2024ರಲ್ಲಿ ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್‌ಅನ್ನು ಅವಲಂಬಿಸುವುದರಲ್ಲಿ ಅರ್ಥವಿಲ್ಲ: ಮಮತಾ ಬ್ಯಾನರ್ಜಿ

Update: 2022-03-11 13:51 GMT

ಕಲ್ಕತ್ತಾ: ಉತ್ತರ ಪ್ರದೇಶ ಹಾಗೂ ಇತರೆ ರಾಜ್ಯಗಳಲ್ಲಿ ಬಿಜೆಪಿ ಸಾಧಿಸಿರುವ ದಾಖಲೆಯ ಗೆಲುವಿನ ಬಗ್ಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅನುಮಾನ ವ್ಯಕ್ತಪಡಿಸಿದ್ದಾರೆ. ಜೊತೆಗೆ, ʼಇದು ಜನಾದೇಶದ ಗೆಲುವಲ್ಲ, ಇವಿಎಂ ಮತಯಂತ್ರ ಹಾಗೂ ಕೇಂದ್ರ ಏಜೆನ್ಸಿಗಳನ್ನು ಬಳಸಿಕೊಂಡು ಪಡೆದ ಗೆಲುವು ಎಂದು ಮಮತಾ ಹೇಳಿದ್ದಾರೆ.

ಅದೇ ವೇಳೆ ಕಾಂಗ್ರೆಸ್‌ ಬಗ್ಗೆಯೂ ಮಾತನಾಡಿದ ಸಿಎಂ ಬ್ಯಾನರ್ಜಿ, ʼ2024 ರಲ್ಲಿ ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್‌ ಪಕ್ಷವನ್ನು ನೆಚ್ಚಿಕೊಂಡು ಕೂರುವುದರಲ್ಲಿ ಅರ್ಥವಿಲ್ಲವೆಂದಿದ್ದಾರೆ. ಆ ಮೂಲಕ, ಪ್ರಬಲ ಪ್ರಾದೇಶಿಕ ಪಕ್ಷಗಳ ಒಕ್ಕೂಟವನ್ನು ರಚಿಸುವ ನಿರ್ಧಾರದ ಬಗ್ಗೆ ಸೂಚನೆ ನೀಡಿದ್ದಾರೆ.

ಮತಯಂತ್ರಗಳನ್ನು ಕೇಂದ್ರೀಯ ತನಿಖಾ ಸಂಸ್ಥೆಗಳನ್ನು, ಏಜೆನ್ಸಿಗಳನ್ನು ಬಳಸಿ ಅವರು (ಬಿಜೆಪಿ) ಗೆದ್ದಿದ್ದಾರೆ. ಅವರು  ನಗಾರಿ ಬಾರಿಸುತ್ತಿದ್ದಾರೆ. ಆದರೆ, ಸಂಗೀತ ಸೃಷ್ಟಿಸುತ್ತಿಲ್ಲ, ಸಂಗೀತಕ್ಕಾಗಿ ನಿಮಗೆ ಹಾರ್ಮೋನಿಯಂ ಬೇಕು ಎಂದು ಬ್ಯಾನರ್ಜಿ ಹೇಳಿರುವುದಾಗಿ Ndtv.com ವರದಿ ಮಾಡಿದೆ.

ಇವಿಎಂ ಸಾಗಾಟದ ಕುರಿತು ಸಮಾಜವಾದಿ ಆರೋಪದ ಬಗ್ಗೆ ಮಾತನಾಡಿದ ಮಮತಾ ಬ್ಯಾನರ್ಜಿ, “ಇವಿಎಂ ಸಾಗಾಟಕ್ಕಾಗಿ ಡಿಎಂ (ವಾರಣಾಸಿಯ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್) ಅಮಾನತುಗೊಂಡಿದ್ದರೆ ಅದು ದೊಡ್ಡ ವಿಷಯ. ಅಖಿಲೇಶ್‌ ಸೋಲುವಂತೆ ಮಾಡಲಾಯಿತು ಎಂದು ನನಗೆ ಅನ್ನಿಸುತ್ತದೆ. ಇದು ಕೊಳ್ಳೆಯಾಗಿದೆ. ಅಖಿಲೇಶ್‌ ಭ್ರಮನಿರಸನರಾಗಬಾರದು, ಹತಾಶರಾಗಬಾರದು. ಅವರು ಜನರೆಡೆಗೆ ಹೋಗಬೇಕು, ಇದನ್ನು ಪ್ರಶ್ನಿಸಬೇಕು” ಎಂದು ಹೇಳಿದ್ದಾರೆ.

"ಎಲ್ಲಾ ಇವಿಎಂಗಳು ಫೋರೆನ್ಸಿಕ್ ಪರೀಕ್ಷೆಗೆ ಒಳಗಾಗಬೇಕು, ಜನರು ಮತ ಚಲಾಯಿಸಲು ಬಳಸಿದ ಮತ್ತು ನಂತರ ಎಣಿಕೆಗೆ ತಂದ ಯಂತ್ರಗಳು ಒಂದೇ ಎಂಬುದನ್ನು ನೋಡಬೇಕು, ಬಿಜೆಪಿ ಗೆದ್ದಿದ್ದರೆ, ಅದು ಜನಮತದಿಂದ ಗೆದ್ದಿಲ್ಲ, ಇದು ಜನಾದೇಶವಲ್ಲ, ಯಂತ್ರೋಪಕರಣಗಳ ಆದೇಶ," ಎಂದು ಅವರು ಹೇಳಿದ್ದಾರೆ.

2024ರ ಲೋಕಸಭಾ ಚುನಾವಣೆಯ ಕುರಿತು ಮಾತನಾಡಿದ ಅವರು, “ಬಿಜೆಪಿ ವಿರುದ್ಧ ಹೋರಾಡಲು ಬಯಸುವ ಎಲ್ಲಾ ರಾಜಕೀಯ ಪಕ್ಷಗಳು ಒಟ್ಟಾಗಿ ಕೆಲಸ ಮಾಡಬೇಕು ಎಂದು ನಾನು ಹೇಳುತ್ತೇನೆ, ಕಾಂಗ್ರೆಸ್ ಅನ್ನು ಅವಲಂಬಿಸುವುದರಲ್ಲಿ ಯಾವುದೇ ಅರ್ಥವಿಲ್ಲ, ಕಾಂಗ್ರೆಸ್ ಮೊದಲು ತಮ್ಮ ಸಂಘಟನೆಯ ಮೂಲಕ ಇಡೀ ದೇಶವನ್ನು ವಶಪಡಿಸಿಕೊಳ್ಳುತ್ತಿತ್ತು, ಆದರೆ ಅವರಿಗೆ ಇನ್ನು ಆಸಕ್ತಿ ಇಲ್ಲ, ಮತ್ತು ಅವರು ತಮ್ಮ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತಿದ್ದಾರೆ. ಹಲವಾರು ಪ್ರಾದೇಶಿಕ ರಾಜಕೀಯ ಪಕ್ಷಗಳಿವೆ. ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು ಮತ್ತು ಈ ಬಗ್ಗೆ ನಿರ್ಧಾರವನ್ನು ಖಂಡಿತವಾಗಿಯೂ ತೆಗೆದುಕೊಳ್ಳಬಹುದು." ಎಂದು ಅವರು ಹೇಳಿದ್ದಾರೆ.

 ನಾಲ್ಕು ರಾಜ್ಯಗಳಲ್ಲಿ ಬಿಜೆಪಿಯ ಗೆಲುವು 2024 ರ ಲೋಕಸಭಾ ಚುನಾವಣೆಯ ಜನರ ಚಿತ್ತವನ್ನು ಪ್ರತಿಬಿಂಬಿಸುತ್ತದೆ ಎಂಬ ಬಿಜೆಪಿ ನಾಯಕರ ಹೇಳಿಕೆಗಳನ್ನು ಅಲ್ಲಗೆಳೆದ ಬ್ಯಾನರ್ಜಿ, ಬಿಜೆಪಿಯವರು ಹಗಲುಗನಸು ಕಾಣುವುದನ್ನು ಬಿಡಬೇಕು ಎಂದಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News