ಜೇಷ್ಠತೆಯ ಆಧಾರದಲ್ಲಿ ಭಡ್ತಿ ಯಾಕಿಲ್ಲ?

Update: 2021-06-17 17:41 GMT

ಮಾನ್ಯರೇ,

ಕೃಷಿ ಇಲಾಖೆಯಲ್ಲಿ ರೋಸ್ಟರ್ ವಹಿ ಮತ್ತು ವೇಕೆನ್ಸಿ ವಹಿಗಳನ್ನು ತಯಾರಿಸದೆ ಕೃಷಿ ಅಧಿಕಾರಿಗಳ ಹುದ್ದೆಯಿಂದ ಸಹಾಯಕ ಕೃಷಿ ನಿರ್ದೇಶಕರ ಹುದ್ದೆಗೆ ರೂಲ್ 32ರ ಅಡಿಯಲ್ಲಿ ಭಡ್ತಿ ಮತ್ತು ತತ್ಸಂಬಂಧ ಸ್ಥಾನಪನ್ನ ಭಡ್ತಿ ನೀಡಲಾಗುತ್ತಿದೆ. ಇದನ್ನು ಮನಗಂಡ ನಾವು ಆರು ಜನ ಅಧಿಕಾರಿಗಳು ಅನ್ಯಾಯವನ್ನು ಪ್ರಶ್ನಿಸಿ ನ್ಯಾಯಕ್ಕಾಗಿ ರಾಜ್ಯ ಪರಿಶಿಷ್ಟ ಜಾತಿ ಮತ್ತು ಬುಡಕಟ್ಟು ವರ್ಗಗಳ ಆಯೋಗಕ್ಕೆ ದಾವೆ ಸಲ್ಲಿಸಿದ್ದೆವು.

ಮಾನ್ಯ ಆಯೋಗವು ಸರಕಾರದ ಮತ್ತು ಅರ್ಜಿದಾರರ ವಾದ ಪ್ರತಿವಾದಗಳನ್ನು ಆಲಿಸಿ ಅಂತಿಮ ತೀರ್ಪು ನೀಡಿ ಪ್ರಕರಣದಲ್ಲಿರುವ ಆರು ಅಧಿಕಾರಿಗಳಿಗೆ ಮತ್ತು ಉಳಿದ ಸುಮಾರು ಐವತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಧಿಕಾರಿಗಳಿಗೆ ಭಡ್ತಿ ನೀಡುವಂತೆ ಮಾಡಿರುವ ಶಿಫಾರಸುಗಳ ಮೇಲೆ ಸೂಕ್ತ ಕ್ರಮ ವಹಿಸುವಂತೆ ಸರಕಾರದ ಕಾರ್ಯದರ್ಶಿಗಳು, ಕೃಷಿ ಇಲಾಖೆ ಇವರಿಗೆ ಕಳುಹಿಸಿರುತ್ತದೆ. ಆನಂತರ ಸರಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ಕೃಷಿ ಇಲಾಖೆ ಇವರು ಆಯೋಗದ ಸದರಿ ಶಿಫಾರಸುಗಳ ಮೇಲೆ ಕ್ರಮ ಕೈಗೊಳ್ಳಲು ಅಂತಿಮ ಅನುಮೋದನೆಗಾಗಿ ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರಿಗೆ ಕಳುಹಿಸಿದ್ದರು. ಆಯುಕ್ತರು ಒಂದು ಸಮಿತಿಯನ್ನು ರಚಿಸಿ ಆಯೋಗದ ಶಿಫಾರಸುಗಳನ್ನು ಪರಿಶೀಲಿಸಿ ವರದಿ ನೀಡುವಂತೆ ಸೂಚಿಸಿದ್ದರು. ಸಮಿತಿಯ ಅಂತಿಮ ನಿರ್ಣಯದಂತೆ ಆಯೋಗವು ನೀಡಿರುವ ಶಿಫಾರಸುಗಳನ್ನು ಒಪ್ಪಿ ಸರಕಾರವೇ ಪ್ರತ್ಯೇಕವಾಗಿ ನೇಮಕ ಮಾಡಿದ್ದ ಕನ್ಸಲ್ಟೆಂಟ್‌ರವರು ತಯಾರಿಸಿದ್ದ ರೋಸ್ಟರ್ ವಹಿ ಮತ್ತು ವೇಕೆನ್ಸಿ ವಹಿಗಳ ಪ್ರಕಾರ ಅರ್ಜಿದಾರರು ಸೇರಿದಂತೆ ಸುಮಾರು ಐವತ್ತು ಅಧಿಕಾರಿಗಳಿಗೆ ಭಡ್ತಿ ನೀಡಲು ಒಂದು ತಿಂಗಳೊಳಗೆ ಕ್ರಮ ವಹಿಸಲು ಅಪರ ಮುಖ್ಯ ಕಾರ್ಯದರ್ಶಿ, ಕೃಷಿ ಇಲಾಖೆ ಇವರಿಗೆ ತಿಳಿಸಿದ್ದರು. ಆದರೆ ಸಮಾಜ ಕಲ್ಯಾಣ ಇಲಾಖೆಯ ಜ್ಞಾಪನ ಪತ್ರಗಳಿಗೆ ಮತ್ತು ಅರ್ಜಿದಾರರು ಹಲವು ಬಾರಿ ಮಾಡಿದ ವಿನಂತಿಗಳಿಗೆ ಸರಕಾರ ಗಮನಕೊಟ್ಟಿಲ್ಲ.

ಹಿಂದಿನ ಕೃಷಿ ಸಚಿವರಾದ ಶಿವಶಂಕರ ರೆಡ್ಡಿಯರು ಅರ್ಜಿದಾರರು ನೀಡಿದ ವಿವರಣೆಯನ್ನು ಆಲಿಸಿ ಈ ಬಗ್ಗೆ ಒಂದು ತಿಂಗಳಲ್ಲಿ ಕ್ರಮ ವಹಿಸಬೇಕು ಎಂದು ಸಭೆಯಲ್ಲಿ ಭಾಗವಹಿಸಿದ್ದ ಉಪ ಕಾರ್ಯದರ್ಶಿಯವರ ಮೂಲಕ ಅಪರ ಮುಖ್ಯ ಕಾರ್ಯದರ್ಶಿಗಳವರಿಗೆ ಸೂಚಿಸಿದ್ದರು. ಆದರೂ ಏನೂ ಪ್ರಯೋಜನ ಆಗಿಲ್ಲ. ಯಾವುದೇ ಇಲಾಖೆಯಲ್ಲಿ ಭಡ್ತಿ ನೀಡುವಾಗ ರೋಸ್ಟರ್ ವಹಿ ಮತ್ತು ವೇಕೆನ್ಸಿ ವಹಿಗಳನ್ನು ತಯಾರಿಸಿ ಸಮಾಜ ಕಲ್ಯಾಣ ಇಲಾಖೆಯಿಂದ ಅನುಮೋದನೆ ಪಡೆದು ಅದರಂತೆ ಭಡ್ತಿ ನೀಡಬೇಕೆಂಬ ಕಠಿಣ ಸೂಚನೆಗಳಿದ್ದರೂ ಸಹ ರೋಸ್ಟರ್ ವಹಿ ಮತ್ತು ವೇಕೆನ್ಸಿ ವಹಿ ಗಳನ್ನು ತಯಾರಿಸಿದೆ ಭಡ್ತಿ ನೀಡುತ್ತಿದ್ದು ಈಗಲೂ ಒಂದು ಬ್ಯಾಚ್‌ಗೆ ತರಾತುರಿಯಲ್ಲಿ ಭಡ್ತಿ ನೀಡಲು ಪ್ರಯತ್ನಿಸುತ್ತಿರುವುದು ನಮಗೆ ತಿಳಿದುಬಂದಿದೆ.

ಕ್ರಮಬದ್ಧವಾಗಿ ರೋಸ್ಟರ್ ತಯಾರಿಸಿದಲ್ಲಿ ನಾವು ಆರು ಮಂದಿ ಅಧಿಕಾರಿಗಳು ರೋಸ್ಟರ್ ಬಿಂದುಗಳ ಪ್ರಕಾರ ಜೇಷ್ಠತೆ ಪಡೆಯುತ್ತೇವೆ. ಹೀಗಿದ್ದರೂ ರೋಸ್ಟರ್ ವಹಿ ತಯಾರಿಸದೆ ಜೇಷ್ಠತೆಯಲ್ಲಿ ನಮಗಿಂತ ಕಿರಿಯರಾದ ಸಾಮಾನ್ಯ ಗುಂಪಿಗೆ ಸೇರಿದ ಸುಮಾರು 97 ಅಧಿಕಾರಿಗಳಿಗೆ ಸ್ಥಾನಪನ್ನ ಭಡ್ತಿ ನೀಡಿ ನಮಗೆ ಮತ್ತು ಸುಮಾರು 50 ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಧಿಕಾರಿಗಳಿಗೆ ಸರಕಾರದ ಆದೇಶ ಸಂಖ್ಯೆ ಡಿಪಿಎಆರ್ 29.ಎಸ್ ಬಿ ಸಿ 77 ದಿನಾಂಕ 27.4.1978ರ ಪ್ರಕಾರ ಹಾಗೂ ಮಾನ್ಯ ಉಚ್ಚನ್ಯಾಯಾಲಯ ಹೊರಡಿಸಿದ ಆದೇಶಗಳ ಅನ್ವಯ ಸಿಗಬೇಕಾದ ಸೌಲಭ್ಯಗಳಿಂದ ವಂಚಿಸಿ ಅನ್ಯಾಯ ಮಾಡಿರುತ್ತಾರೆ. ಈ ಎಲ್ಲ ವಿವರಗಳನ್ನು ಸರಕಾರದ ಸಮಾಜ ಕಲ್ಯಾಣ ಇಲಾಖೆಯ ಮಾನ್ಯ ಸಚಿವರಾದ ಶ್ರೀರಾಮುಲು ಅವರ ಗಮನಕ್ಕೂ ತರಲಾಗಿದೆ. ಅದರೂ ಅನ್ಯಾಯ ಹಾಗೆಯೇ ಉಳಿದಿದೆ.

ಹಾಗಾಗಿ

* ಸರಕಾರದ ಮುಖ್ಯ ಕಾರ್ಯದರ್ಶಿಗಳು ಎಲ್ಲಾ ಇಲಾಖೆಗಳಿಗೂ ನೀಡಿರುವ ಸೂಚನೆಗಳಂತೆ ಕೃಷಿ ಇಲಾಖೆಯು ರೋಸ್ಟರ್ ವಹಿ ಮತ್ತು ವೇಕೆನ್ಸಿ ವಹಿಗಳನ್ನು ತಯಾರಿಸಿ ಸಮಾಜ ಕಲ್ಯಾಣ ಇಲಾಖೆಯಿಂದ ಅನುಮೋದನೆ ಪಡೆಯಬೇಕಿತ್ತು. ಆದರೆ ಆ ರೀತಿ ಅನುಮೋದನೆ ಪಡೆದು ಭಡ್ತಿ ನೀಡುತ್ತಿದೆಯೇ ಎಂಬ ಬಗ್ಗೆ ಸಮಾಜ ಕಲ್ಯಾಣ ಇಲಾಖೆ ಮಾನ್ಯ ಸಚಿವರು ದಯಮಾಡಿ ಪರಿಶೀಲಿಸಬೇಕು.

* ಸರಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ಕೃಷಿ ಇಲಾಖೆ ಇವರು ಮಾನ್ಯ ಆಯೋಗದ ಶಿಫಾರಸುಗಳ ಮೇಲೆ ತೆಗೆದುಕೊಂಡಿರುವ ಕ್ರಮಗಳನ್ನು ದಯಮಾಡಿ ಪರಿಶೀಲಿಸಿ ನಮಗೆ ನ್ಯಾಯ ಒದಗಿಸಬೇಕು.

* ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರು ಅನುಮೋದಿಸಿ ಕಳುಹಿಸಿದ ಶಿಫಾರಸುಗಳ ಮೇಲೆ ಸರಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ಕೃಷಿ ಇಲಾಖೆ ಇವರು ಯಾಕೆ ಕ್ರಮ ವಹಿಸಿರುವುದಿಲ್ಲ.?

* ಸರಕಾರದ ಆದೇಶ ಸಂಖ್ಯೆ ಡಿಪಿಎಆರ್ 29.ಎಸ್ ಬಿ ಸಿ 77 ದಿನಾಂಕ 27.4.1978ರ ಪ್ರಕಾರ ಹಾಗೂ ಮಾನ್ಯ ಉಚ್ಚ ನ್ಯಾಯಾಲಯ ಕಾಲಕಾಲಕ್ಕೆ ನೀಡಿರುವ ನಿರ್ದೇಶನಗಳು ಮತ್ತು ಇತರ ಅಧಿಕೃತ ಆದೇಶಗಳ ಪ್ರಕಾರ ಕೃಷಿ ಇಲಾಖೆಯು ರೋಸ್ಟರ್ ವಹಿ ಮತ್ತು ವೇಕೆನ್ಸಿ ವಹಿ ತಯಾರಿಸಿ ಸಮಾಜ ಕಲ್ಯಾಣ ಇಲಾಖೆಯಿಂದ ಅನುಮೋದನೆ ಪಡೆಯುವವರೆಗೂ ಪ್ರಯತ್ನಿಸುತ್ತಿರುವ ಎಲ್ಲಾ ಮುಂಭಡ್ತಿಗಳನ್ನು ದಯಮಾಡಿ ನಿಲ್ಲಿಸಬೇಕು.

* ಈ ವಿಷಯದ ಬಗ್ಗೆ ಮಾನ್ಯ ಕರ್ನಾಟಕ ನ್ಯಾಯಮಂಡಳಿ ನೀಡಿರುವ ನಿರ್ದೇಶಗಳ ಉಲ್ಲಂಘನೆಯಾಗಿದ್ದು ನ್ಯಾಯಾಂಗ ನಿಂದನೆ ದಾವೆ ಸಲ್ಲಿಸಲಾಗಿದೆ. ಅದಕ್ಕೂ ಜಗ್ಗಿರುವುದಿಲ್ಲ.

* ರೋಸ್ಟರ್ ತಯಾರಿಸಿದಲ್ಲಿ ಮತ್ತು ಈಗಾಗಲೇ ಕನ್ಸಲ್ಟೆಂಟ್ ತಯಾರಿಸಿರುವ ರೋಸ್ಟರ್ ಬಿಂದುಗಳ ಪ್ರಕಾರ ನಮಗಿಂತ ಸಾಕಷ್ಟು ಕಿರಿಯರಾದ ಸಾಮಾನ್ಯ ಗುಂಪಿಗೆ ಸೇರಿದ ಸುಮಾರು 97 ಅಧಿಕಾರಿಗಳಿಗೆ ನೀಡಿರುವ ಸ್ಥಾನಪನ್ನ ಭಡ್ತಿಯಿಂದಾಗಿ ನಮಗೆ ಆಗಿರುವ ಅನ್ಯಾಯವನ್ನು ಸರಿಪಡಿಸಲು ಅಪರ ಕಾರ್ಯದರ್ಶಿಗಳು, ಕೃಷಿ ಇಲಾಖೆ ಇವರು ಸೂಕ್ತ ಕ್ರಮ ವಹಿಸಬೇಕು.

* ಅಂತಿಮವಾಗಿ ಕೃಷಿ ಇಲಾಖೆಯಲ್ಲಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಧಿಕಾರಿಗಳಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಲು ಬೇಕಾಗಿರುವ ಇದುವರೆಗೂ ತಯಾರಿಸದಿರುವ ರೋಸ್ಟರ್ ವಹಿ ಮತ್ತು ವೇಕೆನ್ಸಿ ವಹಿಯನ್ನು ತಯಾರಿಸಿ ಆ ಮೂಲಕ ನಮಗೆ ನ್ಯಾಯ ಒದಗಿಸಬೇಕೆಂದು ಸರಕಾರವನ್ನು ವಿನಂತಿಸುತ್ತೇವೆ.

ನೊಂದ ಅಧಿಕಾರಿಗಳ ಪರವಾಗಿ

-ಡಾ. ಶ್ರೀರಾಮಯ್ಯ,

M.Sc.(Agri),Ph.D.

ನಿವೃತ್ತ ರೂಲ್ 32 ಸಹಾಯಕ ಕೃಷಿ ನಿರ್ದೇಶಕರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News