ಅಪಘಾತದಲ್ಲಿ ಮೃತಪಟ್ಟ ಕೇರಳ ರೂಪದರ್ಶಿಯರ ಸಾವಿಗೆ ಕಾರಣವೇನು?: ಪೊಲೀಸರು ಹೇಳಿದ್ದು ಹೀಗೆ...

Update: 2021-12-01 08:52 GMT
ಅನ್ಸಿ ಕಬೀರ್, ಅಂಜನಾ ಶಾಜನ್  (Photo: onmanorama.com)

ತಿರುವನಂತಪುರಂ: ಮಿಸ್ ಕೇರಳ-2019 ಆಗಿದ್ದ ಅನ್ಸಿ ಕಬೀರ್ ಹಾಗೂ ರನ್ನರ್-ಅಪ್ ಅಂಜನಾ ಶಾಜನ್ ಅವರ ಸಾವಿಗೆ ಸಂಬಂಧಿಸಿದಂತೆ ಪೊಲೀಸರು ಬಂಧಿಸಿರುವ ಶಂಕಿತ ಡ್ರಗ್ಸ್ ವ್ಯಾಪಾರಿಯೊಬ್ಬ ರೂಪದರ್ಶಿಗಳಿದ್ದ ಕಾರನ್ನು ತನ್ನ ವಾಹನದಲ್ಲಿ ಬೆಂಬತ್ತಿದ್ದರಿಂದ ಅವರು ತಮ್ಮ ವಾಹನದ ವೇಗವನ್ನು ಹೆಚ್ಚಿಸಿದ್ದರಿಂದ ಅಪಘಾತ ಸಂಭವಿಸಿ ಇಬ್ಬರೂ ಸಾವಿಗೀಡಾದರು ಎಂದು ಪೊಲೀಸರು ತಿಳಿಸಿದ್ದಾರೆ.

ಅಕ್ಟೋಬರ್ 31ರ ರಾತ್ರಿ ಅಂಜನಾ ಮತ್ತು ಅನ್ಸಿ ಅವರಿದ್ದ ಕಾರು ಅವರು ಹೋಟೆಲ್ ಒಂದರಲ್ಲಿ ಪಾರ್ಟಿ ಮುಗಿಸಿ ಮನೆಗೆ ಮರಳುತ್ತಿದ್ದಾಗ ರಸ್ತೆಬದಿಯ ಮರಕ್ಕೆ ಗುದ್ದಿದ ಪರಿಣಾಮ ಅವರು ಸಾವನ್ನಪ್ಪಿದ್ದರು. ಕಾರಿನಲ್ಲಿದ್ದ ಅವರ ಸ್ನೇಹಿತ ಮುಹಮ್ಮದ್ ಆಶಿಖ್ ನಂತರ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರೆ ವಾಹನ ಚಲಾಯಿಸುತ್ತಿದ್ದ ಅಬ್ದುಲ್ ರೆಹಮಾನ್ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದ.

ಬಂಧಿತ ಆರೋಪಿ ಸೈಜು ತಂಕಚನ್ ಎಂಬಾತ ರೂಪದರ್ಶಿಗಳಿದ್ದ ಕಾರನ್ನು ಅವರು ಫೋರ್ಟ್ ಕೊಚ್‌ನ ಹೋಟೆಲ್ ನಂ. 18ನಿಂದ ಹೊರಟಾಗಿನಿಂದ  ತನ್ನ ಕಾರಿನಲ್ಲಿ ಕೆಟ್ಟ ಉದ್ದೇಶದಿಂದ ಹಿಂಬಾಲಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಆತನಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಕಾರಿನ ವೇಗ ಹೆಚ್ಚಿಸಲಾಗಿತ್ತು. ಆರೋಪಿ ಡ್ರಗ್ಸ್ ಜಾಲದೊಂದಿಗೆ ನಿಕಟ ಸಂಬಂದ ಹೊಂದಿದ್ದ, ಪಾರ್ಟಿಗಳಿಗೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ ಹಾಗೂ ಡಿಜೆ ಪಾರ್ಟಿಗಳಲ್ಲಿ ಭಾಗವಹಿಸುತ್ತಿದ್ದ ಯುವತಿಯರನ್ನು ನಿಂದಿಸುತ್ತಿದ್ದ, ಎಂದು ಕೊಚ್ಚಿ ಪೊಲೀಸ್ ಆಯುಕ್ತ  ಸಿ ಎಚ್ ನಾಗರಾಜು ಹೇಳಿದ್ದಾರೆ.

ಗಾಯಾಳು ಅಬ್ದುಲ್ ರೆಹಮಾನ್ ಹೇಳಿಕೆಯ ಆಧಾರದಲ್ಲಿ ಸೈಜು ನನ್ನು ಬಂಧಿಸಲಾಗಿತ್ತು. ಸ್ಥಳೀಯ ನ್ಯಾಯಾಲಯ ಆತನಿಗೆ ಮಂಗಳವಾರ ಮೂರು ದಿನಗಳ ಪೊಲೀಸ್ ಕಸ್ಟಡಿ ವಿಧಿಸಿದೆ. ಸಿಸಿಟಿವಿ ದೃಶ್ಯಗಳು ಕೂಡ ಆತನ ಕಾರು ರೂಪದರ್ಶಿಗಳ ಕಾರನ್ನು ಹಿಂಬಾಲಿಸುತ್ತಿತ್ತು ಎಂಬುದನ್ನು ದೃಢಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News