ಕಪ್ಪುಸಮುದ್ರದಲ್ಲಿ ತಡೆ: 21 ಭಾರತೀಯ ನಾವಿಕರು ಅತಂತ್ರ

Update: 2022-03-05 03:03 GMT

ಮುಂಬೈ: ರಷ್ಯಾ- ಉಕ್ರೇನ್ ಯುದ್ಧದಿಂದ ಸಂತ್ರಸ್ತರಾದ ಭಾರತೀಯರಲ್ಲಿ ಕೇವಲ ವಿದ್ಯಾರ್ಥಿಗಳು ಮಾತ್ರ ಸೇರಿಲ್ಲ. ಮಾರ್ಷೆಲ್ಸ್ ದ್ವೀಪದ ಧ್ವಜ ಹೊಂದಿರುವ ವ್ಯಾಪಾರಿ ಹಡಗಿನ 21 ಮಂದಿ ಭಾರತೀಯ ನಾವಿಕರು ದಕ್ಷಿಣ ಉಕ್ರೇನ್‌ನ ಮೈಕೊಲೆವ್ ಬಂದರಿನಿಂದ ಸುರಕ್ಷಿತವಾಗಿ ಹೊರಬರಲು ಕಾಯುತ್ತಿದ್ದಾರೆ. ಹಡಗಿನ ಸಿಬ್ಬಂದಿ, ರಷ್ಯನ್ ದಾಳಿ ಆರಂಭವಾದ ಫೆಬ್ರುವರಿ 25ರಿಂದಲೂ ಹಡಗಿನಲ್ಲೇ ಕಾಲ ಕಳೆಯುತ್ತಿದ್ದಾರೆ. ಬಂದರಿನಲ್ಲಿ ಕೆಲಸ ಸ್ಥಗಿತಗೊಂಡು ಲಂಗರು ಹಾಕಿರುವ ಹಡಗುಗಳ ಪೈಕಿ ಇದು ಕೂಡಾ ಒಂದಾಗಿದೆ. ರಷ್ಯನ್ ಪಡೆಗಳು ಇದೀಗ ಕಪ್ಪುಸಮುದ್ರ ಕರಾವಳಿಯ ಪ್ರಮುಖ ಸರಕು ಸಾಗಾಣಿಕಾ ತಾಣವಾದ ಈ ಬಂದರು ನಗರದತ್ತ ಮುನ್ನುಗ್ಗುತ್ತಿದ್ದಾರೆ.

ಮೈಕೊಲೇವ್‌ನಲ್ಲಿ ಹಲವು ಹಡಗುಗಳು ತಮ್ಮ ಮಾಸ್ಟ್ ಅನ್ನು ಇಳಿಸಿ, ತಮ್ಮ ರಾಷ್ಟ್ರೀಯತೆಯನ್ನು ಗುರುತು ಪತ್ತೆಯಾಗದಂತೆ ಎಚ್ಚರಿಕೆ ವಹಿಸಿವೆ. ಹೀಗೆ ಅತಂತ್ರವಾಗಿರುವ 21 ನಾವಿಕರ ಪೈಕಿ ನಾಲ್ಕು ಮಂದಿ ಮುಂಬೈನವರು. ಹಡಗಿನ ಮಾಲೀಕರು ಹಾಗೂ ಸಾಗಾಣಿಕೆ ಬೆಂಬಲ ಮತ್ತು ದಿನಸಿ ಒದಗಿಸುವ ಸ್ಥಳೀಯ ಏಜೆಂಟರ ಸೂಚನೆಯಂತೆ ಹಲವು ದಿನಗಳಿಂದ ಹಡಗಿನಲ್ಲೇ ಉಳಿದಿರುವುದಾಗಿ ಈ ಪೈಕಿ ಒಬ್ಬರು ವಿವರಿಸಿದ್ದಾರೆ. ಈ ಹಡಗಿಗೆ ಸಿಬ್ಬಂದಿಯನ್ನು ಪೂರೈಸಿರುವ ಮುಂಬೈನ ವಿ.ಆರ್. ಮೆರಿಟೈಮ್‌ನ ಪ್ರಧಾನ ಕಾರ್ಯದರ್ಶಿಯವರು ಭಾರತದ ರಾಜತಾಂತ್ರಿಕ ಸಿಬ್ಬಂದಿ ಹಾಗೂ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕಾರಿಗಳು ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ತಿಳಿದು ಬಂದಿದೆ.

ಈ ಹಡಗು ಫೆಬ್ರುವರಿ 22ರಂದು ಮೆಕ್ಕೆಜೋಳ ಲೋಡ್ ಮಾಡುವ ಸಲುವಾಗಿ ಮೈಕೊಲೈವ್‌ನಲ್ಲಿ ಲಂಗರು ಹಾಕಿದ್ದು, ಫೆಬ್ರುವರಿ 25ರಂದು ಹೊರಡಬೇಕಿತ್ತು. ಆದರೆ ದಾಳಿಯ ಪರಿಣಾಮವಾಗಿ ಕಪ್ಪು ಸಮುದ್ರದಲ್ಲಿ ತಡೆ ಒಡ್ಡಿರುವುದರಿಂದ ಹೊರಡಲು ಸಾಧ್ಯವಾಗಿರಲಿಲ್ಲ. ಸದ್ಯಕ್ಕೆ ಆಹಾರದ ಕೊರತೆ ಇಲ್ಲ. ಆರಂಭದಲ್ಲಿ ನೀರಿನ ಸಮಸ್ಯೆ ಇದ್ದರೂ ಇದೀಗ ಬಗೆಹರಿಸಲಾಗಿದೆ ಎಂದು ಹಡಗಿನ ಸಿಬ್ಬಂದಿಯೊಬ್ಬರು ವಿವರಿಸಿದ್ದಾರೆ. ಪಡಿತರ ಮೂಲಕ ನಮಗೆ ನೀರು ಪೂರೈಸಲಾಗುತ್ತಿದೆ. ಹಲವು ಇತರ ಹಡಗುಗಳು ಕೂಡಾ ಸಿಲುಕಿಕೊಂಡಿವೆ. ಶೆಲ್ಲಿಂಗ್ ಸದ್ದು ನಮಗೆ ಕೇಲಿಸುತ್ತಿದೆ. ಇದು ಭಯದ ಸನ್ನಿವೇಶ. ಆದರೆ ಬೇರೆ ಆಯ್ಕೆ ಇಲ್ಲ. ಬಂದರಿನಿಂದ ಹೊರಗೆ ಹೋಗುವುದು ಸುರಕ್ಷಿತವಲ್ಲ. ರಸ್ತೆ ಮೂಲಕ ಪ್ರಯಾಣವೂ ಸಾಧ್ಯವಿಲ್ಲ. ಬಂದರು ಕಾರ್ಯಾಚರಣೆ ಆರಂಭವಾದ ಬಳಿಕ ನಾವು ಸುರಕ್ಷಿತವಾಗಿ ಹೊರಬರುತ್ತೇವೆ ಎಂಬ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News