ಕೊಟ್ಟಾಯಂನಲ್ಲಿ ಭೂಕುಸಿತ:ಮೂವರು ಮೃತ್ಯು,ಹಲವರು ನಾಪತ್ತೆ

Update: 2021-10-16 14:56 GMT
ಸಾಂದರ್ಭಿಕ ಚಿತ್ರ

ತಿರುವನಂತಪುರ: ಕೊಟ್ಟಾಯಂ ಜಿಲ್ಲೆಯ ಕಟ್ಟಿಕ್ಕಲ್ ಹಳ್ಳಿಯ ಪ್ಲಾಪಲ್ಲಿಯಲ್ಲಿ ಶನಿವಾರ ಸಂಭವಿಸಿದ ಭೂಕುಸಿತದಿಂದ ಮೂವರು ಮೃತಪಟ್ಟಿದ್ದು, ಅನೇಕ ಜನರು ನಾಪತ್ತೆ ಯಾಗಿದ್ದಾರೆ.

ಈ ಪ್ರದೇಶದ ಪಂಚಾಯತ್ ಸದಸ್ಯರ ಪ್ರಕಾರ, ಪ್ಲಾಪಲ್ಲಿಯ ಎರಡು ಸ್ಥಳಗಳಲ್ಲಿ ಭೂಕುಸಿತ ಸಂಭವಿಸಿದ್ದು ಇದರಲ್ಲಿ 14 ಜನರು ನಾಪತ್ತೆಯಾಗಿದ್ದಾರೆ.

ಭೂಕುಸಿತದಿಂದ ಮೂರು ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂದು ಅವರು ಹೇಳಿದರು. ಭೂಕುಸಿತದಿಂದಾಗಿ ಮೂರು ಮನೆಗಳಿಗೆ ಹಾನಿಯಾಗಿದೆ.

ರಕ್ಷಣಾ ಕಾರ್ಯಾಚರಣೆಗಾಗಿ ವಾಯುಪಡೆಯ ಸಹಾಯವನ್ನು ಪಡೆಯಲು ಪ್ರಯತ್ನಿಸಲಾಗುತ್ತಿದೆ ಎಂದು ಸಹಕಾರ ಸಚಿವ ವಿ.ಎನ್. ವಾಸವನ್ ಅವರು ಹೇಳಿದರು. ಹಾನಿಗೊಳಗಾದ ಪ್ರದೇಶಕ್ಕೆ ಸಚಿವರು ಭೇಟಿ ನೀಡಿದರು.

ರಕ್ಷಣಾ ತಂಡಗಳು ಸ್ಥಳಕ್ಕೆ ತಲುಪಲು ಕಷ್ಟವಾಗುತ್ತಿರುವುದರಿಂದ ಸ್ಥಳೀಯ ನಿವಾಸಿಗಳು ಪ್ರಸ್ತುತ ರಕ್ಷಣಾ ಕಾರ್ಯಾಚರಣೆಗಳನ್ನು ನಡೆಸುತ್ತಿದ್ದಾರೆ. ಬೆಳಿಗ್ಗೆಯಿಂದಲೇ ಈ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದೆ.

ಕೇರಳದಲ್ಲಿ ಅದರಲ್ಲೂ ಮುಖ್ಯವಾಗಿ ದಕ್ಷಿಣ ಹಾಗೂ ಕೇಂದ್ರ ವಲಯದಲ್ಲಿ ಶನಿವಾರ ಭಾರೀ ಮಳೆ ಸುರಿದಿದ್ದು, ಹಲವು ಪ್ರದೇಶಗಳು ಜಲಾವೃತವಾಗಿವೆ. ಹಲವು ನದಿಗಳು ತುಂಬಿ ಹರಿಯುತ್ತಿವೆ. ಭಾರತೀಯ ಹವಾಮಾನ ಇಲಾಖೆಯು ಪತ್ತನಂತಿಟ್ಟ, ಕೊಟ್ಟಾಯಂ, ಎರ್ನಾಕುಲಂ, ಇಡುಕ್ಕಿ ಹಾಗೂ ತ್ರಿಶೂರ್ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News