ದೃಷ್ಟಿ ದೋಷವಿದ್ದರೂ ಪ್ರತಿ ದಿನ ಸೈಕಲ್ ತುಳಿದು ಕರ್ತವ್ಯಕ್ಕೆ ಹಾಜರಾಗುತ್ತಿರುವ ಚಂಡೀಗಢದ ಐಎಎಸ್ ಅಧಿಕಾರಿ
ಚಂಡೀಗಢ: ಚಂಡೀಗಢ ಮುನಿಸಿಪಲ್ ಕಾರ್ಪೊರೇಷನ್ ಸೇವೆಯಲ್ಲಿರುವ ದೃಷ್ಟಿದೋಷ ಹೊಂದಿರುವ ಐಎಎಸ್ ಅಧಿಕಾರಿ ರೂಪೇಶ್ ಕುಮಾರ್ ಅವರು ತಮ್ಮ ಸೆಕ್ಯುರಿಟಿ ಆಫೀಸರ್ ಸಹಾಯದಿಂದ ಪ್ರತಿ ದಿನ ಕಚೇರಿಗೆ ಸೈಕಲ್ನಲ್ಲಿಯೇ ಆಗಮಿಸಿ ಎಲ್ಲರಿಗೂ ಮಾದರಿಯಾಗಿದ್ದಾರೆ. ಅವರು ಈ ಉದ್ದೇಶಕ್ಕೆ ಟ್ವಿನ್ ಸೈಕಲ್ ಅಥವಾ ದ್ವಿಸೈಕಲ್ ಬಳಸುತ್ತಾರೆ. ರೂಪೇಶ್ ಅವರಿಗೆ ರೆಟಿನಿಟಿಸ್ ಪಿಗ್ಮೆಂಟೋಸಾ ಎಬ ಸಮಸ್ಯೆಯಿದೆ.
ಪಂಜಾಬ್ನ ಅಮೃತಸರ್ನವರಾಗಿರುವ ರೂಪೇಶ್ ಪ್ರಾಥಮಿಕ ಶಿಕ್ಷಣವನ್ನು ಅಮೃತಸರ್ನಲ್ಲಿ ಪೂರ್ಣಗೊಳಿಸಿದ ನಂತರ ಉನ್ನತ ಶಿಕ್ಷಣಕ್ಕಾಗಿ ಜೆಎನ್ಯು ಸೇರ್ಪಡೆಗೊಂಡಿದ್ದರು. ಇತ್ತೀಚೆಗೆ ದಿಲ್ಲಿಯ ನ್ಯಾಷನಲ್ ಲಾ ಯುನಿವರ್ಸಿಟಿಯಿಂದ ಕಾನೂನಿನಲ್ಲೂ ಪದವಿ ಪಡೆದಿದ್ದಾರೆ.
ಸುಮಾರು 20 ವರ್ಷಗಳ ಹಿಂದೆ ಅವರಿಗೆ ತಮ್ಮ ಕಣ್ಣಿನ ಸಮಸ್ಯೆ ಅರಿವಿಗೆ ಬಂದಿತ್ತು. ನಂತರ ತಪಾಸಣೆಗೊಳಗಾದಾಗ ರೆಟಿನಿಟಿಸ್ ಪಿಗ್ಮೆಂಟೋಸಾ ಇರುವುದು ಬೆಳಕಿಗೆ ಬಂದಿತು.
"ಜೀವನದಲ್ಲಿ ಕೆಲವನ್ನು ನಮಗೆ ಬದಲಾಯಿಸಲು ಸಾಧ್ಯವಿಲ್ಲ, ಆದರೆ ಭರವಸೆ ಕಳೆದುಕೊಳ್ಳದೆ ನಿಮ್ಮ ಗುರಿ ಸಾಧಿಸಬೇಕು, ಸಮಸ್ಯೆಯಿದ್ದರೂ ತಾವೇಕೆ ಸಿವಿಲ್ ಸರ್ವಿಸಸ್ ಆಯ್ದುಕೊಂಡೆ ಎಂಬುದನ್ನು ಜನ ತಿಳಿಯಬೇಕು, ಬದಲಾವಣೆ ತರಬೇಕು ಎಂಬ ಉದ್ದೇಶ ನನ್ನದು. ನನ್ನ ಕಾಲಾನಂತರವೂ ಜನರು ನನ್ನನ್ನು ನೆನಪಿಡಬೇಕೆಂಬುದು ನನ್ನ ಆಸೆ. ಹಾಗಾಗಬೇಕಾದರೆ ಏನಾದರೂ ವಿಭಿನ್ನವಾಗಿ ಸಾಧಿಸಬೇಕು, ಪ್ರತಿ ದಿನವೂ ಒಂದು ಸವಾಲು, ಸವಾಲಿಲ್ಲದೇ ಇದ್ದರೆ ಜೀವನ ಆಸಕ್ತಿಕರವಲ್ಲ" ಎಂದು ಅವರು ಹೇಳುತ್ತಾರೆ.
ಪ್ರತಿಯೊಬ್ಬರೂ ಸೈಕ್ಲಿಂಗ್ ಮಾಡಬೇಕು, ಚಂಡೀಗಢ ಸೈಕ್ಲಿಂಗ್ಗೆ ಉತ್ತಮ ತಾಣ. ಟ್ವಿನ್ ಸೈಕಲ್ ಇದ್ದರೆ ಪತಿ, ಪತ್ನಿ ಅಥವಾ ತಾಯಿ, ಮಗು ಒಟ್ಟಿಗೆ ಸಾಗಬಹುದು. ನನ್ನ ಜತೆ ನನ್ನ ಸೆಕ್ಯುರಿಟಿ ಅಧಿಕಾರಿ ಅಥವಾ ಚಾಲಕ ಬರುತ್ತಾರೆ, ಚಂಡೀಗಢದಲ್ಲಿ ಪಬ್ಲಿಕ್ ಶೇರಿಂಗ್ ವ್ಯವಸ್ಥೆಯಲ್ಲೂ ಇಂತಹ ಸೈಕಲ್ ಇರಿಸುವ ಕುರಿತು ಚಿಂತಿಸಲಾಗುವುದು ಎಂದು ಅವರು ಹೇಳಿದ್ದಾರೆ.