2018ರಿಂದ 348 ಮಂದಿಯ ಕಸ್ಟಡಿ ಸಾವು: ಗೃಹ ಸಚಿವಾಲಯ ಮಾಹಿತಿ

Update: 2021-08-03 17:26 GMT

ಹೊಸದಿಲ್ಲಿ, ಆ.3: 2018-2019 ಮತ್ತು 2020-21ರ ಮಧ್ಯದ ಅವಧಿಯಲ್ಲಿ ದೇಶಾದ್ಯಂತ ಪೊಲೀಸ್ ಕಸ್ಟಡಿಯಲ್ಲಿ ಸುಮಾರು 348 ಮಂದಿ ಸಾವನ್ನಪ್ಪಿದ್ದು ಹಾಗೂ 1189 ಮಂದಿ ದೌರ್ಜನ್ಯಕ್ಕೊಳಗಾಗಿದ್ದಾರೆಂದು ಕೇಂದ್ರ ಗೃಹ ಸಚಿವಾಲಯವು ಮಂಗಳವಾರ ಲೋಕಸಭೆಗೆ ತಿಳಿಸಿದೆ.

ರಾಷ್ಟ್ರೀಯ ಮಾನವಹಕ್ಕುಗಳ ಆಯೋಗಕ್ಕೆ (ಎನ್ಎಚ್ಆರ್ಸಿ) ಲಭ್ಯವಾಗಿರುವ ಮಾಹಿತಿ ಪ್ರಕಾರ 2020-21ನೇ ಅವಧಿಯಲ್ಲಿ ಪೊಲೀಸ್ ಕಸ್ಟಡಿಯಲ್ಲಿ 100 ಮಂದಿ ಸಾವನ್ನಪ್ಪಿದ್ದಾರೆ ಹಾಗೂ ಕಸ್ಟಡಿ ದೌರ್ಜನ್ಯದ 236 ಪ್ರಕರಣಗಳು ವರದಿಯಾಗಿವೆ ಎಂದು ಕೇಂದ್ರ ಸಹಾಯಕ ಗೃಹ ಸಚಿವ ನಿತ್ಯಾನಂದ ರಾಯ್ ಅವರು ಅವರು  ಲಿಖಿತ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ತಿಳಿಸಿದರು.
 
ತಮಿಳುನಾಡಿನ ಶಿವಗಂಗಾ ಕ್ಷೇತ್ರದ ಸಂಸದ ಕಾರ್ತಿ ಚಿದಂಬರಂ ಕೋವಿಡ್ ಲಾಕ್‌ ಡೌನ್ ಅನುಷ್ಠಾನದ ಸಂದರ್ಭದಲ್ಲಿ ನಾಗರಿಕರ ವಿರುದ್ಧ ನಡೆದಿರುವ ಪೊಲೀಸ್ ಹಿಂಸಾಚಾರಕ್ಕೆ ಸಂಬಂಧಿಸಿ ಪ್ರಶ್ನೆಯೊಂದನ್ನು ಕೇಳಿದ್ದರು. ಇದಕ್ಕುತ್ತರಿಸಿದ ರಾಯ್ ಅವರು ಪೊಲೀಸ್ ಇಲಾಖೆ ಹಾಗೂ ಸಾರ್ವಜನಿಕ ಸುವ್ಯವಸ್ಥೆಯು ಸಂವಿಧಾನದ ಏಳನೇ ಪರಿಚ್ಚೇದದ ಪ್ರಕಾರ ರಾಜ್ಯಕ್ಕೆ ಸಂಬಂಧಿಸಿದ ವಿಷಯಗಳಾಗಿವೆ. ಅಪರಾಧ ಪ್ರಕರಣಗಳ ದಾಖಲೀಕರಣ ಹಾಗೂ ತನಿಖೆ,, ಆರೋಪಿಗಳ ವಿಚಾರಣ್ಷೆ, ಜೀವ ಹಾಗೂ ಆಸ್ತಿಯ ರಕ್ಷಣೆ ಸೇರಿದಂತೆ ಕಾನೂನು ಸುವ್ಯವಸ್ಥೆಯ ಪಾಲನೆಯು ಆಯಾ ರಾಜ್ಯ ಸರಕಾರಗಳ ಸುಪರ್ದಿಯಲ್ಲಿರುತ್ತದೆ ಎಂದರು.

3 ವರ್ಷಗಳಲ್ಲಿ 93 ಸಾವಿರ ಸೈಬರ್ ಅಪರಾಧ ಪ್ರಕರಣ:

2017 ಹಾಗೂ 2019ರ ನಡುವೆ ದೇಶದಲ್ಲಿ 93 ಸಾವಿರಕ್ಕೂ ಅಧಿಕ ಸೈಬರ್ ಅಪರಾಧದ ಪ್ರಕರಣಗಳು ದಾಖಲಾಗಿರುವುದಾಗಿ ಕೇಂದ್ರ ಸರಕಾರವು ಮಂಗಳವಾರ ಲೋಕಸಭೆಯಲ್ಲಿ ತಿಳಿಸಿದೆ.

ಇದೇ ಅವಧಿಯಲ್ಲಿ ದೇಶದಲ್ಲಿ ಸೈಬರ್ ಭಯೋತ್ಪಾದನೆಯ 46 ಪ್ರಕರಣಗಳು ವರದಿಯಾಗಿದ್ದು ಮಾಹಿತಿತಂತ್ರಜ್ಞಾನ ಕಾಯ್ದೆ 2000 ಇದರ ಸೆಕ್ಷನ್ 66 ಎಫ್ನಡಿ ಎಫ್ಐಆರ್ಗಳನ್ನು ದಾಖಲಿಸಲಾಗಿದೆ ಎಂದು ಕೇಂದ್ರ ಸಹಾಯಕ ಗೃಹ ಸಚಿವ ನಿತ್ಯಾನಂದ ರಾಯ್ ತಿಳಿಸಿದ್ದಾರೆ
 
2017,2018 ಹಾಗೂ 2019ರಲ್ಲಿ ಕ್ರಮವಾಗಿ 21,796, 27, 248 ಮತ್ತು 44546 ಪ್ರಕರಣಗಳು ದಾಖಲಾಗಿವೆ ಎಂದು ನಿತ್ಯಾನಂದ ರಾಯ್ ಅವರು ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ಭಾರತೀಯ ಕಂಪ್ಯೂಟರ್ ತರ್ತು ಪ್ರತಿಕ್ರಿಯಾ ತಂಡ ವು (ಸಿಇಆಪರ್ಟಿ-ಇನ್)ಸೈಬರ್ ಭದ್ರತೆಗೆ ಸಂಬಂಧಿಸಿದ ಘಟನೆಗಳನ್ನು ನಿಭಾಯಿಸುತ್ತಿರುವುದಾಗಿ ತಿಳಿಸಿದರು.
 
ಸೈಬರ್ ಭದ್ರತೆಗೆ ಸಂಬಂಧಿಸಿದ ಯಾವುದೇ ಘಟನೆಯು ಸಿಇಆರ್ಟಿ-ಇನ್ನ ಗಮನಕ್ಕೆ ಬಂದಲ್ಲಿ ಕೂಡಲೇ ಅದು ಸಂಬಂಧಪಟ್ಟ ಹಾಗೂ ವಿಭಾಗೀಯ ಕಂಪ್ಯೂಟರ್ ತುರ್ತು ಪ್ರಕ್ರಿಯಾ ತಂಡ (ಸಿಇಆರ್ಟಿ)ಗಳಿಗೆ ಸೂಕ್ತ ಕ್ರಮ ಕೈಗೊಳ್ಳಲು ಎಚ್ಚರಿಕೆ ಹಾಗೂ ಸಲಹೆಗಳನ್ನ ನೀಡುತ್ತದೆ ಎಂದು ರಾಯ್ ಸದನಕ್ಕೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News