ಪ್ರಧಾನಿ ಮೋದಿ ವಿರುದ್ಧ ಇರುವುದು ದ್ವೇಷವಲ್ಲ, ವಿಪರೀತ ಸಿಟ್ಟು : ಡಾ. ಎಚ್ ಸಿ ಮಹದೇವಪ್ಪ

Update: 2022-01-18 07:37 GMT

ಜಾಗತಿಕ ಆರ್ಥಿಕ ವೇದಿಕೆಯಲ್ಲಿ ಟೆಲಿಪ್ರಾಮ್ಟರ್ ಸಮಸ್ಯೆಗೆ ಒಳಗಾಗಿ ಪ್ರಧಾನಿಗಳು ಮಾತನಾಡಲೂ ಕಷ್ಟಪಡುತ್ತಾ ದೇಶವನ್ನು ಮುಜುಗರಕ್ಕೆ ಈಡು ಮಾಡಿರುವ ಸಂದರ್ಭವು ಬಹಳ ವಿಷಾದಕರ ಬೆಳವಣಿಗೆಯಾಗಿದೆ. ಆರ್ಥಿಕ ಮತ್ತು ಆಡಳಿತಾತ್ಮಕ ನೀತಿಗಳ ಬಗ್ಗೆ ಸ್ವಯಂ ತಿಳುವಳಿಕೆಯಿಂದ ಮಾತನಾಡಲು ಸಾಧ್ಯವಾಗದ ಓರ್ವ ಜನ ವಿರೋಧಿ ಪ್ರಧಾನಿಯು ಎಷ್ಟೇ ಪ್ರಯತ್ನಿಸಿದರೂ ಅವರ ಟೊಳ್ಳುತನ ಒಂದಲ್ಲಾ ಒಂದು ರೀತಿಯಲ್ಲಿ ಬಯಲಾಗುತ್ತಲೇ ಇದೆ ಎಂದು ಮಾಜಿ ಸಚಿವ ಡಾ. ಎಚ್ ಸಿ ಮಹದೇವಪ್ಪ ತಿಳಿಸಿದ್ದಾರೆ.

ಭಾರತದ ಇತರೆ ಪ್ರಧಾನಿಗಳ ಬಗ್ಗೆ ಕ್ಷಿಪ್ರವಾಗಿ ನೋಡುವುದಾದರೆ, ಆಧುನಿಕ ಭಾರತಕ್ಕೆ ವಿಜ್ಞಾನ ಮತ್ತು ತಂತ್ರಜ್ಞಾನದ ಅಡಿಗಲ್ಲು ಹಾಕಿದ ನೆಹರು, ವಿವೇಕಯುತ ಸಮಾಜವೊಂದರ ನಿರ್ಮಾಣಕ್ಕೆ ವಿಜ್ಞಾನದ ಅಗತ್ಯವನ್ನು ಒತ್ತಿ ಹೇಳಿದ್ದರು. 

ಹಸಿವು ಮತ್ತು ಬಡತನ, ಸ್ವಚ್ಛತೆಯ ಕೊರತೆ ಮತ್ತು ಅನಕ್ಷರತೆ, ಮೂಢನಂಬಿಕೆ ಮತ್ತು ಜಡ್ಡುಗಟ್ಟಿದ ಸಂಪ್ರದಾಯ ಮತ್ತು ಪರಂಪರೆ, ವ್ಯರ್ಥವಾಗುತ್ತಿರುವ ಅಗಾಧ ಸಂಪನ್ಮೂಲ ಅಥವಾ ಹಸಿದವರಿರುವ ಶ್ರೀಮಂತ ದೇಶ, ಈ ಎಲ್ಲ ಸಮಸ್ಯೆಗಳಿಗೆ ಏಕೈಕ ಪರಿಹಾರ ವಿಜ್ಞಾನ. ಯಾರು ತಾನೇ ಇಂದು ವಿಜ್ಞಾನವನ್ನು ಉಪೇಕ್ಷೆ ಮಾಡುತ್ತಾರೆ? ಪ್ರತಿ ತಿರುವಿನಲ್ಲೂ ನಾವು ಅದರ ನೆರವನ್ನು ಪಡೆದುಕೊಳ್ಳಬೇಕಾಗಿದೆ. ವಿಜ್ಞಾನಕ್ಕೆ ಮತ್ತು ವಿಜ್ಞಾನದೊಂದಿಗೆ ಸ್ನೇಹ ಮಾಡಿಕೊಂಡವರದ್ದೇ ಭವಿಷ್ಯ. ಹೀಗೆ ಹೇಳಿದ್ದರು ಪಂಡಿತ್‌ ಜವಾಹರ್‌ ಲಾಲ್‌ ನೆಹರು. ಭಾರತವನ್ನು ಆಧುನಿಕತೆ ಒಯ್ಯುವುದಕ್ಕೆ ಬೇಕಾದ ಎಲ್ಲ ಮುನ್ನೋಟವನ್ನು ಹೊಂದಿದ್ದರು ಅವರು.

ಪರಂಪರೆಯ ಹೆಸರಿನಲ್ಲಿ ವ್ಯಾಪಿಸುತ್ತಿರುವ ಹುಸಿ ವಿಜ್ಞಾನ, ಸುಳ್ಳು ಸತ್ಯಗಳನ್ನು ಸ್ಪಷ್ಟವಾಗಿ ನೋಡಲಾಗದ ವಿವೇಚನಾ ರಹಿತ ಮನಸ್ಥಿತಿ, ಅವೈಜ್ಞಾನಿಕ ಮತ್ತು ಅವೈಚಾರಿಕ ಅಧಿಕಾರಗಳನ್ನು ನಮ್ಮನ್ನು ಆಳುತ್ತಿರುವಾಗ ನೆಹರು ಅವರು ಬೆಳೆಸಿದ ವಿಚಾರವಾದಿ, ವೈಜ್ಞಾನಿಕ ಪರಂಪರೆಯ ನೆನಪಾಗುತ್ತದೆ.

1946ರಲ್ಲಿ ಮೊದಲ ಬಾರಿಗೆ ‘ಸೈಂಟಿಫಿಕ್‌ ಟೆಂಪರ್‌’ ಎಂಬ ನುಡಿಗಟ್ಟನ್ನು ಪ್ರಯೋಗಿಸಿದ್ದು ನೆಹರೂ ಅವರೇ. ದೇಶದ ಏಳಿಗೆಯ ವಿಷಯದಲ್ಲಿ ವೈಜ್ಞಾನಿಕತೆಯ ಪಾತ್ರ ಎಷ್ಟು ಮಹತ್ವದ ಎಂಬುದನ್ನು ಅವರು ಅರಿತಿದ್ದರು.

ಅಷ್ಟೇ ಅಲ್ಲದೇ ಆ ಕಾಲದ ಹೆಮ್ಮೆಯ ವಿಜ್ಞಾನಿಗಳಾದ, ಸರ್‌ ಸಿ ವಿ ರಾಮನ್‌, ಹೋಮಿ ಜಹಾಂಗಿರ್‌ ಬಾಬಾ, ಸತೀಶ್‌ ಧವನ್‌, ಶಾಂತಿ ಸ್ವರೂಪ್‌ ಭಟ್ನಾಗರ್‌ ಅವರಗಳನ್ನು ಎಲ್ಲ ಪ್ರತಿಷ್ಠಿತ ವಿಜ್ಞಾನ-ತಂತ್ರಜ್ಞಾನಗಳ ಸಂಸ್ಥೆಗಳ ನೇತೃತ್ವವಹಿಸಿಕೊಳ್ಳುವಂತೆ ಮಾಡಿದರು.

ಬಾಬಾ ಆಟೋಮಿಕ್‌ ರೀಸರ್ಚ್‌ ಸೆಂಟರ್‌, ಫಿಸಿಕಲ್‌ ರೀಸರ್ಚ್‌ ಲ್ಯಾಬೊರೆಟರಿ ಸ್ಥಾಪನೆಯಷ್ಟೇ ಅಲ್ಲದೇ, ಭಾರತವನ್ನು ಅಭಿವೃದ್ಧಿಶೀಲವಾಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನವನ್ನು ಮಾಡಿದರು. ಈಗ ದೇಶವು ಕೊರೋನದಂತಹ ಸೋಂಕಿನ ಆತಂಕವನ್ನು ಎದುರಿಸುತ್ತಿದೆ. ಆದರೆ 1953ರಲ್ಲಿ ಇದಕ್ಕಿಂತಲೂ ತೀವ್ರವಾದ ಸೋಂಕನ್ನು ನೆಹರು ನೇತೃತ್ವದ ಆಡಳಿತವು ಎದುರಿಸಿತ್ತು.

ಮಲೇರಿಯಾ, ಸಿಡುಬು, ಲಕ್ಷಕ್ಕೂ ಹೆಚ್ಚು ಜೀವಗಳನ್ನು ಬಲಿತೆಗೆದುಕೊಂಡ ಸಂದರ್ಭದಲ್ಲಿ ಆ ಸಾವಿನ ಪ್ರಮಾಣವನ್ನು ಸಾವಿರಕ್ಕೆ ಇಳಿಸುವಲ್ಲಿ ನೆಹರೂ ಆಡಳಿತ ಯಶಸ್ವಿಯಾಗಿತ್ತು. ನಂತರದ ದಿನಗಳಲ್ಲಿ ಪಂಚವಾರ್ಷಿಕ ಯೋಜನೆಗಳಲ್ಲಿ ಸಾಂಕ್ರಾಮಿಕಗಳ ನಿಯಂತ್ರಣಕ್ಕೆ ನಿರ್ದಿಷ್ಟ ಕಾರ್ಯಕ್ರಮಗಳನ್ನು ರೂಪಿಸಿದ ನೆಹರೂ ಅಂತಹ ಓರ್ವ ವಿದ್ವಾಂಸ, ಸಮಾಜವಾದಿ ಮೌಲ್ಯಗಳನ್ನು ಹೊಂದಿದ ಹೋರಾಟಗಾರ ಈ ದೇಶದ ಶಾಸನ ರೂಪಿಸುವ ಸ್ಥಾನದಲ್ಲಿ ಇದ್ದದ್ದು ಭಾರತದ ಹೆಮ್ಮೆಯ ವಿಷಯಗಳಲ್ಲಿ ಒಂದು.

ಚರಂಡಿಯಿಂದ ನೇರವಾಗಿ ಗ್ಯಾಸ್‌ ಉತ್ಪತ್ತಿ ಮಾಡುವ, ಇಬ್ಬನಿಯಿಂದ ನೀರು, ವಿದ್ಯುತ್‌ ಉತ್ಪಾದಿಸುವ, ಹವಾಮಾನ ವೈಪರೀತ್ಯ ಗಂಭೀರ ಸಮಸ್ಯೆಯೇ ಅಲ್ಲವೆನ್ನುವ ಅವೈಜ್ಞಾನಿಕ ಪ್ರಧಾನಿಯವರು ಆಳ್ವಿಕೆ ನಡೆಸುತ್ತಿರುವ ಈ  ಕಾಲದಲ್ಲಿ ನೆಹರು ಅವರ ಆಲೋಚನೆ, ಯೋಜನೆ, ಕಾರ್ಯಕ್ರಮಗಳ ಮಹತ್ವವು ಸಹಜವಾಗಿಯೇ ನಮಗೆ ನೆನಪಾಗುತ್ತದೆ.

ಇವರ ನಂತರದ ಪ್ರಧಾನಿಗಳಾಗಿದ್ದ ಗುಲ್ಜಾರೀಲಾಲ್ ನಂದಾ ಅವರು ಕಾರ್ಮಿಕರ ಸಮಸ್ಯೆಗಳನ್ನು ಪರಿಹರಿಸಲು ಯಾವೆಲ್ಲಾ ಕ್ರಮಗಳನ್ನು ಕೈಗೊಂಡರು ಎಂಬುದಕ್ಕೆ ಇತಿಹಾಸವು ಸಾಕ್ಷಿಯಾಗಿದೆ.

ಇನ್ನು ಜೈ ಜವಾನ್ ಜೈ ಕಿಸಾನ್ ಎಂಬ ಘೋಷಣೆಯ ಕರ್ತೃ ಲಾಲ್ ಬಹದ್ದೂರ್ ಶಾಸ್ತ್ರಿಯವರು ಕ್ಷೀರ ಉತ್ಪಾದನೆ ಮತ್ತು ಹಸಿರು ಕ್ರಾಂತಿಗೆ ಒತ್ತು ನೀಡುವ ಮೂಲಕ ಗ್ರಾಮೀಣ ಆರ್ಥಿಕತೆಯ ಅಂತಃಶಕ್ತಿಯನ್ನು ಹೆಚ್ಚಿಸಿದರು.

ಇನ್ನು ಬಡವರ ಪಾಲಿಗೆ ಸದಾ ನೆನಪಾಗಿ ಉಳಿಯಬಲ್ಲ ಇಂದಿರಾ ಗಾಂಧಿಯವರ ಗರೀಬಿ ಹಟಾವೋ, ಉಳುವವನೇ ಹೊಲದೊಡೆಯ,  ಪಂಚವಾರ್ಷಿಕ ಯೋಜನೆ, 20 ಅಂಶಗಳ ಕಾರ್ಯಕ್ರಮ, ರಾಜಕೀಯ ಚಾಣಾಕ್ಷತೆಯನ್ನು ಭಾರತ ಎಂದೂ ಮರೆಯದು.

ಜೊತೆಗೆ ವಿ.ಪಿ ಸಿಂಗ್ ಅವರು ಹಿಂದುಳಿದ ವರ್ಗದವರಿಗಾಗಿ ಮಂಡಲ್ ಆಯೋಗದ ಶಿಫಾರಸ್ಸುಗಳನ್ನು ಜಾರಿಗೊಳಿಸಿ ಪರಿಶಿಷ್ಟ ಜಾತಿ ಮತ್ತು ವರ್ಗಗಳ ರಕ್ಷಣೆ ಮತ್ತು ಏಳಿಗೆಯ ದೃಷ್ಟಿಯಿಂದ 1989 ರಲ್ಲಿ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಕಾಯ್ದೆಯನ್ನು ಜಾರಿಗೊಳಿಸುವಂತಹ ದೂರದೃಷ್ಟಿಯ ಕೆಲಸವನ್ನು ಮಾಡಿದರು.

ಒಂದು ವರ್ಷದ ಅವರ ಪ್ರಧಾನಿ ಆಡಳಿತವು ಅವರ ಬದ್ಧತೆಯ ಕಾರಣಕ್ಕೇ ಕೊನೆಗೊಂಡರೂ ಅವರು ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ನಡೆಸಿದ ಅವರು ಸದಾ ಜೀವಂತವಾಗಿ ಉಳಿದರು.

ಇನ್ನು ರೈತರ ಪರವಾದ ಭೂ ಸುಧಾರಣಾ ಕಾಯ್ದೆಗಳ ರುವಾರಿ ಚರಣ್ ಸಿಂಗ್, ಆಧುನಿಕ ತಂತ್ರಜ್ಞಾನಕ್ಕೆ ಮುನ್ನುಡಿ ಬರೆದ ರಾಜೀವ್ ಗಾಂಧಿ, ಕೈಗಾರೀಕರಣ, ಉದಾರೀಕರಣ ಮತ್ತು ನೆಹರೂ ಮಾದರಿಯ ಅಭಿವೃದ್ಧಿಗೆ ಹೆಸರಾದ ಪಿ.ವಿ ನರಸಿಂಹರಾವ್, ಗಾಂಧಿವಾದಿ ಮಾರ್ಗದ ಆಡಳಿತಗಾರ ಮೊರಾರ್ಜಿ ದೇಸಾಯಿ ಹಾಗೂ ಅಪರೂಪದ ವ್ಯಕ್ತಿತ್ವ ಇಟ್ಟುಕೊಂಡಿದ್ದ ಜನಾನುರಾಗಿ ವ್ಯಕ್ತಿತ್ವದ ಐ.ಕೆ ಗುಜ್ರಾಲ್,  ಜನ ಸಾಮಾನ್ಯರ ಭಾವನೆಯನ್ನು ಅರಿತಿದ್ದ ಹೆಚ್ ಡಿ ದೇವೇಗೌಡ, ಒಂದಷ್ಟು ರಸ್ತೆಗಳ ಅಭಿವೃದ್ಧಿಗೆ ಕಾರಣವಾದ ಅಟಲ್ ಬಿಹಾರಿ ವಾಜಪೇಯಿ ಮತ್ತು ಭಾರತದ ಆರ್ಥಿಕತೆಯನ್ನು ತನ್ನ ಆರ್ಥಿಕ ಜ್ಞಾನದ ಮೂಲಕವೇ ಬಹಳಷ್ಟು ಎತ್ತರಕ್ಕೆ ಏರಿಸಿದ ಡಾ.ಮನಮೋಹನ್ ಸಿಂಗ್ ಅವರೆಲ್ಲರೂ ಭಾರತದ ಪ್ರಧಾನಿಗಳಾಗಿ ದೇಶದ ಅಂತರ್ ಶಕ್ತಿಯನ್ನು ಕುಂದದಂತೆ ಕೆಲಸ ಮಾಡಿದರು.

ಆದರೆ ಈಗಿನ ಪ್ರಧಾನಿಗಳಾದ ನರೇಂದ್ರ ಮೋದಿ ಅವರನ್ನು ನೋಡಿದರೆ ಬಹಳಷ್ಟು ಬೇಸರವೆನಿಸುತ್ತದೆ. ಕಾರಣ ಇವರಿಗೆ ಸ್ವಂತ ಆಲೋಚನೆಯಾಗಲೀ ದೇಶವನ್ನು ಜನಪರವಾಗಿ ಮುನ್ನಡೆಸುವಂತಹ ಯಾವುದೇ ಛಾತಿಯಾಗಲೀ ದಕ್ಷತೆಯಾಗಲೀ ಇಲ್ಲ.

ಜಾಗತಿಕ ವೇದಿಕೆಯಲ್ಲಿ ಟೆಲಿಪ್ರಾಮ್ಟರ್ ಇಲ್ಲದಾಗ ಏನು ಮಾತನಾಡಬೇಕೆಂದು ತಿಳಿಯದೇ ಒಮ್ಮೆ ಕಕ್ಕಾಬಿಕ್ಕಿಯಾಗಿ ಅಸಂಬದ್ಧವಾಗಿ ಮಾತನಾಡುತ್ತಿರುವ ಇವರ ರೀತಿಯೇ ನನ್ನ ಮಾತಿಗೆ ಸಾಕ್ಷಿ.

ಭಾರತದ ರಾಜಕೀಯ ಇತಿಹಾಸವನ್ನು ಸೂಕ್ಷ್ಮವಾಗಿ ನೋಡಿದಾಗ ಮಿಕ್ಕೆಲ್ಲ ಪ್ರಧಾನಿಗಳು ತಮ್ಮದೇ ಮಿತಿಗಳ ನಡುವೆ ಜನರಿಗಾಗಿ ಕೆಲಸ ಮಾಡುವ ಗುಣ ಹೊಂದಿದವರಂತೆ ಕಾಣುತ್ತಾರೆ. ನೆಹರೂ ಆದಿಯಾಗಿ
ಇವರಲ್ಲಿ ಬಹುತೇಕರನ್ನು ಸಮಾಜವಾದವು ಪ್ರಭಾವಿಸಿದೆ.

ಆದರೆ ಈಗಿನ ಪ್ರಧಾನಿಗಳನ್ನು ವೈದಿಕಶಾಹಿತನ, ಬಂಡವಾಳಶಾಹಿ ನೀತಿ, ವ್ಯಾಪಾರೀ ಬುದ್ಧಿ, ಸಣ್ಣತನ, ಮನುವಾದಿ ಮೌಢ್ಯ, ಅವೈಜ್ಞಾನಿಕತೆ, ಹುಸಿ ಪ್ರಚಾರ ಮತ್ತು ಮೂರ್ಖತ್ವಗಳು ಪ್ರಭಾವಿಸಿವೆ. ಈ ಎರಡು ಅವಧಿಯ ಅವರ ಆಡಳಿತವೇ ಈ ಗ್ರಹಿಕೆಗೆ ಸಾಕ್ಷಿಯಾಗಿವೆ.

ಮೂಲತಃ ದೇಶವನ್ನು ನಿರ್ವಹಿಸುವ ಸ್ವಂತ ತಿಳುವಳಿಕೆ, ಜ್ಞಾನ ಮತ್ತು ಅಧ್ಯಯನವಿಲ್ಲದ ವೈದಿಕಶಾಹಿಗಳು ಮತ್ತು ಶ್ರೀಮಂತರ ಹಿತ ಕಾಯುವ ಪ್ರತಿನಿಧಿಯಾಗಿ ಕಾಣುವ ಇವರು ನೋಟ್ ಬ್ಯಾನ್ ನಿಂದ ಹಿಡಿದು ಇಂದಿನ ಕರೋನ ಲಾಕ್ ಡೌನ್ ತನಕ ಜನರ ಬದುಕಿನ ಹಿತದ ವಿರುದ್ಧವೇ ವರ್ತಿಸಿದ್ದಾರೆ ಎನ್ನಲು ನನಗೆ ಯಾವ ಅಳುಕಿಲ್ಲ.

ಇನ್ನು ವೈಜ್ಞಾನಿಕತೆ ಮತ್ತು ಬೌದ್ಧಿಕತೆಗೆ ಮಾರುದ್ದ ದೂರ ಇರುವ ಕನಿಷ್ಠ ಪಕ್ಷ ಬಡವರ ಬಗ್ಗೆ ಕಾಳಜಿಯನ್ನೂ ಇಟ್ಟುಕೊಳ್ಳದ ವ್ಯಕ್ತಿಯನ್ನು ವಿಶ್ವಗುರು ಎಂದು ಬಿಂಬಿಸಲು ವೈದಿಕಶಾಹಿ ಮತ್ತು ವ್ಯಾಪಾರೀ ವ್ಯವಸ್ಥೆಯು ಟೊಂಕಕಟ್ಟಿಕೊಂಡು ನಿಂತಿದ್ದು ಇದಕ್ಕಾಗಿ ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಮಾಧ್ಯಮ ವಲಯವನ್ನೇ ಮಾಧ್ಯಮದ ಹೆಸರಿಗೆ ಕಳಂಕ ತರುವಂತೆ manipulate ಮಾಡಿದೆ.

ಇಂತಹ ಪ್ರಧಾನಿ ಜನರು ನಂಬಿಕೆಯಿಂದ ನೀಡಿರುವ ಬಹುಮತದ ಅರ್ಥವನ್ಬೇ ನಾಶಮಾಡಿದ್ದು ಬಹುಮತ ಎಂದರೆ ಸರ್ವಾಧಿಕಾರದ ಅಸ್ತ್ರವೆಂದು ತಿಳಿದು ಸಾರ್ವಜನಿಕ ಮತ್ತು ಪ್ರಜಾಸತ್ತಾತ್ಮಕ ಜವಾಬ್ದಾರಿ ಇಲ್ಲದೇ ವರ್ತಿಸುತ್ತಿದ್ದಾರೆ. ಆದರೂ ಹೋರಾಟದ ಮನೋಭಾವವನ್ನೇ ನೆಲದ ಕಸುವಾಗಿಸಿಕೊಂಡು ಬಹುದೊಡ್ಡ ಹೋರಾಟದ ಇತಿಹಾಸವನ್ನೇ ಹೊಂದಿರುವ ಭಾರತದ ನೆಲದಲ್ಲಿ ಇಂತವರ ಬೂಟಾಟಿಕೆ ಬಹುಕಾಲ ನಡೆಯಲಾರದು ಎಂಬ ವಿಶ್ವಾಸ ನನಗಿದೆ.

ಇವೆಲ್ಲವೂ ಪ್ರಧಾನಿಗಳ ಮೇಲಿನ ದ್ವೇಷದ ಮಾತುಗಳಲ್ಲ, ಕಾರಣ ದ್ವೇಷ ಮಾಡುವುದು ನಮ್ಮ ಉದ್ದೇಶವಲ್ಲ. ಬದಲಿಗೆ ಇವರ ಅಜ್ಞಾನ, ಅವೈಚಾರಿಕತೆ, ಅವೈಜ್ಞಾನಿಕತೆ, ಧಾರ್ಮಿಕ ಮೌಢ್ಯತೆ ಮತ್ತು ಮೂರ್ಖತನದಿಂದ ಏನು ಮಾಡಿದರೂ ನಡೆಯುವುದೆಂಬ ಅಹಂಕಾರವು ಉಂಟು ಮಾಡಿರುವ ಸಾಮಾಜಿಕ ಮತ್ತು ರಾಜಕೀಯ ಕ್ಷೋಭೆಯ ವಾತಾವರಣದ ಬಗ್ಗೆ ನನಗೆ ಇರುವ ವಿಪರೀತ ಸಿಟ್ಟು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News