ದ್ವೇಷಭಾಷಣ: ನ್ಯಾಯಾಲಯದ ಉಸ್ತುವಾರಿಯಲ್ಲಿ ತನಿಖೆ, ಕಾನೂನು ಕ್ರಮ ಕೋರಿ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಕೆ
ಹೊಸದಿಲ್ಲಿ,ಡಿ.31: ಪ್ರವಾದಿ ಮುಹಮ್ಮದ್ (ಸ.ಅ.) ಅವರ ವ್ಯಕ್ತಿತ್ವದ ಮೇಲೆ ನಿರಂತರ ದಾಳಿ ಮತ್ತು ದೇಶದ ವಿವಿಧ ಭಾಗಗಳಲ್ಲಿ ಮುಸ್ಲಿಮರ ನಂಬಿಕೆ ವ್ಯವಸ್ಥೆಯನ್ನು ಗುರಿಯಾಗಿಸಿಕೊಂಡು ವಿವಿಧ ವ್ಯಕ್ತಿಗಳಿಂದ ಅವಹೇಳನಕಾರಿ ಹೇಳಿಕೆಗಳಿಗೆ ಸಂಬಂಧಿಸಿದ ದ್ವೇಷಾಪರಾಧಗಳಲ್ಲಿ ನ್ಯಾಯಾಲಯದ ಉಸ್ತುವಾರಿಯಲ್ಲಿ ತನಿಖೆ ಮತ್ತು ಕಾನೂನು ಕ್ರಮವನ್ನು ಕೋರಿ ಜಮೀಯತ್ ಉಲಮಾ-ಇ-ಹಿಂದ್ ತನ್ನ ಅಧ್ಯಕ್ಷ ವೌಲಾನಾ ಸೈಯದ್ ಮಹಮೂದ್ ಅಸದ್ ಮದನಿ ಅವರ ಮೂಲಕ ಸವೋಚ್ಚ ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಿದೆ.
ದ್ವೇಷ ಭಾಷಣಗಳು,ವಿಶೇಷವಾಗಿ ಪ್ರವಾದಿಯವರನ್ನು ಗುರಿಯಾಗಿಸಿಕೊಂಡು ಹೇಳಿಕೆಗಳಿಗೆ ಸಂಬಂಧಿಸಿದಂತೆ ವಿವಿಧ ರಾಜ್ಯಗಳಿಂದ ಕ್ರಮಾನುಷ್ಠಾನ ವರದಿಗಾಗಿ ಕೇಂದ್ರಕ್ಕೆ ನಿರ್ದೇಶ ನೀಡುವಂತೆ ಅರ್ಜಿಯಲ್ಲಿ ಕೋರಲಾಗಿದೆ.
ದೇಶದಲ್ಲಿಯ ಎಲ್ಲ ದ್ವೇಷಾಪರಾಧಗಳಿಗೆ ಸಂಬಂಧಿಸಿದ ಎಲ್ಲ ದೂರುಗಳ ಸಂಕಲನಕ್ಕಾಗಿ ಸ್ವತಂತ್ರ ಸಮಿತಿಯ ರಚನೆಗಾಗಿ ನಿರ್ದೇಶ ಮತ್ತು ಆದೇಶವನ್ನು ವಕೀಲ ಎಂ.ಆರ್.ಶಂಸುದ್ದೀನ್ ಅವರು ನ್ಯಾಯಾಲಯದಲ್ಲಿ ದಾಖಲಿಸಿರುವ ಈ ಅರ್ಜಿಯಲ್ಲಿ ಕೋರಲಾಗಿದೆ.
ಪ್ರವಾದಿಯವರನ್ನು ಅವಮಾನಿಸುವುದು ಇಸ್ಲಾಮಿನ ಬುನಾದಿಯ ಮೇಲಿನ ದಾಳಿಗೆ ಸಮನಾಗಿದೆ ಮತ್ತು ಆ ಅರ್ಥದಲ್ಲಿ ಅದು ಅತ್ಯಂತ ಗಂಭೀರ ಸ್ವರೂಪದ್ದಾಗಿದೆ. ಏಕೆಂದರೆ ಅದು ಮುಸ್ಲಿಮರನ್ನು ಗುರಿಯಾಗಿಸಿಕೊಳ್ಳುವುದು ಮಾತ್ರವಲ್ಲ,ಅವರ ನಂಬಿಕೆಯ ಆಧಾರದ ಮೇಲೆಯೇ ದಾಳಿಯನ್ನು ಮಾಡುತ್ತದೆ ಎಂದು ಹೇಳಿರುವ ಅರ್ಜಿಯು,ಇಂತಹ ದ್ವೇಷ ಭಾಷಣಗಳು ಇನ್ನೊಬ್ಬರ ನಂಬಿಕೆಗಳ ಟೀಕಾತ್ಮಕ ನಿರಾಕರಣೆಯ ಮಿತಿಯನ್ನು ಮೀರುತ್ತವೆ ಮತ್ತು ಧಾರ್ಮಿಕ ಅಸಹಿಷ್ಣುತೆಯನ್ನು ಪ್ರಚೋದಿಸುವ ಎಲ್ಲ ಸಾಧ್ಯತೆಗಳಿವೆ. ಚಿಂತನೆ,ಆತ್ಮಸಾಕ್ಷಿ ಮತ್ತು ಧರ್ಮದ ಸ್ವಾತಂತ್ರಕ್ಕೆ ಸಂಬಂಧಿಸಿದಂತೆ ಈ ದ್ವೇಷಭಾಷಣಗಳು ಹೊಂದಿಕೆಯಾಗುವುದಿಲ್ಲ ಎಂದು ರಾಜ್ಯ ಮತ್ತು ಕೇಂದ್ರದ ಅಧಿಕಾರಿಗಳು ಪರಿಗಣಿಸಬೇಕಿದೆ ಮತ್ತು ಸೂಕ್ತ ನಿರ್ಬಂಧಾತ್ಮಕ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ ಎಂದು ತಿಳಿಸಿದೆ.
ಇಂತಹ ದ್ವೇಷಭಾಷಣಗಳು ನಮ್ಮ ಸಂವಿಧಾನದ ಮೂಲ ರಚನೆಯ ಭಾಗವಾಗಿರುವ ನಮ್ಮ ದೇಶದ ಜಾತ್ಯತೀತ ಸ್ವರೂಪವನ್ನು ನಾಶಗೊಳಿಸುತ್ತವೆ ಎಂದೂ ಅರ್ಜಿಯಲ್ಲಿ ಬೆಟ್ಟು ಮಾಡಲಾಗಿದೆ.
ತಾನು ಸಾಕಷ್ಟು ಸಮಯವನ್ನು ಕಾದ ಮತ್ತು ಸರಕಾರಿ ಅಧಿಕಾರಿಗಳು ಪರಿಹಾರ ಮತ್ತು ನಿರ್ಬಂಧಾತ್ಮಕ ಕ್ರಮಗಳನ್ನು ತೆಗೆದುಕೊಳ್ಳಲು ಸಾಕಷ್ಟು ಸಮಯ ನೀಡಿದ ಬಳಿಕ ನ್ಯಾಯಾಲಯದ ಮೆಟ್ಟಲನ್ನೇರಿರುವುದಾಗಿ ಜಮೀಯರ್ ಉಲಮಾ-ಇ-ಹಿಂದ್ ತಿಳಿಸಿದೆ.
ಆದರೆ ಈ ವಿಷಯದಲ್ಲಿ ಅಧಿಕಾರಿಗಳು ಸಂಪೂರ್ಣವಾಗಿ ವಿಫಲಗೊಂಡಿರುವಂತೆ ಕಂಡು ಬರುತ್ತಿದೆ. ಪೊಲೀಸ್ ಅಧಿಕಾರಿಗಳಿಗೆ ಸೂಕ್ತ ದೂರುಗಳನ್ನು ಸಲ್ಲಿಸುವ ಮೂಲಕ ಅರ್ಜಿದಾರರೂ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಹಲವಾರು ಕೋಮು ಸೂಕ್ಷ್ಮ ಭಾಷಣಗಳನ್ನು ಮಾಡಲಾಗಿದ್ದರೂ ಪೊಲಿಸರು ಎಫ್ಐಆರ್ಗಳನ್ನೇ ದಾಖಲಿಸಿಕೊಂಡಿಲ್ಲ ಮತ್ತು ನೊಂದ ವ್ಯಕ್ತಿಗಳು ಎಫ್ಐಆರ್ ದಾಖಲಿಸಲು ಸೂಕ್ತ ನಿರ್ದೇಶಗಳನ್ನು ಕೋರಿ ನ್ಯಾಯಾಲಯಗಳ ಮೊರೆ ಹೋಗಿದ್ದರೂ ನ್ಯಾಯಾಧೀಶರು ದೂರುಗಳನ್ನು ವಜಾಗೊಳಿಸಿದ್ದಾರೆ ಎಂದಿರುವ ಅರ್ಜಿಯು,ಮುಸ್ಲಿಂ ಸಮುದಾಯದ ಮೇಲಿನ ನಿರಂತರ ದಾಳಿಯ ಹಿನ್ನೆಲೆಯಲ್ಲಿ ಹಿಂಸಾತ್ಮಕ ಕೃತ್ಯಗಳಲ್ಲಿ ಹೆಚ್ಚಾಗಿ ಮುಸ್ಲಿಂ ಸಮುದಾಯಕ್ಕೆ ಸೇರಿದ ಹಲವರು ಪ್ರಾಣಗಳನ್ನು ಕಳೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಅರ್ಜಿಯಲ್ಲಿ ಮಾಡಿಕೊಂಡಿರುವ ಕೋರಿಕೆಗಳಿಗೆ ಅನುಗುಣವಾಗಿ ಸೂಕ್ತ ನಿರ್ದೇಶಗಳನ್ನು ಹೊರಡಿಸುವುದನ್ನು ಈ ನ್ಯಾಯಾಲಯವು ಪರಿಗಣಿಸುವುದು ಅಗತ್ಯವಾಗಿದೆ ಎಂದು ಹೇಳಿದೆ.