ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಸುನೀಲ್ ಜಾಖರ್ ಭೇಟಿಯಾದ ನವಜೋತ್ ಸಿಂಗ್ ಸಿಧು
ಹೊಸದಿಲ್ಲಿ: ಇತ್ತೀಚಿನ ವಾರಗಳಲ್ಲಿ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ವಿರುದ್ಧ ಬಂಡಾಯ ಎದ್ದಿರುವ ಕಾಂಗ್ರೆಸ್ ಮುಖಂಡ ನವಜೋತ್ ಸಿಂಗ್ ಸಿಧು ಅವರು ಇಂದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸುನಿಲ್ ಜಾಖರ್ ಅವರನ್ನು ಪಂಚಕುಲದಲ್ಲಿರುವ ನಿವಾಸದಲ್ಲಿ ಭೇಟಿಯಾದರು.
ಶನಿವಾರ ಬೆಳಗ್ಗೆ ರಾಜ್ಯ ಸರಕಾರದ ವಿಮಾನದಲ್ಲಿ ಕಾಂಗ್ರೆಸ್ಸಿನ ಪಂಜಾಬ್ ಉಸ್ತುವಾರಿ ಹರೀಶ್ ರಾವತ್ ಅವರು ಅಮರಿಂದರ್ ಸಿಂಗ್ ಭೇಟಿಗೆ ಪಂಜಾಬ್ ಗೆ ಧಾವಿಸಿದ ಕೆಲವೇ ಗಂಟೆಗಳ ಮೊದಲು ಸಿಧು-ಜಾಖರ್ ಈ ಭೇಟಿ ನಡೆದಿದೆ.
ಸಿಧು ಹಾಗೂ ಸಿಂಗ್ ನಡುವಿನ ಪ್ರತ್ಯೇಕ ಸಭೆಗಳ ನಂತರ ಪಕ್ಷವು ರಾಜಿಯ ಸೂತ್ರವನ್ನು ರೂಪಿಸಿತ್ತು. ಕಾಂಗ್ರೆಸ್ ಹೈಕಮಾಂಡ್ ತೆಗೆದುಕೊಳ್ಳುವ ಯಾವುದೇ ನಿರ್ಧಾರವನ್ನು ಸ್ವೀಕರಿಸುವುದಾಗಿ ಮುಖ್ಯಮಂತ್ರಿ ಸಿಂಗ್ ಕಳೆದ ವಾರ ಹೇಳಿದ್ದರು.
ಒಪ್ಪಂದದ ಪ್ರಕಾರ ನವಜೋತ್ ಸಿಧು ಪಂಜಾಬ್ ಘಟಕದ ಅಧ್ಯಕ್ಷರಾಗಲಿದ್ದು, ದಲಿತ ಸಮುದಾಯ ಹಾಗೂ ಹಿಂದೂ ಧರ್ಮಕ್ಕೆ ಸೇರಿದ ತಲಾ ಒಬ್ಬರು ಕಾರ್ಯಕಾರಿ ಅಧ್ಯಕ್ಷರು ಎಂದು ಹೆಸರಿಸುವ ಸಾಧ್ಯತೆಯಿದೆ ಎಂದು ವರದಿಯಾಗಿತ್ತು.