ಬಿಹಾರ: ಪ್ರೀತಿಸಿದ್ದಕ್ಕೆ 17ರ ಹರೆಯದ ಬಾಲಕನ ಜನನಾಂಗ ಕತ್ತರಿಸಿ, ಥಳಿಸಿ ಕೊಂದ ದುಷ್ಕರ್ಮಿಗಳು

Update: 2021-07-25 17:29 GMT
Photo: India Today/ Mani Bhushan Sharma

ಪಾಟ್ನಾ: ಬಿಹಾರದ ಮುಝಾಫ್ಫರ್ ಪುರ ಜಿಲ್ಲೆಯಲ್ಲಿ 17 ವರ್ಷದ ಬಾಲಕನನ್ನು ಥಳಿಸಿ ಸಾಯಿಸಿದ್ದಲ್ಲದೆ  ಆತನ ಜನನಾಂಗವನ್ನು ಕತ್ತರಿಸಿ ಹಾಕಿರುವ ಪೈಶಾಚಿಕ ಕೃತ್ಯ ವರದಿಯಾಗಿದ್ದು, ಇದರಿಂದ ಕೋಪಗೊಂಡ ಸಂತ್ರಸ್ತ ಬಾಲಕನ ಮನೆಯವರು ಆರೋಪಿಯ ಮನೆಯ ಮುಂದೆಯೇ ಬಾಲಕನ ಅಂತ್ಯ ಕ್ರಿಯೆ ನೆರವೇರಿಸಿದ್ದಾರೆ.

ಕಾಂತಿ ಪೊಲೀಸ್ ಠಾಣೆ ಪ್ರದೇಶದ ರೆಪುರ ರಾಂಪುರ್ ಶಾ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಈ ಘಟನೆ ನಡೆದಿದೆ. ಅದೇ ಗ್ರಾಮದ ನಿವಾಸಿ ಸೌರಭ್ ಕುಮಾರ್ ಪಕ್ಕದ ಹಳ್ಳಿಯಾದ ಸೊರ್ಬರಾದಲ್ಲಿರುವ ತನ್ನ ಗೆಳತಿಯ ಮನೆಗೆ ಹೋಗಿದ್ದ.  ಬಾಲಕನ ಧೈರ್ಯ ನೋಡಿ ಕೋಪಗೊಂಡ ಬಾಲಕಿಯ ಸಂಬಂಧಿಕರು ಆತನನ್ನು ನಿರ್ದಯವಾಗಿ ಥಳಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.
ಸೌರಭ್ ಕುಮಾರ್ ನನ್ನು ಕೂಡಲೇ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಘಟನೆಯ ಬಗ್ಗೆ ಬಾಲಕನ ಕುಟುಂಬಕ್ಕೆ ತಿಳಿಸಲಾಗಿದೆ.

ಆದಾಗ್ಯೂ, ಅದೇ ರಾತ್ರಿ ಚಿಕಿತ್ಸೆಯ ಸಮಯದಲ್ಲಿ ಬಾಲಕ ಗಂಭೀರ ಗಾಯದಿಂದಾಗಿ  ಮೃತಪಟ್ಟ  ಎಂದು ಪೊಲೀಸರು ತಿಳಿಸಿದ್ದಾರೆ.
ಮಾಹಿತಿ ಪಡೆದ ಕಾಂತಿ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ.

ಪ್ರೇಮ ಸಂಬಂಧದ ಕಾರಣಕ್ಕೆ ಬಾಲಕನನ್ನು ಕೊಲ್ಲಲಾಗಿದೆ ಎಂದು ಮೆಲ್ನೋಟಕ್ಕೆ ಕಂಡುಬಂದಿದೆ. ಬಾಲಕನ್ನು ನಿರ್ದಯವಾಗಿ ಥಳಿಸಲಾಯಿತು ಹಾಗೂ ಆತನ  ಜನನಾಂಗವನ್ನು ಕತ್ತರಿಸಲಾಯಿತು. ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದ್ದು, ವರದಿ ಬಂದ ನಂತರ ಗಾಯಗಳ ಬಗ್ಗೆ ಹೆಚ್ಚಿನ ವಿವರಗಳು ಬಹಿರಂಗಗೊಳ್ಳಲಿವೆ. ಪ್ರಕರಣಕ್ಕೆ ಸಂಬಂಧಿಸಿ ಸುಶಾಂತ್ ಪಾಂಡೆಯನ್ನು ಬಂಧಿಸಲಾಗಿದೆ ಎಂದು ಮುಝಾಫ್ಫರ್ ಪುರ ಪೊಲೀಸ್ ಅಧೀಕ್ಷಕ ರಾಜೇಶ್ ಕುಮಾರ್ ಸುದ್ದಿಸಂಸ್ಥೆ ANI ಗೆ ತಿಳಿಸಿದ್ದಾರೆ.

ಯುವಕನ ಹತ್ಯೆಯಿಂದ ಆಕ್ರೋಶಗೊಂಡ ಆತನ ಕುಟುಂಬ ಹಾಗೂ  ಸಂಬಂಧಿಕರು ಶಂಕಿತ ಆರೋಪಿ ಸುಶಾಂತ್ ಪಾಂಡೆ ಮನೆಯ ಮೇಲೆ ದಾಳಿ ನಡೆಸಿದ್ದು, , ಶನಿವಾರ ಪಾಂಡೆ ಮನೆಯ ಎದುರುಗಡೆ ಅಂತ್ಯಕ್ರಿಯೆಯನ್ನು ಸಹ ನಡೆಸಲಾಗಿದೆ. ಮನೆ ಮೇಲೆ ದಾಳಿ ನಡೆಸಿದ್ದಕ್ಕೆ ಮೂವರನ್ನು ಬಂಧಿಸಲಾಗಿದ್ದು, ಘಟನೆಯ ಬಳಿಕ ಹಳ್ಳಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನೆಲೆಸಿದೆ. ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಗ್ರಾಮದಲ್ಲಿ ಗಸ್ತು ನಡೆಸುತ್ತಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News