ವೆಂಕಯ್ಯನಾಯ್ಡು ಅರುಣಾಚಲ ಪ್ರದೇಶ ಭೇಟಿಗೆ ಚೀನಾದ ಆಕ್ಷೇಪವನ್ನು ತೀವ್ರವಾಗಿ ತಿರಸ್ಕರಿಸಿದ ಭಾರತ
ಹೊಸದಿಲ್ಲಿ: ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರು ಇತ್ತೀಚೆಗೆ ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿದ್ದಕ್ಕೆ ಚೀನಾದ ಆಕ್ಷೇಪವನ್ನು ಭಾರತವು ಬುಧವಾರ ತೀವ್ರವಾಗಿ ತಿರಸ್ಕರಿಸಿತು. ಈ ರಾಜ್ಯವು ಭಾರತದ ಅವಿಭಾಜ್ಯ ಅಂಗವಾಗಿದೆ ಎಂದು ಪ್ರತಿಪಾದಿಸಿತು.
"ಚೀನಾದ ಅಧಿಕೃತ ವಕ್ತಾರರು ಇಂದು ನೀಡಿದ ಟೀಕೆಗಳನ್ನು ನಾವು ಗಮನಿಸಿದ್ದೇವೆ. ಅಂತಹ ಟೀಕೆಗಳನ್ನು ನಾವು ತಿರಸ್ಕರಿಸುತ್ತೇವೆ. ಅರುಣಾಚಲ ಪ್ರದೇಶವು ಭಾರತದ ಒಂದು ಅವಿಭಾಜ್ಯ ಅಂಗವಾಗಿದೆ ಹಾಗೂ ಬೇರ್ಪಡಿಸಲಾಗದ ಭಾಗವಾಗಿದೆ'' ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಹೇಳಿದ್ದಾರೆ.
"ಭಾರತೀಯ ನಾಯಕರು ವಾಡಿಕೆಯಂತೆ ಅರುಣಾಚಲ ಪ್ರದೇಶಕ್ಕೆ ಹಾಗೂ ಭಾರತದ ಯಾವುದೇ ರಾಜ್ಯಕ್ಕೆ ಹೋಗುತ್ತಾರೆ. ಭಾರತದ ರಾಜ್ಯಕ್ಕೆ ಭಾರತೀಯ ನಾಯಕರು ಭೇಟಿ ನೀಡುವುದನ್ನು ಆಕ್ಷೇಪಿಸುವುದು ಸರಿಯಲ್ಲ"ಎಂದು ಬಾಗ್ಚಿ ಹೇಳಿದರು.
ಅರುಣಾಚಲ ಪ್ರದೇಶಕ್ಕೆ ಭಾರತೀಯ ನಾಯಕರು ಭೇಟಿ ನೀಡುವುದನ್ನು ಚೀನಾ ವಿರೋಧಿಸುತ್ತಿದೆ. ಇದು ದಕ್ಷಿಣ ಟಿಬೆಟ್ನ ಒಂದು ಭಾಗ ಎಂದು ಹೇಳಿದೆ.