ಪೂರ್ವಾಗ್ರಹದ ಗೀಳು

Update: 2021-12-19 05:43 GMT

ಅವಳಿಗೆ ಗಂಡನ ಮೇಲೆ ಸದಾ ಅನುಮಾನ. ತನ್ನ ಹೊರತಾದ ಒಂದು ರಹಸ್ಯ ಸಂಬಂಧವನ್ನು ಇರಿಸಿಕೊಂಡಿದ್ದಾನೆಂದು. ಗಂಡ ಎಲ್ಲಿಗೆ ಹೋದರೂ, ಯಾವುದೇ ಕೆಲಸದ ಮೇಲಿದ್ದರೂ ತನ್ನ ರಹಸ್ಯ ಸಂಬಂಧದೊಡನೆ ಸುಖಿಸುತ್ತಿದ್ದಾನೆಂದೇ ನಂಬುತ್ತಾಳೆ. ಗಂಡನಿಗೋ ಅವಳ ಅಪನಂಬಿಕೆ ತೀರಾ ಹಿಂಸಿಸುತ್ತದೆ. ತನ್ನ ಪ್ರೇಮವನ್ನು, ಸೇವೆಯನ್ನು ಮತ್ತು ಪ್ರಾಮಾಣಿಕತೆಯನ್ನು ಅನುಮಾನಿಸುವುದರ ಮೂಲಕ ತನ್ನ ಅಪಮಾನಿಸುತ್ತಿದ್ದಾಳೆಂದು ಒತ್ತಡಕ್ಕೆ ಒಳಗಾಗುತ್ತಾನೆ. ತಾನು ಸಾಕ್ಷ್ಯಾಧಾರಗಳನ್ನು ಅವಳಿಗೆ ಒದಗಿಸಿದರೂ, ಬೇರೆಯವರು ಅವನು ಆ ಬಗೆಯ ಅಕ್ರಮ ಮತ್ತು ರಹಸ್ಯ ಸಂಬಂಧವನ್ನು ಹೊಂದಿಲ್ಲವೆಂದು ಅದೆಷ್ಟು ಪ್ರಾಮಾಣಿಸಿದರೂ, ತನ್ನ ಸಮಾಧಾನಿಸಲು ಅಥವಾ ಮೋಸಗೊಳಿಸಲು ಅವನೂ ಮತ್ತು ಅವನೆಲ್ಲಾ ಸಂಗಡಿಗರೂ ಪ್ರಯತ್ನಿಸುವರು ಎಂದೇ ತಿಳಿಯುತ್ತಾಳೆ.

ತನ್ನ ಅಪನಂಬಿಕೆಯ ವ್ಯಾಪ್ತಿಯಿಂದೀಚೆಗೆ ಅವಳು ಯಾವುದೇ ವಾಸ್ತವ ಸತ್ಯವನ್ನು ಗ್ರಹಿಸಲು ಸಿದ್ಧಳಿಲ್ಲ. ಅವಳು ಅವಳ ಗಂಡನ ಯಾವುದೇ ಚಟುವಟಿಕೆಯನ್ನು ಕಂಡರೂ ತನ್ನ ಊಹೆಯ ಚಿತ್ರಣಕ್ಕೆ ಅಳವಡಿಸಿಕೊಳ್ಳುತ್ತಾಳೆ. ಅವಳ ಕಲ್ಪನೆ ಅಥವಾ ನಂಬಿಕೆಗೆ ಹೊರತಾಗುವಂತಹ ಸುಳುಹುಗಳನ್ನು, ಸಂಗತಿಗಳನ್ನು ಅಥವಾ ಎಳೆಗಳನ್ನು ನಿರ್ಲಕ್ಷಿಸುತ್ತಾಳೆ. ಮಾನಸಿಕವಾಗಿ ಅದನ್ನು ಗಟ್ಟಿಗೊಳಿಸಿಕೊಳ್ಳುವುದಲ್ಲದೇ ಭಾವುಕವಾಗಿಯೂ ಕೂಡ ಅದರ ಸ್ವೀಕೃತಿ ಮತ್ತು ಅಭಿವ್ಯಕ್ತಿಗಳಾಗುತ್ತಿರುತ್ತವೆ. ಅವಳ ನಂಬಿಕೆ ಗಂಡನ ಅಪನಂಬಿಕೆ. ಅವಳ ಸಾಕ್ಷ್ಯಾಧಾರ ನಿರೂಪಣೆ ಅವನಿಗೆ ಮಿಥ್ಯಾರೋಪ. ಈ ಹೆಂಗಸಿನ ವಾಸ್ತವಾತೀತ ಕಾಲ್ಪನಿಕ ನಂಬಿಕೆ ಒಂದು ರೋಗ. ಇಂತಹ ಅಪನಂಬಿಕೆಯ ಗೀಳಿನ ರೋಗವನ್ನು ಕನ್ಫರ್ಮೇಶನ್ ಬಯಾಸ್ ಅಥವಾ ಕನ್ಫರ್ಮೇಟರಿ ಬಯಾಸ್ ಅಥವಾ ಮೈಸೈಡ್ ಬಯಾಸ್ ಎಂದು ಕರೆಯುತ್ತಾರೆ. ನಾವು ಸಾಧಾರಣವಾಗಿ ಪೂರ್ವಾಗ್ರಹ ಎಂದಷ್ಟೇ ಕರೆಯೋಣ. ಇದು ವಾಸಿಯಾಗುವ ರೋಗವೇನಲ್ಲ. ಆದರೆ ತನಗೊಂದು ಈ ರೋಗವಿದೆ ಎಂದು ತಿಳಿದರೆ ಇದರ ಬಗ್ಗೆ ತಿಳುವಳಿಕೆಯನ್ನು ಪಡೆಯುವುದರ ಮೂಲಕ, ತಾರ್ಕಿಕವಾಗಿ ಮತ್ತು ವಿಮರ್ಶಾತ್ಮಕವಾಗಿ ತನ್ನ ಆಲೋಚನೆ ಮತ್ತು ಅಭಿಪ್ರಾಯಗಳನ್ನು ವಿವೇಚಿಸಿಕೊಂಡು ಸಂಬಂಧಗಳ ನಿರ್ವಹಣೆ ಮಾಡಬಹುದು. ಸಂಘರ್ಷಗಳನ್ನು ತಪ್ಪಿಸಬಹುದು. ಸಾಮರಸ್ಯವನ್ನು ಪ್ರಜ್ಞಾಪೂರ್ವಕವಾಗಿ ಕಾಪಾಡಬಹುದು.

ಗಂಡನ ಬಗ್ಗೆ ಹೆಂಡತಿ ಹೊಂದಿರುವ ಪೂರ್ವಾಗ್ರಹದ ಬಗ್ಗೆ ಉದಾಹರಣೆಯಾಗಿ ಹೇಳಿದೆ. ಆದರೆ ಇದು ಲಿಂಗಾತೀತ, ವರ್ಗಾತೀತ, ವರ್ಣಾತೀತ, ಜಾತ್ಯಾತೀತ, ಧರ್ಮಾತೀತ. ಯಾರಲ್ಲಿ ಬೇಕಾದರೂ ಈ ರೋಗವಿರಬಹುದು.

ತರಹೇವಾರಿ ಪೂರ್ವಾಗ್ರಹಗಳು ವಿವಿಧ ರೀತಿಗಳಲ್ಲಿ ವಿವಿಧ ಜನರಲ್ಲಿ ವಿವಿಧ ಚಟುವಟಿಕೆಗಳಲ್ಲಿ ನಿರತವಾಗಿರುತ್ತವೆ. ಇವು ಸಂಕಲಿತವಾಗಿ ಸಮಾಜದಲ್ಲೂ ಕಾಣುತ್ತೇವೆ. ತನ್ನ ಮಕ್ಕಳನ್ನು, ತನ್ನ ಸಂಗಾತಿಯನ್ನು, ತನ್ನ ತಂದೆ ತಾಯಿಯನ್ನು ನಂಬದ ಇಂತಹ ಮನಸ್ಥಿತಿಗಳು ಸಮಾಜದಲ್ಲಿ ಇತರರನ್ನೂ ನಂಬುವುದಿಲ್ಲ. ವ್ಯಕ್ತಿಗತ ಸಂಬಂಧಗಳಲ್ಲಿ ಕಾರಣಗಳನ್ನು ಹುಡುಕಿಕೊಂಡಂತೆ, ಇಲ್ಲಿಯೂ ಕಾರಣಗಳನ್ನು ಹುಡುಕಿಕೊಳ್ಳುತ್ತಾರೆ. ಆದರೆ ಅದನ್ನು ಕಾರಣಗಳು ಎನ್ನಲಾಗುವುದಿಲ್ಲ, ಇರುವ ರೋಗವು ತನ್ನ ಲಕ್ಷಣಗಳನ್ನು ಪ್ರಕಟಗೊಳಿಸಿಕೊಳ್ಳಲು ಆಯ್ದುಕೊಳ್ಳುವ ನೆಪಗಳು.

ಹೆಂಡತಿಯೊಬ್ಬಳು ತನ್ನ ಗಂಡನ ಮೇಲಿನ ಅಪನಂಬಿಕೆಯ ಗೀಳಿನ ರೋಗದ ಚಿತ್ರಣಗಳನ್ನು ಸಮರ್ಥಿಸಿಕೊಳ್ಳಲು ಹೇಗೆ ಸಂಗತಿಗಳನ್ನು ಹೆಣೆಯುತ್ತಾಳೋ ಹಾಗೇ ಸಮಾಜದಲ್ಲಿ ಸಮೂಹಗಳನ್ನು, ಸಮುದಾಯಗಳನ್ನು ಗುರಿ ಮಾಡಿಕೊಂಡು ಅವರ ಅಪನಂಬಿಕೆಯನ್ನು ಗಟ್ಟಿಯಾಗಿಯೂ ಮತ್ತು ಸಮರ್ಥವಾಗಿಯೂ ಮಂಡಿಸುವುದರ ಮೂಲಕ ತೃಪ್ತಿಯನ್ನು ಪಡೆಯುತ್ತಿರುತ್ತಾರೆ. ಈ ಬಗೆಯ ನಕಾರಾತ್ಮಕವಾದ ತೃಪ್ತಿಯು ಅವರ ರೋಗಗ್ರಸ್ತ ಪರಿಣಾಮವಾಗಿರುತ್ತದೆಯೇ ಹೊರತು ಆಂತರಿಕವಾಗಿ ಅವರಾಗಲಿ, ಅವರು ಗುರಿ ಮಾಡಿರುವ ಸಮುದಾಯ ಅಥವಾ ಸಮೂಹಗಳಾಗಲಿ ಸಂತೋಷ ನೆಮ್ಮದಿಯಾಗಿ ಇರಲು ಆಗದಂತಹ ಸಂಘರ್ಷಗಳು ಉಂಟಾಗುತ್ತಿರುತ್ತವೆ.

ಸುಮ್ಮನೆ ಉದಾಹರಿಸುವಾದರೆ, ಇಂತಹ ಗೀಳಿನ ರೋಗದವರು ಹಿಂದುತ್ವದ ಸಂಘಟನೆಯವರಾಗಿದ್ದರೆ, ಅವರಿಗಿರುವ ಕಲ್ಚರ್ ಕಾಂಪ್ಲೆಕ್ಸ್ ಮನಸ್ಥಿತಿಯಂತೆ ಮುಸಲ್ಮಾನರನ್ನು ದ್ವೇಷಿಸಬೇಕು. ಹಾಗಾಗಿ ತಾವೆಂದೂ ಅಧ್ಯಯನ ಮತ್ತು ಅನುಭವ ಪಡೆಯದಿದ್ದರೂ ಮಸೀದಿಯಲ್ಲಿ ಕೂಗಿ ಹೇಳುವುದು ಕಾಫೀರರನ್ನು ಕೊಲ್ಲಿ ಎಂದು. ಅಂದರೆ ಮಸೀದಿಯಿಂದ ನಮಗೆ ಅರ್ಥವಾಗದ ಭಾಷೆಯಲ್ಲಿ ಅವರ ಜನರಿಗೆ ಹೇಳುವುದು ನಮ್ಮನ್ನೆಲ್ಲಾ ಕೊಲ್ಲಿ ಎಂದು.

ಸಂಕಲಿತವಾಗಿ ಈ ಪೂರ್ವಾಗ್ರಹದ ಗೀಳಿನ ರೋಗಿಗಳೆಲ್ಲಾ ಹಿಂದೂ ಮುಂದೂ ವಿವೇಚಿಸದೇ ಇದನ್ನು ಒಪ್ಪುತ್ತಾರೆ ಮತ್ತು ಅದನ್ನು ನಂಬುತ್ತಾರೆ. ಅವರ ಗೀಳಿನ ರೋಗಕ್ಕೆ ಇವು ಆಹಾರವಾಗುತ್ತವೆ. ಇಂತವರ ಲೇಬಲ್ ಹಿಂದುತ್ವ ಅಲ್ಲದೆ ಇದ್ದರೆ, ಇಸ್ಲಾಂದಾದರೂ ಆದೀತು. ಕ್ರೈಸ್ತರಾದರೂ ಆದೀತು. ಕಮ್ಯುನಿಸ್ಟ್, ಲಿಂಗಾಯತ, ಬ್ರಾಹ್ಮಣ, ಬಿಳಿಯ, ಕರಿಯ; ಯಾವುದಾದರೂ ಆದೀತು. ಇದು ಕಲ್ಚರ್ ಕಾಂಪ್ಲೆಕ್ಸ್. ಮತ್ತೊಂದು ಸಂಸ್ಕೃತಿ ಅಥವಾ ಸಮುದಾಯದವರನ್ನು ಸಹಿಸದಿರುವುದು, ಸಾರಾಸಗಟಾಗಿ ತಿರಸ್ಕರಿಸುವುದು, ಅವರು ಹೀಗೆಯೇ ಎಂದು ಪೂರ್ವನಿರ್ಧಾರಗಳನ್ನು ತಳೆಯುವುದು, ಅವರನ್ನು ಅನುಮಾನಿಸುವುದು, ಅಪಮಾನಿಸುವುದು; ಹೀಗೆ ಬೇಕಾದಷ್ಟು ಕಂದಕ ತೋಡುವ ಕೆಲಸಗಳನ್ನು ಈ ಸಂಸ್ಕೃತಿಯ ಹಿರಿಮೆ ಮಾಡಬಹುದು.

Writer - ಯೋಗೇಶ್ ಮಾಸ್ಟರ್

contributor

Editor - ಯೋಗೇಶ್ ಮಾಸ್ಟರ್

contributor

Similar News