ಇಂಟರ್ನೆಟ್ ಸ್ಥಗಿತ ನಿಯಮಗಳ 'ಅತಿಯಾದ ದುರ್ಬಳಕೆ', ಭಾರೀ ಆರ್ಥಿಕ ನಷ್ಟಕ್ಕೆ ಕಾರಣ: ಸಂಸದೀಯ ಸಮಿತಿಯ ವರದಿ

Update: 2021-12-02 14:47 GMT
ಸಾಂದರ್ಭಿಕ ಚಿತ್ರ (PTI)

ಹೊಸದಿಲ್ಲಿ, ಡಿ.2: ಭಾರತದಲ್ಲಿ ಇಂಟರ್ನೆಟ್ ಸ್ಥಗಿತ ನಿಯಮಗಳನ್ನು 'ಅತಿಯಾಗಿ ದುರ್ಬಳಕೆ' ಮಾಡಿಕೊಳ್ಳಲಾಗುತ್ತಿದೆ. ಇದು ಭಾರೀ ಆರ್ಥಿಕ ನಷ್ಟ, ಜನತೆಗೆ ಹೇಳಲಾಗದಷ್ಟು ಬವಣೆಯನ್ನು ಮಾತ್ರವಲ್ಲ, ದೇಶದ ವರ್ಚಸ್ಸಿಗೆ ತೀವ್ರ ಹಾನಿಯನ್ನೂ ಉಂಟು ಮಾಡುತ್ತದೆ ಎಂದು ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ಕುರಿತ ಸಂಸದೀಯ ಸ್ಥಾಯಿ ಸಮಿತಿಯು ಬುಧವಾರ ಸಂಸತ್ತಿನಲ್ಲಿ ಮಂಡಿಸಿದ ತನ್ನ ವರದಿಯಲ್ಲಿ ಹೇಳಿದೆ  ಎಂದು theprint.in ವರದಿ ಮಾಡಿದೆ.

ದೂರಸಂಪರ್ಕ ಅಥವಾ ಇಂಟರ್ನೆಟ್ ಸ್ಥಗಿತಗೊಳಿಸುವಿಕೆಯ ಅರ್ಹತೆ ಮತ್ತು ಸೂಕ್ತತೆಯನ್ನು ನಿರ್ಧರಿಸಲು ಸೂಕ್ತ ಕಾರ್ಯವಿಧಾನವನ್ನು ಶೀಘ್ರ ಜಾರಿಗೆ ತರುವಂತೆ ಸಮಿತಿಯು ಸರಕಾರಕ್ಕೆ ಶಿಫಾರಸು ಮಾಡಿದೆ.

‘ದೂರಸಂಪರ್ಕ ಸೇವೆಗಳು/ಇಂಟರ್ನೆಟ್ ಅಮಾನತು ಮತ್ತು ಅದರ ಪರಿಣಾಮ’ ಶೀರ್ಷಿಕೆಯ ತನ್ನ ವರದಿಯಲ್ಲಿ ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ನೇತೃತ್ವದ ಸಮಿತಿಯು, ಸರಕಾರವು ಅಂತರ್ಜಾಲದ ಮುಕ್ತ ಲಭ್ಯತೆಯೊಂದಿಗೆ ಡಿಜಿಟಲೀಕರಣ ಮತ್ತು ಜ್ಞಾನ ಆರ್ಥಿಕತೆಗೆ ಹೆಚ್ಚಿನ ಒತ್ತು ನೀಡುತ್ತಿರುವ ಈ ಸಮಯದಲ್ಲಿ ಕ್ಷುಲ್ಲಕ ಕಾರಣಗಳಿಂದ ಆಗಾಗ್ಗೆ ಇಂಟರ್ನೆಟ್ ಅನ್ನು ಸ್ಥಗಿತಗೊಳಿಸುವುದು ಅನಗತ್ಯವಾಗಿದೆ ಮತ್ತು ಅದನ್ನು ನಿವಾರಿಸಲೇಬೇಕು ಎಂದು ಹೇಳಿದೆ.

ಇಂಟರ್ನೆಟ್ ಅನ್ನು ಸ್ಥಗಿತಗೊಳಿಸಿದ ಅಥವಾ ಸೇವೆಗೆ ವ್ಯತ್ಯಯವೊಡ್ಡಿದ ಪ್ರತಿ ವಲಯ ಪ್ರದೇಶದಲ್ಲಿ ದೂರಸಂಪರ್ಕ ಕಂಪನಿಗಳು ಪ್ರತಿ ಗಂಟೆಗೆ 2.45 ಕೋ.ರೂ.ನಷ್ಟವನ್ನು ಅನುಭವಿಸುತ್ತವೆ ಎಂದು ಭಾರತೀಯ ಸೆಲ್ಯುಲರ್ ಆಪರೇಟರ್ಗಳ ಸಂಘವನ್ನು ಉಲ್ಲೇಖಿಸಿ ಸಮಿತಿಯು ವರದಿಯಲ್ಲಿ ಹೇಳಿದೆ.

ಇಂಟರ್ನೆಟ್ ಅನ್ನು ನೆಚ್ಚಿಕೊಂಡಿರುವ ಇತರ ಉದ್ಯಮಗಳು ಈ ಮೊತ್ತದ ಅರ್ಧದಷ್ಟು ನಷ್ಟವನ್ನು ಅನುಭವಿಸಬಹುದು ಎಂದಿರುವ ಸಮಿತಿಯು,ಇಂಟರ್ನೆಟ್ ಸ್ಥಗಿತಗೊಳಿಸುವಿಕೆಯ ಮೇಲ್ವಿಚಾರಣೆಯ ಅಗತ್ಯವಿದೆ,ಇದರಿಂದ ಅದರ ದುರ್ಬಳಕೆ ಮತ್ತು ಜನರಿಗೆ ಭಾರೀ ತೊಂದರೆಯನ್ನು ತಪ್ಪಿಸಬಹುದು ಎಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News