ಸಿರಿಯಾದ ಶಿಬಿರಗಳಲ್ಲಿರುವ ಮಕ್ಕಳಲ್ಲಿ ನಿಶ್ಯಕ್ತಿಯ ಸಮಸ್ಯೆ: ಎನ್ ಜಿ ಒ ಸಂಘಟನೆ ಎಚ್ಚರಿಕೆ

Update: 2021-09-23 17:17 GMT

ಬೈರೂತ್, ಸೆ.23: ವ್ಯಾಪಕ ಹಿಂಸಾಚಾರ ಮತ್ತು ಭೀತಿಯ ನಡುವೆ ಈಶಾನ್ಯ ಸಿರಿಯಾದ 2 ನಿರಾಶ್ರಿತರ ಶಿಬಿರಗಳಲ್ಲಿ ಸಾವಿರಾರು ಮಕ್ಕಳು ನಿತ್ರಾಣಗೊಂಡಿದ್ದು ನಿಶ್ಯಕ್ತಿಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ವಿದೇಶಿ ಸರಕಾರಗಳು ಈ ಶಿಬಿರಗಳಲ್ಲಿ ನೆಲೆಸಿರುವ ತಮ್ಮ ಪ್ರಜೆಗಳನ್ನು ವಾಪಾಸು ಕರೆಸಿಕೊಳ್ಳುವ ಅಗತ್ಯ ಈ ಹಿಂದಿಗಿಂತಲೂ ಈಗ ಹೆಚ್ಚಿದೆ ಎಂದು ‘ಸೇವ್ ದಿ ಚಿಲ್ಡ್ರನ್’ ಸಂಘಟನೆಯ ವರದಿ ಹೇಳಿದೆ. ‌

ಈಶಾನ್ಯ ಸಿರಿಯಾದ ಅಲ್ಹೊಲ್ ಮತ್ತು ರೋಜ್ ಶಿಬಿರಗಳಲ್ಲಿ ಜೀವನ ಸ್ಥಿತಿ ಹದಗೆಡುತ್ತಿದ್ದು ಶಿಕ್ಷಣಕ್ಕೆ ಹೆಚ್ಚಿನ ಅವಕಾಶದ ಕೊರತೆ, ಬಾಲಕಾರ್ಮಿಕ ಸಮಸ್ಯೆ ಹೆಚ್ಚಳ , ಹಿಂಸಾಚಾರ ಮತ್ತು ಕೊಲೆಯಂತಹ ಅಪರಾಧ ಪ್ರಕರಣ ಉಲ್ಬಣಗೊಂಡಿದೆ. ಈ ಶಿಬಿರಗಳಲ್ಲಿರುವ ಮಕ್ಕಳು ಪ್ರತೀ ದಿನ ಅನುಭವಿಸುವ ಹಿಂಸೆಯ ಪ್ರಮಾಣ, ಯಾತನೆ, ಆಘಾತ ಅಪಾರವಾಗಿದೆ ಎಂದು ಗುರುವಾರ ಪ್ರಕಟವಾದ ‘ನಾನು ಯಾವಾಗ ಬದುಕಲು ಆರಂಭಿಸುವೆ ?’ ಎಂಬ ಶೀರ್ಷಿಕೆಯ ವರದಿ ಎಚ್ಚರಿಸಿದೆ. 

ಈ ಶಿಬಿರಗಳಲ್ಲಿ ನೆಲೆಸಿರುವ ಸುಮಾರು 60 ಸಾವಿರ ಜನರಲ್ಲಿ ಮೂರನೇ ಎರಡರಷ್ಟು ಮಕ್ಕಳು. ಬಹುತೇಕ ಮಕ್ಕಳು ಪೋಷಕರಿಲ್ಲದೆ ಏಕಾಂಗಿಯಾಗಿದ್ದಾರೆ. ಈ ಶಿಬಿರಗಳಲ್ಲಿ ಅಡುಗೆ ಮಾಡಲು ಹೀಟರ್ ಅಥವಾ ಸ್ಟವ್ಗಳನ್ನು ಹೆಚ್ಚಾಗಿ ಬಳಸುತ್ತಾರೆ. ಆದ್ದರಿಂದ ಅಗ್ನಿ ಅನಾಹುತದ ಪ್ರಕರಣಗಳೂ ಹೆಚ್ಚಿವೆ. ಶಿಬಿರದಲ್ಲಿ ಮೃತಪಡುವ ಮಕ್ಕಳಲ್ಲಿ ಹೆಚ್ಚಿನ ಮಕ್ಕಳ ಸಾವಿಗೆ ಬೆಂಕಿ ಅನಾಹುತ ಕಾರಣವಾಗಿದೆ. ಕೊಲೆ, ಲೈಂಗಿಕ ದೌರ್ಜನ್ಯ ಹಾಗೂ ಇತರ ಅಪರಾಧ ಕೃತ್ಯಗಳೂ ಮಕ್ಕಳ ವಿರುದ್ಧ ನಡೆಯುತ್ತವೆ. 

ಇಲ್ಲಿ ಪ್ರತಿನಿತ್ಯ ಜಗಳ, ಘರ್ಷಣೆ ಸಾಮಾನ್ಯವಾಗಿದೆ. ಜಗಳವಾಡುವುದು ಕೇಳಿದೊಡನೆ ನನ್ನ ಕಿವಿಯನ್ನು ಮುಚ್ಚಿಕೊಳ್ಳುತ್ತೇನೆ. ಜಗಳದ ಸಂದರ್ಭ ಎರಡೂ ಕಡೆಯವರು ಚೂರಿ, ಕತ್ತಿ ಹಿಡಿದಿರುವುದರಿಂದ ತಾಯಿಯನ್ನು ಹೊರಗೆ ಹೋಗಲೂ ಬಿಡುವುದಿಲ್ಲ. ನಿನ್ನ ತಲೆ ಕಡಿಯುತ್ತೇನೆ, ಮುಖವನ್ನು ಸಿಗಿದು ಬಿಡುತ್ತೇನೆ ಎಂಬ ಪರಸ್ಪರ ಬೆದರಿಕೆ, ಎಚ್ಚರಿಕೆಯ ಮಾತು ಕೇಳಿ ಕೇಳಿ ಸಾಕಾಗಿದೆ. ಇಲ್ಲಿರಲು ಹೆದರಿಕೆಯಾಗುತ್ತಿದೆ ಎಂದು ಟರ್ಕಿಯ 10 ವರ್ಷದ ಬಾಲಕಿ ಬುಶ್ರಾ ಹೇಳಿರುವುದಾಗಿ ‘ಸೇವ್ ದಿ ಚಿಲ್ಡ್ರನ್’ ವರದಿ ಮಾಡಿದೆ. 

ಈಶಾನ್ಯ ಸಿರಿಯಾದ ಕುರ್ಡಿಶ್ ನೇತೃತ್ವದ ಆಡಳಿತ ವ್ಯಾಪ್ತಿಯಲ್ಲಿರುವ ಈ ಶಿಬಿರಗಳಲ್ಲಿ ನೆಲೆಸಿರುವವರಲ್ಲಿ ಹೆಚ್ಚಿನವರು ಐಸಿಸ್ ಗುಂಪಿನ ನಿಯಂತ್ರಣದಲ್ಲಿರುವ ಪ್ರದೇಶದಿಂದ ಓಡಿಬಂದವರು. ಅಂತರಾಷ್ಟ್ರೀಯ ಮೈತ್ರಿಪಡೆಯ ಸೇನಾ ಕಾರ್ಯಾಚರಣೆಯ ಸಂದರ್ಭ ಮನೆಮಠ ತೊರೆದು ಓಡಿ ಬಂದವರೂ ಇಲ್ಲಿದ್ದಾರೆ. ಸಿರಿಯಾ ಮತ್ತು ಇರಾಕ್ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದರೆ, ಸುಮಾರು 60 ದೇಶದ ನಾಗರಿಕರೂ ಇಲ್ಲಿ ಆಶ್ರಯ ಪಡೆದಿದ್ದಾರೆ. ಶ್ರೀಮಂತ ದೇಶಗಳು ತಮ್ಮ ಪ್ರಜೆಗಳನ್ನು(ವಿಶೇಷವಾಗಿ ಮಕ್ಕಳು) ಮರಳಿ ಕರೆಸಿಕೊಳ್ಳುವ ಅಂತರಾಷ್ಟ್ರೀಯ ನಿಯಮದ ಬದ್ಧತೆಯನ್ನು ಕಡೆಗಣಿಸಿವೆ ಎಂದು ವರದಿ ಉಲ್ಲೇಖಿಸಿದೆ. ಶಿ

ಬಿರದಲ್ಲಿರುವವರಲ್ಲಿ 36% ಕಝಕಿಸ್ತಾನದ ಪ್ರಜೆಗಳು, ಬ್ರಿಟನ್, ನಾರ್ವೆ, ಕೆನಡಾ, ಆಸ್ಟ್ರೇಲಿಯಾ ಮತ್ತು ಅಮೆರಿಕಾದವರನ್ನು ಒಟ್ಟುಗೂಡಿಸಿದರೆ ಸುಮಾರು 12% ಜನರಿದ್ದಾರೆ. ಬ್ರಿಟನ್ ಇಲ್ಲಿಂದ 4 ಮಕ್ಕಳನ್ನು ವಾಪಾಸು ಕರೆಸಿಕೊಂಡಿದ್ದರೆ ಇನ್ನೂ 60 ಮಕ್ಕಳು ಉಳಿದುಕೊಂಡಿದ್ದಾರೆ. ಫ್ರಾನ್ಸ್ 35 ಮಕ್ಕಳನ್ನು ವಾಪಾಸು ಕರೆಸಿಕೊಂಡಿದ್ದು ಇನ್ನೂ 350 ಮಕ್ಕಳು ಉಳಿದಿದ್ದಾರೆ. 2017ರಿಂದ 1,163 ಮಕ್ಕಳು ತಮ್ಮ ದೇಶಕ್ಕೆ ಮರಳಿದ್ದರೆ ಈ ವರ್ಷ ಕೇವಲ 14 ಮಕ್ಕಳು ಮಾತ್ರ ತಾಂಯ್ನೆಡಿಗೆ ಮರಳಿದ್ದಾರೆ ಎಂದು ವರದಿ ಹೇಳಿದೆ. ಈ ಶಿಬಿರಗಳಲ್ಲಿರುವ ಮಕ್ಕಳು ಹಾಗೂ ನಿವಾಸಿಗಳು ಭೀತಿ ಮತ್ತು ಆತಂಕದ ಪರಿಸ್ಥಿತಿಯಲ್ಲಿ ದಿನ ಕಳೆಯುತ್ತಿದ್ದಾರೆ. ಇವರಿಗೆ ಭದ್ರತೆ ಎಂಬುದು ಬಹುತೇಕ ಇಲ್ಲವಾಗಿದೆ. ದಿನಂಪ್ರತಿ ಹತ್ಯೆ ನಡೆಯುತ್ತಲೇ ಇರುತ್ತದೆ. ಇಲ್ಲಿರುವವರು ಅಪಾಯದಲ್ಲಿ ದಿನ ಕಳೆಯಬೇಕಿದೆ ಎಂದು ಡಾಕ್ಟರ್ಸ್ ವಿತೌಟ್ ಬಾರ್ಡರ್ನ ಸಲಹೆಗಾರ್ತಿ ಪಾಲಿನ್ ಲೆಂಗ್ಲಾರ್ಟ್ ಹೇಳಿರುವುದಾಗಿ ಅಲ್ ಜಝೀರಾ ವರದಿ ಮಾಡಿದೆ. ಈ ಶಿಬಿರಗಳಲ್ಲಿನ ಮಕ್ಕಳಿಗೆ ಶಿಕ್ಷಣ ಒದಗಿಸಲು ತೆರೆದಿರುವ ಕೇಂದ್ರಕ್ಕೆ ನುಗ್ಗಿದ ಕೆಲ ಸಶಸ್ತ್ರಧಾರಿಗಳು ಹಣಕ್ಕೆ ಬೇಡಿಕೆ ಮುಂದಿರಿಸಿ ಸಿಬಂದಿಗಳಿಗೆ ಜೀವಬೆದರಿಕೆ ಒಡ್ಡಿದ್ದಾರೆ . ನಮ್ಮ ಸಿಬ್ಬಂದಿಯಲ್ಲದೆ, ಶಿಕ್ಷಣ ಪಡೆಯುತ್ತಿರ ಮಕ್ಕಳಿಗೂ ಈ ರೀತಿಯ ಬೆದರಿಕೆ ಒಡ್ಡಿರುವುದು ಖಂಡನೀಯ ಎಂದು ಎಂದು ನಾರ್ವೆ ನಿರಾಶ್ರಿತರ ಸಮಿತಿ ಹೇಳಿದೆ. 

ಬಂಧನ ಕೇಂದ್ರ

ನಿರಾಶ್ರಿತರ ಶಿಬಿರವನ್ನು ಬಂಧನ ಕೇಂದ್ರವನ್ನಾಗಿ ಬಳಸುತ್ತಿರುವ ಬಗ್ಗೆಯೂ ಅಂತರಾಷ್ಟ್ರೀಯ ಮಾನವ ಹಕ್ಕು ಸಂಘಟನೆಗಳು ಆತಂಕ ವ್ಯಕ್ತಪಡಿಸಿವೆ. ಐಸಿಸ್ನೊಂದಿಗೆ ಸಂಪರ್ಕದಲ್ಲಿದ್ದರು ಎಂದು ಆರೋಪಿಸಲಾದ ಕೆಲವು ಪುರುಷರು ಹಾಗೂ ಬಾಲಕರನ್ನು ಈ ಶಿಬಿರಗಳಲ್ಲಿ ಬಂಧನದಲ್ಲಿಡಲಾಗಿದೆ ಎಂದು ಸಂಘಟನೆ ಹೇಳಿದೆ. ಈ ಶಿಬಿರಗಳಲ್ಲಿ ನೆಲೆಸಿರುವ ಮಕ್ಕಳು ಹಾಗೂ ಇತರ ನಿವಾಸಿಗಳ ಯೋಗಕ್ಷೇಮದ ಬಗ್ಗೆ ಇತರ ಸಂಘಟನೆಗಳೂ ತೀವ್ರ ಕಳವಳ ವ್ಯಕ್ತಪಡಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News