'ಗರುಡ ಗಮನ ವೃಷಭ ವಾಹನ’ ಚಿತ್ರತಂಡದ ವಿರುದ್ಧ ಕೋರ್ಟ್ ಗೆ ಅರ್ಜಿ
Update: 2021-12-07 12:34 GMT
ಬೆಂಗಳೂರು, ಡಿ.7: ಮಲೆಮಹದೇಶ್ವರಸ್ವಾಮಿಯ ಭಕ್ತಿಗೀತೆಯನ್ನು ‘ಗರುಡ ಗಮನ ವೃಷಭ ವಾಹನ’ ಚಲನಚಿತ್ರದಲ್ಲಿ ಕ್ರೌರ್ಯ ಮೆರೆಯುವ ದೃಶ್ಯಕ್ಕೆ ಬಳಕೆ ಮಾಡಿಕೊಂಡಿರುವ ಗರುಡ ಗಮನ ವೃಷಭ ವಾಹನ ಚಿತ್ರತಂಡದ ವಿರುದ್ಧ ಕರುನಾಡ ವಿಜಯ ಸೇನೆ ಸಂಘಟನೆ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ಮೆಟ್ಟಿಲೇರಿದೆ. ಅರ್ಜಿ ಇನ್ನಷ್ಟೇ ವಿಚಾರಣೆಗೆ ಬರಬೇಕಿದೆ.
ಸಂಘನೆಯ ಬೆಂಗಳೂರು ನಗರಾಧ್ಯಕ್ಷ ವಿಜಯಕುಮಾರ್ ಕೋರ್ಟ್ ಮೆಟ್ಟಿಲೇರಿದ್ದು, ಚಿತ್ರದ ನಿರ್ದೇಶಕ ರಾಜ್ ಬಿ. ಶೆಟ್ಟಿ, ನಟ ರಿಷಬ್ ಶೆಟ್ಟಿ, ನಿರ್ಮಾಪಕರಾದ ಬಿ.ವಿ.ರವಿ ರೈ, ವಚನಶೆಟ್ಟಿ ಅವರನ್ನು ಪ್ರತಿವಾದಿಗಳನ್ನಾಗಿ ಮಾಡಿದ್ದಾರೆ.
ಕೊಲೆ ಮಾಡಿ ವಿಕೃತಿ ಮೆರೆಯುವ ದೃಶ್ಯಕ್ಕೆ ಮಾದಪ್ಪನ ಭಕ್ತಿಗೀತೆಯನ್ನು ಹಿನ್ನೆಲೆಯಾಗಿ ಬಳಕೆ ಮಾಡಿಕೊಂಡಿರುವುದು ಲಕ್ಷಾಂತರ ಭಕ್ತರ ಭಾವನೆಗೆ ಧಕ್ಕೆ ತಂದಿದೆ. ಹೀಗಾಗಿ, ಸಿನಿಮಾದಲ್ಲಿ ಬಳಕೆ ಮಾಡಿಕೊಂಡಿರುವ ಸೋಜುಗಾದ ಸೂಜು ಮಲ್ಲಿಗೆ ಹಾಡನ್ನು ತೆಗೆಯಬೇಕೆಂದು ಕೋರಿದ್ದಾರೆ.