ಬಿಜೆಪಿ ಜತೆಗಿನ ಮೈತ್ರಿಯನ್ನು ಟೀಕಿಸಿದ್ದ ತನ್ನ ಪ್ರಮುಖ ಮುಸ್ಲಿಂ ನಾಯಕನನ್ನು ಅಮಾನತುಗೊಳಿಸಿದ ಎಐಎಡಿಎಂಕೆ
Update: 2021-12-01 16:42 GMT
ಚೆನ್ನೈ: ಬಿಜೆಪಿಯ ಜತೆಗೆ ಎಎಎಡಿಎಂಕೆ ಹೊಂದಿರುವ ಮೈತ್ರಿಯನ್ನು ಟೀಕಿಸಿ ನೀಡಿದ ಹೇಳಿಕೆಗಾಗಿ ತನ್ನ ಹಿರಿಯ ನಾಯಕ ಎ ಅನ್ವರ್ ರಾಜ್ಹಾ ಅವರನ್ನು ಎಐಎಡಿಎಂಕೆ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಕೈಬಿಟ್ಟಿದೆ ಎಂದು indianexpress.com ವರದಿ ಮಾಡಿದೆ.
ರಾಮನಾಥಪುರಂನವರಾದ ಅನ್ವರ್ ಅವರು ಎಐಡಿಎಂಕೆಯಲ್ಲಿ ಅಲ್ಪಸಂಖ್ಯಾತರ ಪ್ರತಿನಿಧಿಯಂತಿದ್ದರು. ಪಕ್ಷ ಆರಂಭಗೊಂಡಂದಿನಿಂದ ಅದರ ಜತೆಗಿದ್ದ ಅನ್ವರ್ ಅವರು ಉಚ್ಛಾಟಿತ ಎಐಎಡಿಎಂಕೆ ನಾಯಕಿ ವಿ ಕೆ ಶಶಿಕಲಾ ಅವರ ಬೆಂಬಲಿಗರಾಗಿದ್ದಾರೆ.
ಇದೀಗ ಅವರನ್ನು ಪಕ್ಷ ವಿರೋಧಿ ಚಟುವಟಿಕೆಗಳಿಗಾಗಿ ಉಚ್ಛಾಟಿಸಲಾಗಿದೆ ಎಂದು ಪಕ್ಷ ಬಿಡುಗಡೆಗೊಳಿಸಿದ ಹೇಳಿಕೆಯಲ್ಲಿ ತಿಳಿಸಿದೆ. ಚುನಾವಣೆಯಲ್ಲಿ ಎಐಎಡಿಎಂಕೆ ಸೋಲಿಗೆ ಬಿಜೆಪಿ ಜತೆಗಿನ ಮೈತ್ರಿಯೇ ಕಾರಣ ಎಂದು ಅನ್ವರ್ ಹೇಳಿದ್ದರು.