ಭಗತ್ ಸಿಂಗ್ ನಂತೆ ಗಲ್ಲಿಗೇರಿಸುವ ದೃಶ್ಯದಲ್ಲಿ ನಟಿಸುತ್ತಿದ್ದ ಸಂದರ್ಭ ಬಾಲಕ ಸಾವು

Update: 2021-07-31 17:17 GMT

ಬದೌನ್, ಜು. 30: ಸ್ವಾತಂತ್ರ ದಿನಾಚರಣೆಯಂದು ನಾಟಕ ಪ್ರದರ್ಶಿಸುವ ಹಿನ್ನೆಲೆಯಲ್ಲಿ ಸ್ವಾತಂತ್ರ ಹೋರಾಟಗಾರ ಭಗತ್ ಸಿಂಗ್ ಅವರನ್ನು ನೇಣಿಗೆ ಹಾಕುವ ದೃಶ್ಯದ ರಿಹರ್ಸಲ್ ಮಾಡುತ್ತಿದ ಸಂದರ್ಭ 10 ವರ್ಷದ ಬಾಲಕ ಆಕಸ್ಮಿಕವಾಗಿ ಮೃತಪಟ್ಟ ಘಟನೆ ಉತ್ತರಪ್ರದೇಶದ ಬದೌನ್ನಲ್ಲಿ ನಡೆದಿದೆ.

ಈ ಘಟನೆ ಗುರುವಾರ ನಡೆದಿದ್ದು, ಕುಟುಂಬಿಕರು ಪೊಲೀಸರಿಗೆ ಮಾಹಿತಿ ನೀಡದೆ ಬಾಲಕನ ಮೃತದೇಹದ ಅಂತ್ಯಕ್ರಿಯೆ ನಡೆಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಬದೌನ್ ಜಿಲ್ಲೆಯ ಕುನ್ವಾರ್ಗಾಂವ್ ಪೊಲೀಸ್ ಠಾಣಾ ವ್ಯಾಪ್ತಿಯ ಬಾಬತ್ ಗ್ರಾಮದ ನಿವಾಸಿ ಹಾಗೂ ಭುರೆ ಸಿಂಗ್ ಅವರ ಪುತ್ರ ಶಿವಂ ಇತರ ಮಕ್ಕಳೊಂದಿಗೆ ನಾಟಕದ ರಿಹರ್ಸಲ್ ಮಾಡುತ್ತಿದ್ದ ಸಂದರ್ಭ ಈ ಘಟನೆ ನಡೆದಿದೆ. ಬಾಲಕ ಭಗತ್ ಸಿಂಗ್ನನ್ನು ನೇಣಿಗೆ ಹಾಕುವ ದೃಶ್ಯವನ್ನು ಅಭಿನಯಿಸುತ್ತಿದ್ದ. ಸ್ಟೂಲ್ ಮೇಲೆ ನಿಂತು ನೇಣು ಹಗ್ಗವನ್ನು ತನ್ನ ಕುತ್ತಿಗೆಗೆ ಹಾಕಿಕೊಂಡಿದ್ದ. ಈ ಸಂದರ್ಭ ಆತ ಸ್ಟೂಲ್ನಿಂದ ಜಾರಿದ್ದಾನೆ. ಇದರಿಂದ ಗಾಬರಿಗೊಂಡ ಇತ ಮಕ್ಕಳು ಸ್ಥಳೀಯರನ್ನು ಕರೆದಿದ್ದಾರೆ.

ಕೂಡಲೇ ಧಾವಿಸಿದ ಸ್ಥಳೀಯರು ಹಗ್ಗ ಕತ್ತರಿಸಿ ಬಾಲಕನನ್ನು ಕೆಳಗೆ ಇಳಿಸಿದ್ದಾರೆ. ಆದರೆ, ಆತ ಅನಂತರ ಸಾವನ್ನಪ್ಪಿದ್ದಾನೆ ಎಂದು ಅವರು ತಿಳಿಸಿದ್ದಾರೆ. ಕುನ್ವಾರ್ಗಾಂವ್ ಪೊಲೀಸ್ ಠಾಣೆಯ ಎಸ್ಎಚ್ಒ ನೇತೃತ್ವದ ತಂಡವನ್ನು ನಾವು ಶುಕ್ರವಾರ ಗ್ರಾಮಕ್ಕೆ ಕಳುಹಿಸಿದ್ದೆವು. ಆದರೆ, ಬಾಲಕ ಹೇಗೆ ಸಾವನ್ನಪ್ಪಿದ್ದಾನೆ ಎಂಬ ಮಾಹಿತಿಯನ್ನು ನೀಡಲು ಕುಟುಂಬ ನಿರಾಕರಿಸಿದೆ. ನಾವು ಈ ಪ್ರಕರಣದ ತನಿಖೆ ಮುಂದುವರಿಸಿದ್ದೇವೆ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News