ಕಾಂಗ್ರೆಸ್ ಪಕ್ಷ ಸೇರಿದ ಕನ್ಹಯ್ಯ, ಜಿಗ್ನೇಶ್ ಬಾಹ್ಯ ಬೆಂಬಲ

Update: 2021-09-28 18:34 GMT
Photo: Twitter

ಹೊಸದಿಲ್ಲಿ, ಸೆ.28: ಭಾರತೀಯ ಕಮ್ಯೂನಿಸ್ಟ್ ಪಕ್ಷದ ನಾಯಕ ಕನ್ಹಯ್ಯ್ ಕುಮಾರ್ ಅವರು ಮಂಗಳವಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಗುಜರಾತ್ ಶಾಸಕ ಜಿಗ್ನೇಶ್ ಮೆವಾನಿ ಅವರು ತಾಂತ್ರಿಕ ಕಾರಣಗಳಿಂದಾಗಿ ಕಾಂಗ್ರೆಸ್ ಗೆ ಸೇರ್ಪಡೆಗೊಂಡಿಲ್ಲವಾದರೂ, ಆ ಪಕ್ಷಕ್ಕೆ ತನ್ನ ಬೆಂಬಲ ಘೋಷಿಸಿದ್ದಾರೆ. ದಿಲ್ಲಿಯಲ್ಲಿರುವ ಎಐಸಿಸಿ ಮುಖ್ಯ ಕಾರ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕನ್ಹ್ಹಯ್ಯಾ ಕುಮಾರ್ ಅವರು ಕಾಂಗ್ರೆಸ್ ಗೆ ವಿಧ್ಯುಕ್ತವಾಗಿ ಸೇರ್ಪಡೆಗೊಂಡರು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಉಪಸ್ಥಿತರಿದ್ದರು.

ಕಾಂಗ್ರೆಸ್‌ಗೆ ಸೇರ್ಪಡೆಗೊಂಡ ಬಳಿಕ ಮಾತನಾಡಿದ ಕನ್ಹಯ್ಯೆ ಕುಮಾರ್ ಅವರು ಬಿಜೆಪಿಯ ಮೇಲೆ ಪರೋಕ್ಷ ಟೀಕಾಪ್ರಹಾರ ನಡೆಸಿದರು. ಕೆಲವು ಜನರು ದೇಶದ ಇತಿಹಾಸವನ್ನು, ಅದರ ಭೂತಕಾಲ ಹಾಗೂ ವರ್ತಮಾನವನ್ನು ನಾಶಪಡಿಸಲು ಯತ್ನಿಸುತ್ತಿದ್ದು ಅದನ್ನು ತಡೆಗಟ್ಟಬೇಕಾಗಿದೆ ಎಂದರು. ತಾನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡ ಕಾರಣವನ್ನು ಕನ್ಹಯ್ಯ ವಿವರಿಸುತ್ತಾ, ತಾನು ಯಾರನ್ನು ವಿರೋಧಿಸಬೇಕೆಂಬುದನ್ನು ಒಬ್ಬ ವ್ಯಕ್ತಿ ಆಯ್ಕೆ ಮಾಡಿಕೊಳ್ಳಬೇಕು ಹಾಗೂ ಆನಂತರ ಇದಕ್ಕಾಗಿ ತನ್ನ ಬೆಂಬಲಿಸುವ ಸ್ನೇಹಿತರಿಗಾಗಿ ಆತ ಹುಡುಕಾಟ ನಡೆಸಬೇಕಾಗಿದೆ ಎಂದರು.

ನಾನು ಈ ಪ್ರಜಾಸತ್ಮಾಕವಾದ ಪಕ್ಷಕ್ಕೆ ಯಾಕೆ ಸೇರಿದ್ದೇನೆಂದರೆ, ಒಂದು ವೇಳೆ ಕಾಂಗ್ರೆಸ್ ಪಕ್ಷವನ್ನು ರಕ್ಷಿಸಲಾಗದೆ ಇದ್ದಲ್ಲಿ ಈ ದೇಶ ಕೂಡಾ ಉಳಿಯಲಾರದು ಎಂದು ನಾನು ಹಾಗೂ ಈ ದೇಶದ ಲಕ್ಷಾಂತರ ಜನರು ಭಾವಿಸಿದ್ದಾರೆಂದು ಕುಮಾರ್ ತಿಳಿಸಿದರು.
 
ಪತ್ರಿಕಾಗೋಷ್ಠಿಯಲ್ಲಿ ಜಿಗ್ನೇಶ್ ಮೆವಾನಿ ಮಾತನಾಡಿ, ತಾನು ಪಕ್ಷೇತರ ಶಾಸಕನಾಗಿರುವ ಕಾರಣ ರಾಜಕೀಯ ಪಕ್ಷಕ್ಕೆ ಸೇರ್ಪಡೆಗೊಳ್ಳಲು ಸಾಧ್ಯವಾಗದು. ತಾನು ಯಾವುದೇ ರಾಜಕೀಯ ಪಕ್ಷಕ್ಕೆ ಸೇರ್ಪಡೆಗೊಂಡಲ್ಲಿ, ತನಗೆ ಶಾಸಕನಾಗಿ ಮುಂದುವರಿಯಲಾಗದು ಎಂದರು. ಮೆವಾನಿ ಅವರು 2017ರ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ವಡ್ಗಾಮ್ ಕ್ಷೇತ್ರದಿಂದ ಪಕ್ಷೇತರನಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು.
ತಾನು ಹಾಗೂ ಕನ್ಹಯ್ಯ ಕುಮಾರ್ ಅವರು ಸೆಪ್ಟೆಂಬರ್ 25ರಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುವುದಾಗಿ ಮೆವಾನಿ ಮಂಗಳವಾರ ಘೋಷಿಸಿದ್ದರು.
  
ಜವಾಹರಲಾಲ್ ನೆಹರೂ ವಿವಿಯ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷರಾಗಿದ್ದ ಕನ್ಹಯ್ಯಾ ಕುಮಾರ್ ಅವರನ್ನು 2016ರ ಫೆಬ್ರವರಿಯಲ್ಲಿ ದೇಶದ್ರೋಹದ ಘೋಷಣೆಗಳನ್ನು ಕೂಗಿದ ಆರೋಪದಲ್ಲಿ ಬಂಧಿಸಲಾಗಿತ್ತು. ಆದರೆ ಅವರ ಭಾಷಣ ವಿಡಿಯೋವನ್ನು ತಿರುಚಲಾಗಿದೆಯೆಂದು ತನಿಖೆಯಿಂದ ದೃಢಪಟ್ಟ ಬಳಿಕ ಅವರನ್ನು ದೋಷಮುಕ್ತಗೊಳಿಸಲಾಗಿತ್ತು. ಆನಂತರ 2019ರ ಲೋಕಸಭಾ ಚುನಾವಣೆಯಲ್ಲಿ ಕನ್ಹಯ್ಯ ಕುಮಾರ್ ಅವರು ಬಿಹಾರದ ಬೆಗುಸರಾಯ್ ಲೋಕಸಭಾ ಕ್ಷೇತ್ರದಲ್ಲಿ ಸಿಪಿಐ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಪರಾಭವಗೊಂಡಿದ್ದರು. ಗುಜರಾತ್‌ನ ಪಕ್ಷೇತರ ಶಾಸಕರಾದ ಜಿಗ್ನೇಶ್ ಮೆವಾನಿ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, ಕೃಷಿ ಕಾಯ್ದೆಗಳ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆಯನ್ನು ನಿರ್ಲಕ್ಷಿಸುತ್ತಿರುವ ಕೇಂದ್ರ ಸರಕಾದ ವಿರುದ್ಧ ಕಿಡಿಕಾರಿದ ಮೆವಾನಿ, ‘‘ ರೈತರು ಮತ್ತು ಕಾರ್ಮಿಕರಿಗೆ ಅಧಿಕಾರ ನೀಡುವುದೇ ಕ್ರಾಂತಿಯೆಂದು ಸ್ವಾತಂತ್ರ ಹೋರಾಟಗಾರ ಭಗತ್ ಸಿಂಗ್ ವ್ಯಾಖ್ಯಾನಿಸಿದ್ದರು. ಆದರೆ ನರೇಂದ್ರ ಮೋದಿಯವರು ಪರಿಶೀಲನೆಗೆಂದು ಸೆಂಟ್ರಲ್ ವಿಸ್ಟಾಗೆ ಭೇಟಿ ನೀಡುತ್ತಾರೆ. ಆದರೆ ರೈತರ ಭೇಟಿಗೆ ಅವರಿಗೆ ಸಮಯವಿಲ್ಲ" ಎಂದರು.
 
2017ರ ಗುಜರಾತ್ ವಿಧಾನಸಭಾ ಚುನಾವಣೆಗೆ ಮುನ್ನ, ಜಿಗ್ನೇಶ್ ಮೇವಾನಿ ಅವರು ದಲಿತ ಹಕ್ಕುಗಳ ಚಳವಳಿಯ ಪ್ರಮುಖ ನಾಯಕರಾಗಿ ಹೊರಹಮ್ಮಿದ್ದರು. ಅವರು ಹಾಗೂ ಪಾಟಿದಾರ್ ಸಮುದಾಯದ ನಾಯಕ ಹಾರ್ದಿಕ್ ಪಟೇಲ್ ಮತ್ತು ಠಾಕೂರ್ ಸಮುದಾಯದ ನಾಯಕ ಅಲ್ಪೇಶ್ ಠಾಕೂರ್ ಅವರು ಯಾವುದೇ ರಾಜಕೀಯ ಪಕ್ಷಕ್ಕೆ ನಿಷ್ಠೆಯನ್ನು ತೋರಿಸದೆಯೇ ಬಿಜೆಪಿ ವಿರುದ್ಧ ವ್ಯಾಪಕ ಅಭಿಯಾನ ನಡೆಸಿದ್ದರು.
 
ಹಾರ್ದಿಕ್ ಅವರು ಪ್ರಸಕ್ತ ಕಾಂಗ್ರೆಸ್‌ನ ಗುಜರಾತ್ ಘಟಕದ ಕಾರ್ಯನಿರತ ಅಧ್ಯಕ್ಷರಾಗಿದ್ದಾರೆ. 2017ರಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದ ಅಲ್ಪೇಶ್ ಅವರು 2019ರಲ್ಲಿ ಆ ಪಕ್ಷವನ್ನು ತೊರೆದು ಬಿಜೆಪಿ ಸೇರಿದ್ದರು.

ಕಾಂಗ್ರೆಸ್ ಪಕ್ಷವು ಒಂದು ದೊಡ್ಡ ಹಡಗಾಗಿದೆ. ಒಂದು ವೇಳೆ ಅದನ್ನು ರಕ್ಷಿಸಿದಲ್ಲಿ ಹಲವಾರು ಜನರ ಆಶೋತ್ತರಗಳು, ಮಹಾತ್ಮಗಾಂಧೀಜಿಯವರ ಏಕತಾವಾದ, ಭಗತ್ ಸಿಂಗ್ ದಿಟ್ಟತನ ಹಾಗೂ ಬಿ.ಆರ್.ಅಂಬೇಡ್ಕರ್ ಅವರ ಸಮಾನತೆಯ ಚಿಂತನೆ ಕೂಡಾ ಕಾಪಾಡಲ್ಪಡುವುದೆಂದು ನಾನು ನಂಬಿದ್ದೇನೆ. ಈ ಕಾರಣಕ್ಕಾಗಿಯೇ ನಾನು ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದೇನೆ.

-ಕನ್ಹಯ್ಯ ಕುಮಾರ್

‘‘ಪಕ್ಷೇತರ ಶಾಸಕನಾಗಿರುವುದರಿಂದ ವಿಧ್ಯುಕ್ತವಾಗಿ ಕಾಂಗ್ರೆಸ್ ಸೇರಲು ಸಾಧ್ಯವಾಗುತ್ತಿಲ್ಲ. ಆದರೆ ಸೈದ್ಧಾಂತಿಕವಾಗಿ ನಾನು ಕಾಂಗ್ರೆಸ್ ಪಕ್ಷದ ಭಾಗವಾಗಿದ್ದೇನೆ ಹಾಗೂ ಆ ಪಕ್ಷದ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದೇನೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತಾನು ಗುಜರಾತ್ನಲ್ಲಿ ಕಾಂಗ್ರೆಸ್ ಪಕ್ಷದ ಟಿಕೆಟ್ ನಿಂದ ಸ್ಪರ್ಧಿಸಲಿದ್ದೇನೆ.

-ಜಿಗ್ನೇಶ್ ಮೇವಾನಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News