ಕಲ್ಲಿದ್ದಲು ಪೂರೈಕೆ ಹೆಚ್ಚಿಸಲಾಗಿದೆ: ಪ್ರಹ್ಲಾದ ಜೋಷಿ
Update: 2021-10-13 18:23 GMT
ತಿರುವನಂತಪುರ, ಅ. 13: ಉಷ್ಣ ವಿದ್ಯುತ್ ಸ್ಥಾವರಗಳಿಗೆ ಪೂರೈಕೆ ಮಾಡಲಾದ ಸಂಚಿತ ಕಲ್ಲಿದ್ದಲು ಮಂಗಳವಾರ 20 ಲಕ್ಷ ಟನ್ ದಾಟಿದೆ. ಸ್ಥಾವರಗಳಿಗೆ ಒಣ ಕಲ್ಲಿದ್ದಲು ಪೂರೈಕೆ ವರ್ಧಿಸಲಾಗಿದೆ ಎಂದು ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಷಿ ಅವರು ಹೇಳಿದ್ದಾರೆ. ಹಲವು ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಕಲ್ಲಿದ್ದಲು ಕೊರತೆ ಉಂಟಾಗಿದೆ. ಕಲ್ಲಿದ್ದಲು ಪೂರೈಕೆ ಹೆಚ್ಚಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
ವಿದ್ಯುತ್ ಸ್ಥಾವರಗಳಿಗೆ ಕಳೆದ ಎರಡು ದಿನ ಪೂರೈಸಲಾದ ಕಲ್ಲಿದ್ದಲು ಪ್ರತಿ ದಿನ 16.2 ಲಕ್ಷ ಟನ್ಗಳಿಗೆ ತಲುಪಿದೆ ಎಂದು ಕೋಲ್ ಇಂಡಿಯಾದ ಅಧಿಕಾರಿಗಳು ತಿಳಿಸಿದ್ದಾರೆ. ವಿದ್ಯುತ್ ಉತ್ಪಾದನೆಗೆ ಬೇಕಾದ ಕಲ್ಲಿದ್ದಲು ಬೇಡಿಕೆ ಪೂರೈಸಲು ಸರಕಾರ ಎಲ್ಲ ಪ್ರಯತ್ನ ಮಾಡುತ್ತಿದೆ ಎಂದು ಪ್ರಹ್ಲಾದ ಜೋಷಿ ಅವರು ಮಂಗಳವಾರ ಹೇಳಿದ್ದರು.