ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾದ ಅಮೈ ಮಹಾಲಿಂಗ ನಾಯ್ಕರ ಮನೆಗೆ ಪೇಜಾವರಶ್ರೀಗಳ ಭೇಟಿ
ಉಡುಪಿ, ಜ.29: ಭಾರತ ಸರಕಾರದಿಂದ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾಗಿರುವ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಾಹಸಿ ರೈತ ಅಮೈ ಮಹಾಲಿಂಗ ನಾಯ್ಕರ ತೋಟಕ್ಕೆ ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥರು ಭೇಟಿ ನೀಡಿದರು.
ಏಕಾಂಗಿ ಹೋರಾಟದಲ್ಲಿ ಬೆವರು ಬಸಿದು ಮಹಾಲಿಂಗ ನಾಯ್ಕರು ನಿರ್ಮಿಸಿದ ತೋಟಕ್ಕೆ ತೆರಳಿದ ಶ್ರೀಗಳು ಅವರ ಸಾಹಸವನ್ನು ಕಂಡು ಅಚ್ಚರಿ ವ್ಯಕ್ತಪಡಿಸಿದರು.
ತೋಟದಲ್ಲಿ ಸಮೃದ್ಧವಾಗಿ ಬೆಳೆದು ನಿಂತು ನಾಯ್ಕರ ಪರಿಶ್ರಮದ ದುಡಿಮೆಗೆ ಸಾಕ್ಷಿ ನುಡಿಯುತ್ತಿರುವ ತೆಂಗು-ಕಂಗು, ಬಾಳೆ ಮಾವು, ಹಲಸು ಮೊದಲಾದ ಬೆಳೆಗಳನ್ನು ವೀಕ್ಷಿಸಿದ ಬಳಿಕ ಮನೆಗೆ ಮರಳಿದ ಶ್ರೀಗಳಿಗೆ ಮಹಾಲಿಂಗ ನಾಯ್ಕರ ಮನೆಮಂದಿಯಿಂದ ಗೌರವಾರ್ಪಣೆ ಸಲ್ಲಿಸಲಾಯಿತು.
ಕೃಷಿ ಕ್ಷೇತ್ರದಲ್ಲಿ ಮಹಾಲಿಂಗ ನಾಯ್ಕರು ಏಕಾಂಗಿಯಾಗಿ ಅವಿರತ ಪರಿಶ್ರಮದಿಂದ ಮಾಡಿದ ಸಾಧನೆಯನ್ನು ಹೊಗಳಿದ ಪೇಜಾವರಶ್ರೀಗಳು ಪದ್ಮಶ್ರೀ ಪುರಸ್ಕಾರಕ್ಕೆ ಆಯ್ಕೆಯಾಗಿರುವುದು ಅತ್ಯಂತ ಅಭಿನಂದನೀಯ ಎಂದು ಅಭಿನಂದಿಸಿದರು.
ಮಹಾಲಿಂಗ ನಾಯ್ಕರಿಗೆ ಶಾಲು, ಶ್ರೀಕೃಷ್ಣನ ವಿಗ್ರಹವಿರುವ ಕಾಷ್ಠ ಮಂಟಪದ ಸ್ಮರಣಿಕೆ, ನಗದು,ಫಲ ಮಂತ್ರಾಕ್ಷತೆ ನೀಡಿದರು.
ಸ್ಥಳೀಯರಾದ ಜನಾರ್ದನ ಭಟ್, ಪಂಚಾಯತ್ ಅಧ್ಯಕ್ಷರು ಹಾಗೂ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.