ಆಶೀಷ್ ಮಿಶ್ರಾನ ಆಪ್ತ ಅಂಕಿತ್ ದಾಸ್ ಸಿಟ್ ಮುಂದೆ ಹಾಜರು
Update: 2021-10-14 05:09 GMT
ಲಖಿಂಪುರ ಖೇರಿ (ಉತ್ತರಪ್ರದೇಶ), ಅ. 13: ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣದ ಆರೋಪಿ ಆಶೀಷ್ ಮಿಶ್ರಾ ಅವರ ಆಪ್ತ ಗೆಳೆಯ ಎಂದು ಹೇಳಲಾದ ಅಂಕಿತ್ ದಾಸ್ ಅವರು ಲಖಿಂಪುರದಲ್ಲಿರುವ ಕ್ರೈಮ್ ಬ್ರಾಂಚ್ ಕಚೇರಿಗೆ ಬುಧವಾರ ಆಗಮಿಸಿ ವಿಶೇಷ ತನಿಖಾ ತಂಡದ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ.
ನಾಲ್ವರು ರೈತರು ಸೇರಿದಂತೆ 8 ಮಂದಿ ಸಾವನ್ನಪ್ಪಲು ಕಾರಣವಾದ ಲಖಿಂಪುರ ಖೇರಿಯಲ್ಲಿ ಅಕ್ಟೋಬರ್ 3ರಂದು ನಡೆದ ಹಿಂಸಾಚಾರಕ್ಕೆ ಸಂಬಂಧಿಸಿ ತನಿಖಾಧಿಕಾರಿಗಳು ಅಂಕಿತ್ ದಾಸ್ಗೆ ಸಮನ್ಸ್ ಜಾರಿ ಮಾಡಿದ್ದರು.
ಬೆಳಗ್ಗೆ 11 ಗಂಟೆಗೆ ಅಂಕಿತ್ ದಾಸ್ ಅವರು ವಕೀಲರ ತಂಡದೊಂದಿಗೆ ಲಖಿಂಪುರದಲ್ಲಿರುವ ಕ್ರೈಮ್ಬ್ರಾಂಚ್ ಕಚೇರಿಗೆ ಆಗಮಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ. ಮಂಗಳವಾರ ಅಂಕಿತ್ ದಾಸ್ ಹಾಗೂ ಲತೀಫ್ ಎಂದು ಗುರುತಿಸಲಾದ ಇನ್ನೊಬ್ಬರು ಚೀಫ್ ಜುಡೀಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಶರಣಾಗುವುದಾಗಿ ಮನವಿ ಸಲ್ಲಿಸಿದ್ದರು.