ನೋವು ಏನೆಂದು ಗೊತ್ತಿದೆ, ನನ್ನ ತಂದೆಯೂ ಕೊಲೆಯಾಗಿದ್ದರು: ರಾಹುಲ್ ಗಾಂಧಿಗೆ ಬಿಜೆಪಿ ಸಂಸದರ ಉತ್ತರ
ಹೊಸದಿಲ್ಲಿ: ರಾಷ್ಟ್ರಪತಿಯವರ ಭಾಷಣ ಕುರಿತ ವಂದನಾ ಗೊತ್ತುವಳಿಯ ಬಗ್ಗೆ ಲೋಕಸಭೆಯಲ್ಲಿ ನಡೆದ ಚರ್ಚೆಯ ವೇಳೆ ಗದ್ದಲ ಉಂಟಾದರೂ ಬಿಜೆಪಿ ಸಂಸದ ಕಮಲೇಶ್ ಪಾಸ್ವಾನ್ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ನಡುವಿನ ಅಪರೂಪದ ಕ್ಷಣಕ್ಕೆ ಸಂಸತ್ತು ಸಾಕ್ಷಿಯಾಯಿತು.
"ನನ್ನ ಅಜ್ಜಿಗೆ (ಮಾಜಿ ಪ್ರಧಾನಿ ಇಂದಿರಾಗಾಂಧಿ) 32 ಬಾರಿ ಗುಂಡು ಹಾರಿಸಿದ್ದರು. ನನ್ನ ತಂದೆ (ಮಾಜಿ ಪ್ರಧಾನಿ ರಾಜೀವ್ ಗಾಂಧಿ) ಛಿದ್ರಗೊಂಡರು. ಅದು ಏನೆಂದು ನನಗೆ ತಿಳಿದಿದೆ. ನೀವು ಯಾವುದೋ ಅಪಾಯಕಾರಿ ವಿಷಯದೊಂದಿಗೆ ಆಟವಾಡುತ್ತಿದ್ದೀರಿ. ನೀವು ಇದನ್ನು ತಡೆಯದಿದ್ದರೆ ಸಮಸ್ಯೆಯನ್ನು ಸೃಷ್ಟಿಸುತ್ತದೆ" ರಾಹುಲ್ ಗಾಂಧಿ ಹೇಳಿದರು.
ಸಂಸತ್ ನಲ್ಲಿ ತನಗಿಂತ ಮುನ್ನ ಮಾತನಾಡಿದ ಬಿಜೆಪಿ ಸಂಸದ ಪಾಸ್ವಾನ್ ರನ್ನು ಉಲ್ಲೇಖಿಸಿದ ರಾಹುಲ್, "ನೀವು (ಸರಕಾರ) ಯಾರ ಮಾತನ್ನೂ ಕೇಳಬೇಡಿ. (ಕಮಲೇಶ್) ಪಾಸ್ವಾನ್ ಅವರು ತಪ್ಪು ಪಕ್ಷದಲ್ಲಿದ್ದಾರೆ, ಅವರು ನನ್ನೊಂದಿಗೆ ವೈಯಕ್ತಿಕವಾಗಿ ಮಾತನಾಡಿದ್ದಾರೆ" ಎಂದು ಹೇಳಿದರು.
ತಾನು ತಪ್ಪು ಪಕ್ಷದಲ್ಲಿದ್ದೇನೆ ಎಂಬ ರಾಹುಲ್ ಗಾಂಧಿಯವರ ವಾದವನ್ನು ನಿರಾಕರಿಸಿದ ಪಾಸ್ವಾನ್, "ನನ್ನ ಪಕ್ಷ ನನಗೆ ಟಿಕೆಟ್ ನೀಡಿದೆ. ನನಗೆ ಇನ್ನೇನು ಬೇಕು?", "ನನ್ನ ತಂದೆ ಕೊಲ್ಲಲ್ಪಟ್ಟರು. ಹಾಗಾಗಿ ನೋವು ಏನೆಂದು ನನಗೆ ತಿಳಿದಿದೆ’’ ಎಂದರು.
ಉತ್ತರ ಪ್ರದೇಶದ ರಾಜಕೀಯ ನಾಯಕ ಕಮಲೇಶ್ ಪಾಸ್ವಾನ್ ಅವರ ತಂದೆ ಓಂ ಪ್ರಕಾಶ್ ಪಾಸ್ವಾನ್ 1996 ರಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದಾಗ ಕೊಲ್ಲಲ್ಪಟ್ಟಿದ್ದರು.