ಮಾಜಿ ಬ್ಯಾಂಕ್ ಮ್ಯಾನೇಜರ್ ನಿಂದ ಮಹಾರಾಷ್ಟ್ರದ ಪಾಲ್ಘರ್ ನಲ್ಲಿ ಹಾಲಿ ಮಹಿಳಾ ಮ್ಯಾನೇಜರ್ ಬರ್ಬರ ಹತ್ಯೆ

Update: 2021-07-30 12:19 GMT

ಪಾಲ್ಘರ್: ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ವಿರಾರ್‍ನಲ್ಲಿರುವ ಐಸಿಐಸಿಐ ಬ್ಯಾಂಕ್ ಶಾಖೆಯಲ್ಲಿ ಗುರುವಾರ ರಾತ್ರಿ ಇಬ್ಬರು ವ್ಯಕ್ತಿಗಳು ನಡೆಸಿದ ದಾಳಿಯಲ್ಲಿ  ಅಲ್ಲಿನ ಮಹಿಳಾ ಮ್ಯಾನೇಜರ್ ಮೃತಪಟ್ಟರೆ ಇನ್ನೊಬ್ಬ ಮಹಿಳಾ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ದುಷ್ಕರ್ಮಿಗಳ ಪೈಕಿ ಒಬ್ಬ ಅದೇ ಶಾಖೆಯಲ್ಲಿ ಈ ಹಿಂದೆ ಮ್ಯಾನೇಜರ್ ಆಗಿದ್ದಾನೆಂದು ತಿಳಿದು ಬಂದಿದೆ. ಶಾಖೆಯಿಂದ ರೂ 1 ಕೋಟಿ ಸಾಲ ಪಡೆದಿದ್ದ ಆತ ಸಾಲ ತೀರಿಸಲಾಗಿದೆ ತಾನು ಹಿಂದೆ ಉದ್ಯೋಗದಲ್ಲಿದ್ದ ಶಾಖೆಯಿಂದಲೇ ಹಣ ಲೂಟಿಗೈಯ್ಯುವ ಯತ್ನದಲ್ಲಿ ಅಲ್ಲಿನ ಮ್ಯಾನೇಜರ್ ಅನ್ನು ಇರಿದು ಸಾಯಿಸಿದ್ದಾರೆ.

ಘಟನೆ ಸುಮಾರು 8.30ಕ್ಕೆ ನಡೆದಿದೆ. ಆ ಸಂದರ್ಭ ಬ್ಯಾಂಕಿನಲ್ಲಿ ಸಹಾಯಕ ಮ್ಯಾನೇಜರ್ ಯೋಗಿತಾ ವರ್ತಕ್ ಹಾಗೂ ಕ್ಯಾಶಿಯರ್ ಶ್ರದ್ಧಾ ದೇವರುಕ್ಕರ್ ಮಾತ್ರ ಕೆಲಸ ಮಾಡುತ್ತಿದ್ದರು.

ಆಗ ಅಲ್ಲಿಗೆ ಪ್ರವೇಶಿಸಿದ ಆರೋಪಿ ಅನಿಲ್ ದುಬೆ ಹಾಗೂ ಇನೊಬ್ಬಾತ ಚೂರಿ ತೋರಿಸಿ ಅಲ್ಲಿದ್ದ ನಗದು ಹಾಗೂ ಚಿನ್ನಾಭರಣಗಳನ್ನು ನೀಡುವಂತೆ  ಬೆದರಿಸಿದ್ದರು. ಇಬ್ಬರೂ ಇನ್ನೇನು ಅಲ್ಲಿಂದ ಪರಾರಿಯಾಗಬೇಕೆನ್ನುವಷ್ಟರಲ್ಲಿ ಇಬ್ಬರು ಮಹಿಳಾ ಸಿಬ್ಬಂದಿಗಳು ಬೊಬ್ಬೆ ಹಾಕಿದ್ದರು. ಇದರಿಂದ ಬೆದರಿದ ಆರೋಪಿಗಳು ಇಬ್ಬರಿಗೂ ಇರಿದಿದ್ದರು. ಅನಿಲ್ ದುಬೆಯನ್ನು ಸ್ಥಳೀಯರು ಬೆಂಬತ್ತಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಇನ್ನೊಬ್ಬಾತ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.

ರಕ್ತದ ಮಡುವಿನಲ್ಲಿ ಬಿದ್ದಿದ್ದ ಇಬ್ಬರು ಮಹಿಳಾ ಸಿಬ್ಬಂದಿಗಳನ್ನೂ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ವರ್ತಕ್ ಅಲ್ಲಿ ಕೊನೆಯುಸಿರೆಳೆದಿದ್ದಾರೆ.

ಆರೋಪಿ ದುಬೆ ಈಗ ಬೇರೊಂದು ಖಾಸಗಿ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದನೆಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News