ಪ್ರಿಯಾಂಕಾ ಗಾಂಧಿ ಬಂಧನ ಸಂಪೂರ್ಣ ಕಾನೂನುಬಾಹಿರ, ಅಧಿಕಾರ ದುರುಪಯೋಗ : ಪಿ.ಚಿದಂಬರಂ
ಹೊಸದಿಲ್ಲಿ: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಬಂಧನವನ್ನು 'ಸಂಪೂರ್ಣವಾಗಿ ಕಾನೂನುಬಾಹಿರ' ಎಂದು ಖಂಡಿಸಿದ ಪಕ್ಷದ ಹಿರಿಯ ನಾಯಕ ಪಿ.ಚಿದಂಬರಂ ಉತ್ತರ ಪ್ರದೇಶದಲ್ಲಿ ಕಾನೂನಿನ ನಿಯಮವಿಲ್ಲ. ಅಲ್ಲಿನ ಪೊಲೀಸರು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಕಾನೂನು ಹಾಗೂ ಅವರ ಆದೇಶವನ್ನು ಪಾಲಿಸುತ್ತಿದ್ದಾರೆ ಎಂದರು.
ಪ್ರಿಯಾಂಕಾ ಗಾಂಧಿಯವರನ್ನು ಲಖಿಂಪುರ್ ಖೇರಿಗೆ ಹೋಗುವಾಗ ಸೀತಾಪುರದಲ್ಲಿ ಬಂಧಿಸಲಾಯಿತು, ಲಿಖಿಂಪುರದಲ್ಲಿ ರವಿವಾರ ನಡೆದ ಹಿಂಸಾಚಾರದಲ್ಲಿ ಎಂಟು ಜನರು ಸಾವನ್ನಪ್ಪಿದ್ದರು.
' ಸೀತಾಪುರದಲ್ಲಿ ಪ್ರಿಯಾಂಕಾ ಗಾಂಧಿಯ ಬಂಧನಕ್ಕೆ ಸಂಬಂಧಿಸಿದ ಸತ್ಯಗಳು ಹಾಗೂ ಸನ್ನಿವೇಶಗಳು 'ಉತ್ತರಪ್ರದೇಶದಲ್ಲಿ ಕಾನೂನಿನ ನಿಯಮವಿಲ್ಲ ಎಂದು ಖಚಿತವಾಗಿ ದೃಢಪಡಿಸುತ್ತದೆ' ಎಂದು ಹೇಳಿದರು.
"ಅಕ್ಟೋಬರ್ 4, ಸೋಮವಾರ ಬೆಳಿಗ್ಗೆ 4.30 ಕ್ಕೆ ಅವರನ್ನು ಬಂಧಿಸಲಾಯಿತು.ಅವರನ್ನು ಸೀತಾಪುರದ ಪಿಎಸಿ ಅತಿಥಿ ಗೃಹದಲ್ಲಿ ಬಂಧಿಸಿಡಲಾಗಿದೆ. ಜಿಲ್ಲಾಧಿಕಾರಿ ಮತ್ತು ಸಂಬಂಧಿತ ನ್ಯಾಯಾಧೀಶರು ಇಬ್ಬರೂ ಸೀತಾಪುರದಲ್ಲಿದ್ದಾರೆ. ಅವರ ಬಂಧನವು ಸಂಪೂರ್ಣವಾಗಿ ಕಾನೂನುಬಾಹಿರ ಮತ್ತು ಅಧಿಕಾರದ ದುರುಪಯೋಗ "ಎಂದು ಮಾಜಿ ಗೃಹ ಸಚಿವರು ಹೇಳಿದರು.
" ಸಿಆರ್ಪಿಸಿ ಸೆಕ್ಷನ್ 151 ರ ಅಡಿಯಲ್ಲಿ ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದರು. ಸೆ .151 ರ ಅಡಿಯಲ್ಲಿ ಬಂಧಿಸಿದ ಯಾವುದೇ ವ್ಯಕ್ತಿಯನ್ನು ಯಾವುದೇ ಇತರ ಕಾನೂನಿನ ಅಡಿಯಲ್ಲಿ ನ್ಯಾಯಾಂಗ ಮ್ಯಾಜಿಸ್ಟ್ರೇಟ್ನ ಆದೇಶವಿಲ್ಲದಿದ್ದರೆ, 24 ಗಂಟೆಗಳಿಗಿಂತ ಹೆಚ್ಚು ಕಾಲ ಬಂಧಿಸಿಡಲಾಗುವುದಿಲ್ಲ" ಚಿದಂಬರಂ ಹೇಳಿದರು.