ಚೆನ್ನೈ: ನಡು ಮಧ್ಯಾಹ್ನ ರೈಲ್ವೆ ನಿಲ್ದಾಣದ ಬಳಿ ವಿದ್ಯಾರ್ಥಿನಿಯ ಕತ್ತು ಸೀಳಿ ಕೊಲೆಗೈದ ಯುವಕ !

Update: 2021-09-23 15:15 GMT
Photo: Thenewsminute

ಚೆನ್ನೈ: ಇಲ್ಲಿನ ತಾಂಬರಂ ರೈಲ್ವೆ ನಿಲ್ದಾಣದ ಬಳಿ ಯುವಕನೋರ್ವ ವಿದ್ಯಾರ್ಥಿನಿಯ ಕತ್ತು ಸೀಳಿ ಕೊಲೆಗೈದ ಆಘಾತಕಾರಿ ಘಟನೆ ನಡೆದಿದೆ. ಗುರುವಾರ ಮಧ್ಯಾಹ್ನ ಘಟನೆ ನಡೆದಿದ್ದು, ಯುವತಿಗೆ ಚಾಕುವಿನಿಂದ ಇರಿದ ಬಳಿಕ ಸ್ವತಃ ಕತ್ತು ಸೀಳಲು ಮುಂದಾಗಿದ್ದ ಯುವಕನನ್ನು ನೆರೆದಿದ್ದ ಜನರು ತಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ತಿಳಿದು ಬಂದಿದೆ.

ಮೃತ ವಿದ್ಯಾರ್ಥಿನಿಯನ್ನು ಮದ್ರಾಸ್‌ ಕ್ರಿಶ್ಚಿಯನ್‌ ಕಾಲೇಜ್‌ ನಲ್ಲಿ ಸ್ಕೂಲ್ ಆಫ್ ಕಂಟಿನ್ಯೂಯಿಂಗ್ ಎಜುಕೇಶನ್‌ನಲ್ಲಿ ಡಿಪ್ಲೊಮಾ ಇನ್ ಮೆಡಿಕಲ್ ಲ್ಯಾಬೋರೇಟರಿ ಟೆಕ್ನಾಲಜಿ (ಡಿಎಂಎಲ್‌ಟಿ) ಎರಡನೇ ವರ್ಷ ವ್ಯಾಸಂಗ ಮಾಡುತ್ತಿರುವ ಕ್ರೋಮ್‌ ಪೇಟ್‌ ನಿವಾಸಿ ಶ್ವೇತಾ (23) ಎಂದು ಗುರುತಿಸಲಾಗಿದೆ. 

ನಾಗಪಟ್ಟಣಂ ಜಿಲ್ಲೆಯ ತಿರುಕ್ಕುವಲೈ ಮೂಲದ ರಾಮಚಂದ್ರನ್‌ (25) ಎಂಬಾತ ಕಾರ್‌ ತಯಾರಿಕಾ ಘಟನದಲ್ಲಿ ಕೆಲಸ ಮಾಡುತ್ತಿದ್ದು, ಇವರಿಬ್ಬರೂ 3 ವರ್ಷಗಳಿಂದ ಪರಿಚಿತರಾಗಿದ್ದರು ಎನ್ನಲಾಗಿದೆ. ರಾಮಚಂದ್ರನ್‌ ಮಧ್ಯಾಹ್ನ ಶ್ವೇತಾಳನ್ನು ಭೇಟಿ ಮಾಡಲು ತಾಂಬರಂ ತಲುಪಿದ್ದು, ಮಾತುಕತೆ ತಾರಕಕ್ಕೇರುತ್ತಿದ್ದಂತೆಯೇ ಇಬ್ಬರೂ ಜಗಳವಾಡಲು ಪ್ರಾರಂಭಿಸಿದ್ದು, ಕೂಡಲೇ ರಾಮಚಂದ್ರನ್‌ ತನ್ನ ಜೇಬಿನಲ್ಲಿ ಬಚ್ಚಿಟ್ಟಿದ್ದ ಚಾಕುವಿನಿಂದ ಯುವತಿಯ ಕತ್ತು ಸೀಳಿದ್ದಾನೆ. ಬಳಿಕ ತನ್ನ ಕತ್ತನ್ನೂ ಸೀಳಲು ಯತ್ನಿಸಿದಾಗ ಸಾರ್ವಜನಿಕರು ಆತನನ್ನು ತಡೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ತೀವ್ರ ರಕ್ತಸ್ರಾವವಾಗಿದ್ದ ಶ್ವೇತಾಳನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಿದರೂ ಆಕೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ. ಈ ನಡುವೆ ಆತ್ಮಹತ್ಯಾ ಪ್ರಯತ್ನ ನಡೆಸಿದ್ದ ರಾಮಚಂದ್ರನ್‌ ನನ್ನು ರಾಜೀವ್‌ ಗಾಂಧಿ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸೇಲಯೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News