×
Ad

ವಿದೇಶಿಯರು ನೇಪಾಳದಿಂದ ರೈಲು ಮಾರ್ಗದ ಮೂಲಕ ಭಾರತಕ್ಕೆ ಪ್ರಯಾಣಿಸಲು ಅವಕಾಶವಿಲ್ಲ

Update: 2021-11-20 19:43 IST
ಸಾಂದರ್ಭಿಕ ಚಿತ್ರ:PTI

ಹೊಸದಿಲ್ಲಿ,ನ.20: ಭಾರತೀಯ ಅಧಿಕಾರಿಗಳು ಭದ್ರತಾ ಕಳವಳಗಳನ್ನು ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಇತ್ತೀಚಿಗೆ ಆರಂಭಗೊಂಡಿರುವ ಕುರ್ತಾ-ಜಯನಗರ ರೈಲು ಮಾರ್ಗದ ಮೂಲಕ ವಿದೇಶಿಯರು ಭಾರತಕ್ಕೆ ಪ್ರಯಾಣಿಸಲು ಅವಕಾಶ ನೀಡದಿರಲು ನೇಪಾಳ ನಿರ್ಧರಿಸಿದೆ ಎಂದು ‘ದಿ ಕಠ್ಮಂಡು ಪೋಸ್ಟ್’ ದೈನಿಕವು ಶನಿವಾರ ವರದಿ ಮಾಡಿದೆ.

‌ಗಡಿಯಾಚೆಯ ರೈಲು ಕಾರ್ಯಾಚರಣೆಗಾಗಿ ಅನುಸರಿಸಬೇಕಾದ ಕಾರ್ಯವಿಧಾನಗಳನ್ನು (ಎಸ್ಒಪಿ) ಅಂತಿಮಗೊಳಿಸುವಾಗ ವಿದೇಶಿಯರ ಪ್ರಯಾಣಕ್ಕೆ ಅವಕಾಶ ನೀಡದಿರಲು ನಿರ್ಧರಿಸಲಾಗಿದೆ ಎಂದು ನೇಪಾಳದ ರೈಲ್ವೆ ಇಲಾಖೆಯ ಮಹಾ ನಿರ್ದೇಶಕ ದೀಪಕ್ ಕುಮಾರ್ ಭಟ್ಟಾರಾಯ್ ಅವರನ್ನು ಉಲ್ಲೇಖಿಸಿ ವರದಿಯು ಹೇಳಿದೆ.

ನೇಪಾಳ ಮತ್ತು ಭಾರತ ಹೆಚ್ಚಿನ ಭದ್ರತೆಯಿಲ್ಲದ ಗಡಿಯನ್ನು ಹಂಚಿಕೊಂಡಿದ್ದು,ಇದು ಅಪರಾಧಿಗಳಿಗೆ ಮತ್ತು ಭಯೋತ್ಪಾದಕ ಚಟುವಟಿಕೆಗಳಿಗೆ ಅನುಕೂಲಕರವಾಗಿದೆ. ಬಿಹಾರದ ಜಯನಗರ ಮತ್ತು ನೇಪಾಳದ ಕುರ್ತಾ ನಡುವೆ ಸಂಪರ್ಕವನ್ನು ಕಲ್ಪಿಸುವ 34.9 ಕಿ.ಮೀ.ಉದ್ದದ ರೈಲುಮಾರ್ಗವನ್ನು ಭಾರತವು ಅ.22ರಂದು ನೇಪಾಳ ಸರಕಾರಕ್ಕೆ ಹಸ್ತಾಂತರಿಸಿತ್ತು.
 
ಭಾರತದ ಭದ್ರತಾ ಕಳವಳವು ಎಸ್ಒಪಿ ಅಂತಿಮಗೊಳ್ಳುವುದು ವಿಳಂಬವಾಗಿದ್ದಕ್ಕೆ ಕಾರಣಗಳಲ್ಲೊಂದಾಗಿತ್ತು ಎಂದು ಭಟ್ಟಾರಾಯ್ ಹೇಳಿದ್ದಾರೆ. ಮಾರಾಟವಾದ ಟಿಕೆಟ್‌ಗಳ ಆಧಾರದಲ್ಲಿ ಗಡಿಯಲ್ಲಿ ಸುಗಮ ಭದ್ರತಾ ತಪಾಸಣೆಗಾಗಿ ರೈಲನ್ನು ಹತ್ತುವ ಪ್ರಯಾಣಿಕರ ವಿವರಗಳನ್ನು ನೇಪಾಳವು ಭಾರತಕ್ಕೆ ಸಲ್ಲಿಸಲಿದೆ ಎಂದೂ ವರದಿಯು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News