ಕಾರ್ಕಳ: ಆದರ್ಶ್ ಇಂಡಸ್ಟ್ರಿಯಲ್ ಕಂಪೆನಿಯನ್ನು ವಸತಿರಹಿತ ಪ್ರದೇಶಕ್ಕೆ ಸ್ಥಳಾಂತರಿಸುವಂತೆ ಆಗ್ರಹಿಸಿ ಧರಣಿ
ಕಾರ್ಕಳ: ಗ್ರಾಮಸ್ಥರ ಆರೋಗ್ಯಕ್ಕೆ ತೊಂದರೆಯುಂಟಾಗುತ್ತಿರುವ ಕಾರಣ ಆದರ್ಶ್ ಇಂಡಸ್ಟ್ರಿಯಲ್ ಕಂಪೆನಿಯನ್ನು ವಸತಿರಹಿತ ಪ್ರದೇಶಕ್ಕೆ ಸ್ಥಳಾಂತರಿಸುವಂತೆ ಆಗ್ರಹಿಸಿ ಫೆ. 14ರಂದು ಕಾರ್ಕಳ ಪರಿಸರ ರಕ್ಷಣಾ ಸಮಿತಿ ವತಿಯಿಂದ ಸಾಣೂರಿನಲ್ಲಿ ಗ್ರಾಮಸ್ಥರು ಕೈಗೆ ಕಪ್ಪು ಬಟ್ಟೆ ಕಟ್ಟಿ ಪ್ರತಿಭಟನೆ ನಡೆಸಿದರು.
ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದ ನ್ಯಾಯವಾದಿ, ಬೆಳ್ಮಣ್ ಗ್ರಾಮ ಪಂಚಾಯತ್ ಸದಸ್ಯೆ ಸಹನಾ ಕುಂದರ್, ಗ್ರಾಮಸ್ಥರ ಕಷ್ಟ ಅರಿತು ಆದರ್ಶ್ ಇಂಡಸ್ಟ್ರೀಯ ಮಾಲಕರು ಕಂಪನಿಯನ್ನು ಬೇರೆಡೆ ಸ್ಥಳಾಂತರಿಸಬೇಕು. ಪರಿಸರಕ್ಕೆ ಮಾರಕವಾಗಿರುವ ಕಂಪೆನಿಗಳಿಗೆ ಯಾರೂ ಬೆಂಬಲ ನೀಡಬಾರದು ಎಂದರು.
ಗ್ರಾ.ಪಂ. ಸದಸ್ಯ ಕರುಣಾಕರ್ ಕೋಟ್ಯಾನ್ ಮಾತನಾಡಿ, ಆದರ್ಶ್ ಇಂಡಸ್ಟ್ರೀಯಲ್ ಕೆಮಿಕಲ್ಸ್ ಕಾರ್ಖಾನೆ 70 ಟಿಪಿಎಂ ಸಾಮರ್ಥ್ಯದಿಂದ ಇದೀಗ 870 ಟಿಪಿಎಂ ರಾಸಾಯನಿಕ ಉತ್ಪಾದನೆ ಮಾಡಲು ಮಾಲಕರು ಕಟ್ಟಡ ವಿಸ್ತರಿಸುತ್ತಿದ್ದಾರೆ. ಕಂಪೆನಿ ಹೊರಸೂಸುವ ವಿಷಯುಕ್ತ ಗಾಳಿಯಿಂದ ಅನೇಕರಲ್ಲಿ ಆರೋಗ್ಯ ಸಮಸ್ಯೆ ತಲೆದೋರಿದೆ. ಹಲವಾರು ಮಂದಿ ಕ್ಯಾನ್ಸರ್, ಅಸ್ತಮಾ ಪೀಡಿತರಾಗಿದ್ದಾರೆ. ಜಾನುವಾರುಗಳು ಸಾವನ್ನಪ್ಪಿದೆ. ಬಾವಿಗಳಲ್ಲಿ ತೈಲಯುಕ್ತ ನೀರು ಕಂಡುಬಂದಿದೆ. ಇಂತಹ ಪರಿಸ್ಥಿತಿಯಲ್ಲಿ ಕಾರ್ಖಾನೆ ವಿಸ್ತರಿಸಿದರೆ ಜನರನ್ನು ಸಾವಿನ ದವಡೆಗೆ ದೂಡಿದಂತಾಗುವುದು ಎಂದರು.
ಕೆಎಂಎಫ್ ನಿರ್ದೇಶಕ ನರಸಿಂಹ ಕಾಮತ್ ಮಾತನಾಡಿ, ನಮ್ಮ ಹೋರಾಟ ಗಣೇಶ್ ಕಾಮತ್ ಅವರ ವಿರುದ್ಧವಲ್ಲ. ವೈಯಕ್ತಿಕವಾಗಿ ನಮಗೆ ಅವರ ಬಗ್ಗೆ ಬಹಳ ಗೌರವವಿದೆ. ಆದರೆ, ಅವರು ನಡೆಸುತ್ತಿರುವ ಕಂಪೆನಿಯಿಂದ ತೊಂದರೆಯಾಗುತ್ತಿದೆ. 20 ವರ್ಷಗಳ ಹಿಂದೆ ಗೇರು ಬೀಜ ಎಣ್ಣೆ ಸಂಸ್ಕರಣಾ ಘಟಕವಾಗಿ ಮುರತ್ತಂಗಡಿಯಲ್ಲಿ ಪ್ರಾರಂಭವಾದ ಈ ಕಾರ್ಖಾನೆಯಿಂದ ಇದೀಗ ಪರಿಸರ, ಜೀವ ಸಂಕುಲಕ್ಕೆ ಹಾನಿಯಾಗುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಧ್ವನಿ ಇದ್ದರೆ ಎಲ್ಲವೂ ಸಾಧ್ಯ. ಕಾರ್ಖಾನೆಗೆ ನೀಡಿರುವ ಪರವಾನಿಗೆ ಜೂನ್ ವರೆಗೆ ಚಾಲ್ತಿಯಲ್ಲಿದ್ದು ಈ ನಾಲ್ಕು ತಿಂಗಳ ಅವಧಿಯೊಳಗೆ ಕಾರ್ಖಾನೆಯ ಮಾಲಕರು ಕಾರ್ಖಾನೆಯನ್ನು ಸ್ಥಳಾಂತರಿಸುವ ಬಗ್ಗೆ ಅಥವಾ ಮುಚ್ಚುವುದರ ಬಗ್ಗೆ ನಿರ್ಧಾರ ಕೈಗೊಳ್ಳಬೇಕಿದೆ ಎಂದರು.
ಉಡುಪಿ ಜಿಲ್ಲಾಧಿಕಾರಿ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ, ಜಿಲ್ಲಾ ಕೈಗಾರಿಕಾ ಮತ್ತು ವಾಣಿಜ್ಯ ಕೇಂದ್ರದ ಜಂಟಿ ನಿರ್ದೇಶಕರು, ಕಾರ್ಕಳ ತಹಶೀಲ್ದಾರ್, ಸಾಣೂರು ಪಂಚಾಯತ್ ಅಭಿವೃದ್ದಿ ಅಧಿಕಾರಿ, ಕೇಂದ್ರ ಅರಣ್ಯ, ಪರಿಸರ ಮತ್ತು ಹವಮಾನ ಬದಲಾವಣೆ ಮಂತ್ರಾಲಯ ಬೆಂಗಳೂರು, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಮಂಗಳೂರು ವಲಯ ಹಿರಿಯ ಪರಿಸರ ಅಧಿಕಾರಿಯವರಿಗೆ ಆದರ್ಶ್ ಇಂಡಸ್ಟ್ರಿಯಲ್ ಕೆಮಿಕಲ್ಸ್ನಿಂದ ಆಗುತ್ತಿರುವ ತೊಂದರೆಗಳಿಂದ ಮುಕ್ತಿ ನೀಡುವ ಬಗ್ಗೆ ಮನವಿ ಸಲ್ಲಿಸಲಾಯಿತು.
ಸಾಣೂರು ಗ್ರಾ.ಪಂ. ಉಪಾಧ್ಯಕ್ಷ ಪ್ರಸಾದ್ ಪೂಜಾರಿ, ಗ್ರಾ.ಪಂ. ಸದಸ್ಯರಾದ ಪ್ರಕಾಶ್ ರಾವ್, ಸರಸ್ವತಿ, ಸುನಂದ ನಾಯ್ಕ್, ಯುವರಾಜ್ ಜೈನ್, ಸತೀಶ್ ಪೂಜಾರಿ, ಎಪಿಎಮ್ಸಿ ನಾಮ ನಿರ್ದೇಶಿತ ನಿರ್ದೇಶಕ ದೇವಾನಂದ್ ಶೆಟ್ಟಿ, ತಾಲೂಕು ಪಂಚಾಯತ್ ಮಾಜಿ ಸದಸ್ಯ ಪ್ರವೀಣ್ ಕೋಟ್ಯಾನ್, ಪರಿಸರ ಸಂರಕ್ಷಣಾ ಸಮಿತಿಯ ಪದಾಧಿಕಾರಿ ಪ್ರಶಾಂತ್, ಪರಿಸರ ಸಂರಕ್ಷಣಾ ಸಮಿತಿ ಕಾರ್ಕಳದ ಸ್ಥಾಪಕ ರಘುರಾಮ ಶೆಟ್ಟಿ ಹಾಗೂ ರಾಮ ಪ್ರಶಾಂತ್ ಶೆಟ್ಟಿ, ಬಾಲಾಂಜನೇಯ ಯುವಕ ಸಂಘದ ಅಧ್ಯಕ್ಷ ಪ್ರಕಾಶ್ ಆಚಾರ್ಯ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.