪ್ರಮುಖ ಆರೋಪಿ ಬಿಜೆಪಿಯ ಶಾಸಕ ರಿಷಿ ಶರ್ಮಾ ಅವರನ್ನು ಸೋಮವಾರ ಬಿಜೆಪಿ ಪಕ್ಷದಿಂದ ವಜಾ ಮಾಡಿದೆ.
ರಿಷಿ ಶರ್ಮಾ ಅವರ ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನು ರದ್ದುಪಡಿಸಲಾಗಿದೆ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ರಿಷಿಪಾಲ್ ಸಿಂಗ್ ಅವರು ಪತ್ರಿಕಾಪ್ರಕಟನೆಯೊಂದರಲ್ಲಿ ತಿಳಿಸಿದ್ದಾರೆ.
ಪ್ರಕರಣದ ಪ್ರಮುಖ ಆರೋಪಿ ರಿಷಿ ಶರ್ಮಾ ಅವರನ್ನು ಪೊಲೀಸರು ರವಿವಾರ ಬಂಧಿಸಿದ್ದು, ಶರ್ಮಾ ಸೇರಿದಂತೆ ಇತರ ಐವರು ಮುಖ್ಯ ಆರೋಪಿಗಳ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ ಹಾಗೂ ಗೂಂಡಾ ಕಾಯ್ದೆ ಅಡಿ ಪ್ರಕರಣ ದಾಖಲಿಸಲು ಸಿದ್ಧತೆ ನಡೆಸಿದ್ದಾರೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಕಲಾನಿಧಿ ನೈಥಾನಿ ತಿಳಿಸಿದ್ದಾರೆ.
ಆರೋಪಿಗಳ ವಿಚಾರಣೆ ನಡೆಯುತ್ತಿದ್ದು, ಮದ್ಯ ಮಾಫಿಯಾದ ಪೂರ್ಣ ಜಾಲವನ್ನು ಬಹಿರಂಗಪಡಿಸುವ ನಿರೀಕ್ಷೆ ಇದೆ ಎಂದೂ ಪೊಲೀಸ್ ಮೂಲಗಳು ತಿಳಿಸಿವೆ.