ಅಮೃತ ಸೇವಿಸಿ ವಿಷ ಕಾರುವುದೇಕೆ?
ಮಾನ್ಯರೇ,
‘ಆಝಾದಿ ಕಾ ಅಮೃತ ಮಹೋತ್ಸವ’ ಅರ್ಥಪೂರ್ಣವಾಗಿ ಆಚರಿಸಲು ಕೇಂದ್ರ ಸರಕಾರ ದೇಶಾದ್ಯಂತ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಸ್ವಾತಂತ್ರ್ಯ ಸೇನಾನಿಗಳ ತ್ಯಾಗ, ಬಲಿದಾನ ಸಂಗ್ರಾಮದ ಇತಿಹಾಸವನ್ನು ಪ್ರಸ್ತುತಪಡಿಸಲಾಗುತ್ತಿದೆ. ಈ ಮಹೋತ್ಸವವನ್ನು ‘ಸ್ವಾತಂತ್ರ್ಯದ ಅಮೃತ’ ಎಂದು ಸ್ವತಹ ಪ್ರಧಾನಿಯೇ ಹೇಳಿದ್ದಾರೆ. ಆದರೆ ಇಂದು ಈ ಅಮೃತ ಕೊಡಿಸಿದವರ ವಿರುದ್ಧವೇ ವಿಷ ಕಾರುತ್ತಿದ್ದಾರೆ. ಸಂವಿಧಾನ ಪ್ರಜೆಗಳಿಗೆ ವಾಕ್ ಸ್ವಾತಂತ್ರ್ಯದ ಹಕ್ಕು ನೀಡಿದೆ. ಆದರೆ ಇದೇ ಹಕ್ಕನ್ನು ಪಡೆದು ಸಂವಿಧಾನದ ವಿರುದ್ಧ ಮಾತನಾಡಿದ್ದ ನಟಿಯೊಬ್ಬರು ಇತ್ತೀಚೆಗೆ ಖಾಸಗಿ ಸುದ್ದಿವಾಹಿನಿಗೆ ಕೊಟ್ಟ ಸಂದರ್ಶನವೊಂದರಲ್ಲಿ ‘‘ಭಾರತಕ್ಕೆ 1947ರಲ್ಲಿ ಸಿಕ್ಕಿದ್ದು ಸ್ವಾತಂತ್ರ್ಯ ಅಲ್ಲ ಅದು ಭಿಕ್ಷೆ ನಿಜವಾದ ಸ್ವಾತಂತ್ರ್ಯ 2014ರಲ್ಲಿ ಸಿಕ್ಕಿದೆ’’ ಎಂದು ಹೇಳುವ ಮೂಲಕ ಸ್ವಾತಂತ್ರ್ಯ ವೀರ ಸೇನಾನಿಗಳನ್ನು ಅವಮಾನಿಸಿದ್ದಾರೆ. ಸ್ವಾತಂತ್ರ್ಯ ವೀರ ಸೇನಾನಿಗಳ ಬಗ್ಗೆ ಹೆಮ್ಮೆ ಪಡಬೇಕಾದದ್ದು ಪ್ರತಿಯೊಬ್ಬ ಭಾರತೀಯರ ಕರ್ತವ್ಯ. ಈ ನಟಿ ದೇಶದ ಅತ್ಯುನ್ನತ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದಿದ್ದು, ಇಂತಹ ಅನಾಗರಿಕರಿಗೆ ನೀಡಿದ ಉನ್ನತ ನಾಗರಿಕ ಪ್ರಶಸ್ತಿಯನ್ನು ಮೊದಲು ವಾಪಸ್ ಪಡೆದುಕೊಳ್ಳಬೇಕು. ಇದರಲ್ಲಿ ರಾಜಿಯಾಗುವ ಪ್ರಶ್ನೆಯೇ ಇಲ್ಲ. ಆಗ ಮಾತ್ರ ಸರಕಾರದ ‘ಅಮೃತ ಮಹೋತ್ಸವ’ ಸಾರ್ಥಕವಾಗುವುದು ಹಾಗೂ ಸ್ವಾತಂತ್ರ್ಯ ಸಂಗ್ರಾಮದ ವೀರ ಸೇನಾನಿಗಳಿಗೆ ನಿಜವಾದ ಗೌರವ ನಮನ ಸಲ್ಲಿಸಿದಂತೆ ಅಲ್ಲವೇ?