ಬಲವಂತದ ಮತಾಂತರ: ಪುಂಛಿ ಆಯೋಗದ ಶಿಫಾರಸಿಗೆ 9 ರಾಜ್ಯಗಳ ಅಸಮ್ಮತಿ

Update: 2022-01-24 02:25 GMT

ಬೆಂಗಳೂರು, ಜ.24: ಕೋಮು ಉದ್ವಿಗ್ನತೆ ಮತ್ತು ಹಿಂಸಾಚಾರಕ್ಕೆ ಕಾರಣವಾಗುವ ಸಂಘಟಿತ ಸಾಮೂಹಿಕ ಮತಾಂತರ ಪ್ರಕರಣಗಳನ್ನು ತಡೆಗಟ್ಟಲು ಹಾಲಿ ಜಾರಿಯಲ್ಲಿರುವ ಕಾನೂನು ಕ್ರಮದ ಜತೆ ಕೇಂದ್ರ ಸರಕಾರವೇ ಒಂದು ಕಾಯ್ದೆ ರೂಪಿಸಬೇಕು ಎಂದು ಜಸ್ಟೀಸ್ ಎಂ.ಎಂ. ಪುಂಛಿ ಆಯೋಗವು ಮಾಡಿದ್ದ ಶಿಫಾರಸುಗಳಿಗೆ ದೇಶದ 9 ರಾಜ್ಯಗಳು ಅಸಮ್ಮತಿ ವ್ಯಕ್ತಪಡಿಸಿದ್ದವು ಎಂಬುದು ಇದೀಗ ಬಹಿರಂಗವಾಗಿದೆ.

ಕೋಮು ಸೌಹಾರ್ದ ಕಾಪಾಡುವುದಕ್ಕೆ ಸಂಬಂಧಿಸಿದಂತೆ ಬಲವಂತದ ಮತಾಂತರ ನಿಯಂತ್ರಿಸಲು ಜಸ್ಟೀಸ್ ಎಂ.ಎಂ. ಪುಂಛಿ ಆಯೋಗವು ಮಾಡಿದ್ದ (9.2.07. ಪುಟ ಸಂಖ್ಯೆ 124) ಶಿಫಾರಸನ್ನು ಅವಲೋಕಿಸಿ ಪ್ರತಿಕ್ರಿಯಿಸಿದ್ದ ಅಂತರ್ ರಾಜ್ಯ ಪರಿಷತ್‌ನ ಸ್ಥಾಯಿ ಸಮಿತಿಯು ತನ್ನ 12ನೇ ಸಭೆಯಲ್ಲಿ ‘ಮತಾಂತರವು ವ್ಯಕ್ತಿಯ ಆಯ್ಕೆಯಾಗಿದೆ ಮತ್ತು ಅದನ್ನು ಯಾರಿಂದಲೂ ನಿಯಂತ್ರಿಸಬಾರದು’ ಎಂದು ಹೇಳಿತ್ತು.

ಧಾರ್ಮಿಕ ಸ್ವಾತಂತ್ರವನ್ನು ನಿಯಂತ್ರಿಸುವುದು ಮತ್ತು ಹಸ್ತಕ್ಷೇಪ ಮಾಡುವ ಯಾವುದೇ ಶಾಸನವು ಸಾಮಾಜಿಕ ದ್ರೋಹವೆಂದು ಪ್ರತಿಕ್ರಿಯಿಸಿದ್ದ ಮಿರೆರಾಂ ಸರಕಾರವು ಆಯೋಗದ ಶಿಫಾರಸನ್ನು ಬಲವಾಗಿ ವಿರೋಧಿಸಿತ್ತು. ಜಸ್ಟೀಸ್ ಎಂ.ಎಂ. ಪುಂಛಿ ಆಯೋಗದ ಶಿಫಾರಸುಗಳನ್ನು ಅಂತರ ರಾಜ್ಯ ಪರಿಷತ್ ಸಭೆಯಲ್ಲಿಯೂ ಚರ್ಚಿಸಲಾಗಿತ್ತು. ಆಯೋಗವು ಮಾಡಿದ್ದ ಶಿಫಾರಸುಗಳ ಕುರಿತು ಚರ್ಚಿಸಬಹುದಾದ ವಿಷಯಗಳ ಬಗ್ಗೆ ಕರ್ನಾಟಕ ಸರಕಾರದ ಒಳಾಡಳಿತ ಇಲಾಖೆಯು ಕಂಡಿಕೆವಾರು ಅಭಿಪ್ರಾಯವನ್ನು ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆಯ (ಆಡಳಿತ ಸುಧಾರಣೆ-ತರಬೇತಿ)ಗೆಅಭಿಪ್ರಾಯವನ್ನು 2020ರ ಸೆಪ್ಟಂಬರ್ 8ರಂದು ಕಳುಹಿಸಿತ್ತು.

ಇದರ ಪ್ರತಿಯನ್ನು ‘the-file.in’ ಮಾಹಿತಿ ಹಕ್ಕಿನ ಅಡಿಯಲ್ಲಿ ಪಡೆದುಕೊಂಡಿದೆ. ಅದೇ ರೀತಿ ಅಂತರ್‌ರಾಜ್ಯ ಪರಿಷತ್ ಸ್ಥಾಯಿ ಸಮಿತಿಯ ನಡವಳಿಗಳೂ ಲಭ್ಯವಾಗಿವೆ.

ಜಸ್ಟೀಸ್ ಎಂ.ಎಂ. ಪುಂಛಿ ಆಯೋಗದ ಶಿಫಾರಸುಗಳನ್ನು ರಾಜ್ಯ ಸರಕಾರಗಳು ಅಂಗೀಕರಿಸುವುದಕ್ಕೆ ಸಂಬಂಧಿಸಿದಂತೆ ಕೇಂದ್ರದಿಂದ ಮಾದರಿ ಕಾನೂನು ಜಾರಿಗೊಳಿಸಬೇಕು ಎಂಬ ಶಿಫಾರಸಿನ ಕುರಿತು ಕೇಂದ್ರ ಗೃಹ ಇಲಾಖೆಯು ರಾಜ್ಯ ಸರಕಾರಗಳ ಅಭಿಪ್ರಾಯವನ್ನು ಕೋರಿತ್ತು. ಇದಕ್ಕೆ ಕರ್ನಾಟಕ ಸೇರಿದಂತೆ 24 ರಾಜ್ಯಗಳು ಪ್ರತಿಕ್ರಿಯಿಸಿದ್ದವು.

ಬಲವಂತದ ಮತಾಂತರ ತಡೆಗಟ್ಟುವ ಸಂಬಂಧ ಕಾನೂನುಗಳನ್ನು ಜಾರಿಗೊಳಿಸುವುದನ್ನು ಆಯಾ ರಾಜ್ಯಗಳಿಗೆ ಬಿಡಬೇಕು ಮತ್ತು ನಿರ್ದಿಷ್ಟ ಸ್ಥಳೀಯ ಪರಿಸ್ಥಿತಿಗಳ ಆಧಾರದ ಮೇಲೆ ಅದನ್ನು ನಿರ್ಧರಿಸಬಹುದು ಎಂದು ಸ್ಥಾಯಿ ಸಮಿತಿಯು ಮಾಡಿದ್ದ ಶಿಫಾರಸನ್ನು ಕರ್ನಾಟಕ ಸರಕಾರದ ಒಳಾಡಳಿತ ಇಲಾಖೆಯು ಒಪ್ಪಿಕೊಂಡಿತ್ತು. ಮತಾಂತರ ತಡೆಗಟ್ಟುವ ಸಂಬಂಧ ಕಾನೂನು ಜಾರಿಗೊಳಿಸುವುದಕ್ಕೆ ಸಂಬಂಧಿಸಿದಂತೆ ಧಾರ್ಮಿಕ ಸ್ವಾತಂತ್ರವನ್ನು ನಿಯಂತ್ರಿಸುವ ಮತ್ತು ಹಸ್ತಕ್ಷೇಪ ಮಾಡುವ ಯಾವುದೇ ಶಾಸನವು ಸಾಮಾಜಿಕ ದ್ರೋಹವೆಂದು ಮಿರೆರಾಂ ರಾಜ್ಯ ಸರಕಾರವು ಪ್ರತಿಕ್ರಿಯಿಸಿತ್ತು ಎಂಬುದು ಅಂತರ್‌ರಾಜ್ಯ ಪರಿಷತ್‌ನ ಸ್ಥಾಯಿ ಸಮಿತಿ ಸಭೆ ನಡವಳಿಯಿಂದ ಗೊತ್ತಾಗಿದೆ.

ಸ್ಥಾಯಿ ಸಮಿತಿಯ ಅವಲೋಕನದಲ್ಲೇನಿದೆ?

ಕೆಲವು ರಾಜ್ಯಗಳು ಈಗಾಗಲೇ ಮತಾಂತರ ವಿರೋಧಿ ಕಾನೂನುಗಳನ್ನು ಜಾರಿಗೆ ತಂದಿವೆ ಎಂಬುದನ್ನು ಸ್ಥಾಯಿ ಸಮಿತಿಯು ಗಮನಿಸಿದೆ. ಮತಾಂತರವು ವ್ಯಕ್ತಿಯ ಆಯ್ಕೆಯಾಗಿದೆ ಮತ್ತು ಅದನ್ನು ಯಾರಿಂದಲೂ ನಿಯಂತ್ರಿಸಬಾರದು ಎಂದು ಗಮನಿಸಿದೆ. ಆದಾಗ್ಯೂ ಬಲವಂತದ ಮತಾಂತರವು ಕಾನೂನುಬಾಹಿರವಾಗಿದೆ. ಬಲಾತ್ಕಾರದಿಂದ, ಆಮಿಷದಿಂದ ಅಥವಾ ಒತ್ತಡದಿಂದ ಯಾವುದೇ ಮತಾಂತರವು ಸ್ವಯಂಪ್ರೇರಿತವಲ್ಲ ಮತ್ತು ಸಂವಿಧಾನವು ಅದನ್ನು ಒಪ್ಪಿಕೊಳ್ಳುವುದಿಲ್ಲ. ಈ ನಿಟ್ಟಿನಲ್ಲಿ ಕಾನೂನುಗಳನ್ನು ಜಾರಿಗೊಳಿಸುವುದನ್ನು ರಾಜ್ಯಗಳಿಗೆ ಬಿಡಬೇಕು ಮತ್ತು ಅವರು ತಮ್ಮ ನಿರ್ದಿಷ್ಟ ಸ್ಥಳೀಯ ಪರಿಸ್ಥಿತಿಗಳ ಆಧಾರದ ಮೇಲೆ ನಿರ್ಧರಿಸಬಹುದು ಎಂದು ಸ್ಥಾಯಿ ಸಮಿತಿಯು ಶಿಫಾರಸು ಮಾಡಿತ್ತು ಎಂಬುದು ತಿಳಿದು ಬಂದಿದೆ.

ಕರ್ನಾಟಕ, ಆಂಧ್ರಪ್ರದೇಶ, ಅಸ್ಸಾಂ, ಛತ್ತೀಸ್‌ಗಡ, ಗೋವಾ, ಗುಜರಾತ್, ಹರ್ಯಾಣ, ಹಿಮಾಚಲ ಪ್ರದೇಶ, ಜಮ್ಮು-ಕಾಶ್ಮೀರ, ಜಾರ್ಖಂಡ್, ಮಧ್ಯಪ್ರದೇಶ, ರಾಜಸ್ಥಾನ, ಸಿಕ್ಕಿಂ, ತಮಿಳುನಾಡು ಮತ್ತು ಉತ್ತರ ಪ್ರದೇಶ ಸರಕಾರವು ಈ ಶಿಫಾರಸನ್ನು ಒಪ್ಪಿವೆ.

ಅಸಮ್ಮತಿ ವ್ಯಕ್ತಪಡಿಸಿರುವ ರಾಜ್ಯಗಳು ನೀಡಿರುವ ಪ್ರತಿಕ್ರಿಯೆ

ಅರುಣಾಚಲ ಪ್ರದೇಶ: ಬಲಾತ್ಕಾರದ ಆಮಿಷದ ಮೂಲಕ ಮತಾಂತರವು ಕೋಮು ಉದ್ವಿಗ್ನತೆ ಮತ್ತು ಹಿಂಸಾಚಾರಕ್ಕೆ ಕಾರಣ ವಾಗಬಹುದು. ಬಲಾತ್ಕಾರ ಅಥವಾ ಆಮಿಷದ ಮೂಲಕ ಯಾವುದೇ ಪರಿವರ್ತನೆಯ ಪ್ರಯತ್ನವನ್ನು ಕಟ್ಟುನಿಟ್ಟಾಗಿ ವ್ಯವಹರಿಸಬೇಕು.

ಬಿಹಾರ: ಅಂತಹ ಕಾಯಿದೆಯು ಅಂಗೀಕಾರಗೊಂಡರೆ ಬಹು ಸಂಖ್ಯಾತ ಧರ್ಮದಿಂದ ಅಲ್ಪಸಂಖ್ಯಾತ ಧರ್ಮಕ್ಕೆ ಮತ್ತು ಪ್ರತಿಯಾಗಿ ಮತಾಂತರಕ್ಕೆ ಸಮಾನವಾಗಿ ನೋಡುವಂತೆ ಸಮತೋಲಿತವಾಗಿರಬೇಕು. ಯಾವುದೇ ಬಲಾತ್ಕಾರ ಅಥವಾ ಆಮಿಷವಿಲ್ಲದೆ ನಿಜವಾದ ನಂಬಿಕೆಯ ಬದಲಾವಣೆಯನ್ನು ಶಿಕ್ಷೆಯಿಂದ ರಕ್ಷಿಸಬೇಕು

ಮಹಾರಾಷ್ಟ್ರ: ಪ್ಯಾರಾ 9.2.07ಅನ್ನು ಒಪ್ಪುವ ಬದಲು ಕೇಂದ್ರ ಸರಕಾರವೇ ಪ್ರಸ್ತಾವನೆ ತಯಾರಿಸಬೇಕು.

ಮಣಿಪುರ: ಹೆಚ್ಚಿನ ಪರಿಶೀಲನೆ ಅಗತ್ಯವಿದೆ.

ಮಿಝೋರಾಂ: ಪ್ರತಿಯೊಬ್ಬ ನಾಗರಿಕನು ತನ್ನ ಆಯ್ಕೆಯ ಯಾವುದೇ ನಂಬಿಕೆಯನ್ನು ಮತ್ತು ಸ್ವಾತಂತ್ರವನ್ನು ಹೊಂದಿರಬೇಕು. ಧಾರ್ಮಿಕ ಸ್ವಾತಂತ್ರವನ್ನು ನಿಯಂತ್ರಿಸುವ ಮತ್ತು ಹಸ್ತಕ್ಷೇಪ ಮಾಡುವ ಯಾವುದೇ ಶಾಸನವು ಸಾಮಾಜಿಕ ದ್ರೋಹದ ಹೆಜ್ಜೆಯಾಗಿದೆ.

ನಾಗಾಲ್ಯಾಂಡ್: ಮತಾಂತರ ವಿರೋಧಿ ಕಾನೂನುಗಳನ್ನು ದುರು ಪಯೋಗಪಡಿಸಿಕೊಳ್ಳಲಾಗಿದೆ. ಮತ್ತು ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ದುರುಪಯೋಗಪಡಿಸಿಕೊಳ್ಳಲಾಗುತ್ತದೆ. ಆದ್ದರಿಂದ ಅಂತಹ ಕಾನೂನನ್ನು ಶಿಫಾರಸು ಮಾಡುವುದಿಲ್ಲ ಅಥವಾ ಒಪ್ಪುವುದಿಲ್ಲ.

ಪಂಜಾಬ್: ಈ ವಿಷಯವು ರಾಜ್ಯದ ಪಟ್ಟಿಯ ಅಡಿಯಲ್ಲಿ ಬರುತ್ತದೆ. ಯಾವುದೇ ಕೇಂದ್ರೀಯ ಕಾಯಿದೆಯನ್ನು ಪ್ರಸ್ತಾಪಿಸಿದರೆ ವಿಷಯವನ್ನು ಮೊದಲು ಅಂತರ್‌ರಾಜ್ಯ ಪರಿಷತ್‌ನಲ್ಲಿ ಚರ್ಚಿಸಬೇಕು ಮತ್ತು ಬಹುಮತದಿಂದ ಅನುಮೋದಿಸಬೇಕು. ಆದ್ದರಿಂದ ಈ ವಿಷಯದಲ್ಲಿ ಸಮತೋಲಿತ ದೃಷ್ಟಿಕೋನವನ್ನು ತೆಗೆದುಕೊಳ್ಳಬೇಕು.

ತ್ರಿಪುರ ಮತ್ತು ಉತ್ತರಾಖಂಡ್ ಈ ವಿಷಯದ ಕುರಿತು ಯಾವುದೇ ಕಾರಣಗಳನ್ನು ನೀಡದೇ ಆಯೋಗದ ಶಿಫಾರಸನ್ನು ವಿರೋಧಿಸಿರುವುದು ತಿಳಿದು ಬಂದಿದೆ. ರಾಜ್ಯದಲ್ಲಿ ಬಲವಂತ ಮತ್ತು ಸಾಮೂಹಿಕ ಮತಾಂತರ ಕೃತ್ಯಗಳು ನಡೆಯುತ್ತಿರುವುದರಿಂದಲೇ ಕರ್ನಾಟಕ ಧಾರ್ಮಿಕ ಹಕ್ಕುಗಳ ಸಂರಕ್ಷಣಾ ವಿಧೇಯಕ ಮಂಡಿಸಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಸಮರ್ಥಿಸಿಕೊಂಡಿದ್ದಾರಾದರೂ ಒಳಾಡಳಿತ ಇಲಾಖೆಯ ಕಾನೂನು ಸುವ್ಯವಸ್ಥೆ ವಿಭಾಗದಲ್ಲಿ ಈ ವಿಧೇಯಕ ಕುರಿತಂತೆ ಯಾವ ಮಾಹಿತಿಯೂ ಲಭ್ಯವಿಲ್ಲ.

ರಾಜ್ಯದಲ್ಲಿ 2018, 2019, 2020, 2021ರ ಫೆಬ್ರವರಿ ಅಂತ್ಯಕ್ಕೆ 16 ಪ್ರಕರಣಗಳಷ್ಟೇ ದಾಖಲಾಗಿದೆ.

Writer - ಜಿ.ಮಹಾಂತೇಶ್

contributor

Editor - ಜಿ.ಮಹಾಂತೇಶ್

contributor

Similar News