ಸಿಪಿಎಂ ಮುಖಂಡ, ಕಾರ್ಯಕರ್ತನ ವಿರುದ್ಧ ಅತ್ಯಾಚಾರ ಆರೋಪ: ವಶಕ್ಕೆ ಪಡೆದ ಪೊಲೀಸರು

Update: 2021-06-28 06:16 GMT
photo: newindianexpress

ಕೋಝಿಕ್ಕೋಡ್:‌ ತಮ್ಮ ಪಕ್ಷದ ಸಹ ಕಾರ್ಯಕರ್ತೆಯೋರ್ವರ ಮೇಲೆ ತನ್ನ ಮನೆಯಲ್ಲಿ ಅತ್ಯಾಚಾರವೆಸಗಿದ ಆರೋಪದ ಮೇಲೆ ಇಬ್ಬರು ಸಿಪಿಎಂ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಕೇರಳದ ವಡಗರದ ಮುಡಪ್ಪಿಲಾವ್‌ ಎಂಬಲ್ಲಿ ನಡೆದಿದೆ ಎಂದು newindianexpress.com ವರದಿ ಮಾಡಿದೆ.

ಆರೋಪಿಗಳನ್ನು ಪುಲ್ಲುಲ್ಲಪರಂಬತ್‌ ನಿವಾಸಿ ಬಾಬುರಾಜ್‌ ಹಾಗೂ ಸಿಪಿಎಂ ಮುಳ್ಳಿಯೇರಿ ಬ್ರಾಂಚ್‌ ಕಾರ್ಯದರ್ಶಿ ಹಾಗೂ ಡಿವೈಎಫ್‌ಐ ಪದಿಯರಕ್ಕರ ಏರಿಯಾ ಕಾರ್ಯದರ್ಶಿಯಾಗಿದ್ದ ಟಿಪಿ ಲಿಜೀಶ್‌ ಎಂದು ಗುರುತಿಸಲಾಗಿದೆ. ಪೊಲೀಸರು ಅವರಿಬ್ಬರ ವಿರುದ್ಧ ಪ್ರಕರಣ ದಾಖಲಿಸಿದ್ದಂದಿನಿಂದಲೂ ಅವರು ತಲೆಮರೆಸಿಕೊಂಡಿದ್ದರು ಎಂದು ವರದಿ ತಿಳಿಸಿದೆ.

ಪೊಲೀಸ್‌ ಮೂಲಗಳ ಪ್ರಕಾರ, ಆರೋಪಿಗಳನ್ನು ಪ್ರಾಥಮಿಕ ವಿಚಾರಣೆಗೈಯಲಾಗುವುದು ಹಾಗೂ ಶೀಘ್ರದಲ್ಲೇ ಅವರನ್ನು ಬಂಧನಕ್ಕೊಳಪಡಿಸಲಾಗುವುದು. ಬಳಿಕ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ತಿಳಿದು ಬಂದಿದೆ.

ಶನಿವಾರದಂದು ಸಿಪಿಎಂ ಕಾರ್ಯಕರ್ತೆಯಾಗಿರುವ ವಿವಾಹಿತ ಮಹಿಳೆಯೋರ್ವರು ನೀಡಿದ ದೂರಿನ ಪ್ರಕಾರ ಇವರಿಬ್ಬರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಮೂರು ತಿಂಗಳ ಹಿಂದೆ ಬಾಬು ರಾಜ್‌ ತನ್ನ ಮನೆಗೆ ನುಗ್ಗಿ ಅತ್ಯಾಚಾರವೆಸಗಿದ್ದಾನೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ. ಬಳಿಕ ಈ ಘಟನೆಯನ್ನು ಅವರ ಪತಿಗೆ ತಿಳಿಸುವುದಾಗಿ ಹೆದರಿಸಿ ಹಲವು ಬಾರಿ ಅತ್ಯಾಚಾರ ಎಸಗಿದ್ದಾನೆ. ಬಳಿಕ ವಿಚಾರವನ್ನು ಎಲ್ಲರಿಗೂ ತಿಳಿಸುತ್ತೇನೆ ಎಂದು ಲಿಜೀಶ್‌ ಬೆದರಿಕೆ ಹಾಕಿ ಅತ್ಯಾಚಾರ ಮಾಡಿದ್ದಾನೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News