ಸೆಂಟ್ರಲ್ ವಿಸ್ತಾ ಕಾಮಗಾರಿಗೆ ಅನುಮತಿಸಿದ ದಿಲ್ಲಿ ಹೈಕೋರ್ಟ್ ಆದೇಶಕ್ಕೆ ತಡೆ ಹೇರಲು ಸುಪ್ರೀಂ ಕೋರ್ಟ್ ನಕಾರ
ಹೊಸದಿಲ್ಲಿ: ಕೋವಿಡ್ ಸಾಂಕ್ರಾಮಿಕದ ನಡುವೆಯೂ ರಾಜಧಾನಿ ದಿಲ್ಲಿಯಲ್ಲಿ ಸೆಂಟ್ರಲ್ ವಿಸ್ತಾ ಕಾಮಗಾರಿಯನ್ನು ಅನುಮತಿಸಿ ದಿಲ್ಲಿ ಹೈಕೋರ್ಟ್ ನೀಡಿರುವ ಆದೇಶಕ್ಕೆ ತಡೆಯಾಜ್ಞೆ ವಿಧಿಸಲು ಇಂದು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಅಪೀಲುದಾರರಿಗೆ ದಿಲ್ಲಿ ಹೈಕೋರ್ಟ್ ವಿಧಿಸಿದ ರೂ 1 ಲಕ್ಷ ದಂಡದ ಕುರಿತಂತೆಯೂ ಹಸ್ತಕ್ಷೇಪ ನಡೆಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ನಿರ್ಮಾಣ ಕಾಮಗಾರಿಗಳು ಎಲ್ಲಾ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಿ ನಡೆಯುತ್ತಿವೆ ಎಂದು ನ್ಯಾಯಮೂರ್ತಿಗಳಾದ ಎ ಎಂ ಖನ್ವಿಲ್ಕರ್, ದಿನೇಶ್ ಮಹೇಶ್ವರಿ ಹಾಗೂ ಅನಿರುದ್ಧ ಬೋಸ್ ಅವರ ಪೀಠ ಹೇಳಿದೆ.
ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸದೆ ಕಾಮಗಾರಿ ನಡೆಯುತ್ತಿದೆ ಎಂದು ತಿಳಿಸಲಾಗಿದೆ ಎಂದು ನ್ಯಾಯಾಲಯ ಹೇಳಿದಾಗ ಅಪೀಲುದಾರರಾದ ಅನ್ಯ ಮಲ್ಹೋತ್ರ ಹಾಗೂ ಸೊಹೈಲ್ ಹಷ್ಮಿ ಪರ ವಕೀಲ ಸಿದ್ಧಾರ್ಥ್ ಲುತ್ರ ಪ್ರತಿಕ್ರಿಯಿಸಿ ಅಪೀಲು ಸಲ್ಲಿಸಿದ ಸಂದರ್ಭ ಎಪ್ರಿಲ್ 19ರಿಂದ ಎಪ್ರಿಲ್ 30ರ ನಡುವೆ ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸಲಾಗುತ್ತಿರಲಿಲ್ಲ, ನಂತರ ಅನುಸರಿಸಲಾಗಿದೆ ಎಂದು ಹೇಳಿದರು.
"ಈ ಪಿಐಎಲ್ ಅನ್ನು ಹೈಕೋರ್ಟ್ ನಲ್ಲಿ ಮುಂದುವರಿಸಬಾರದಾಗಿತ್ತು, ನೈಜ ಪಿಐಎಲ್ಗಳು ಉತ್ತಮ ಕೆಲಸ ಮಾಡಿದ್ದರೆ ಪ್ರಶ್ನಾರ್ಹ ಪಿಐಎಲ್ಗಳು ಸಮಸ್ಯೆ ಸೃಷ್ಟಿಸಿವೆ, ಪಿಐಎಲ್ಗಳಿಗೆ ತಮ್ಮದೇ ಆದ ಪಾವಿತ್ರ್ಯವಿದೆ" ಎಂದು ನ್ಯಾಯಾಲಯ ಹೇಳಿದೆ.