×
Ad

ಅರ್ಹ ಫಲಾನುಭವಿಗಳು ಲಸಿಕೆ ಹಾಕಿಸಿಕೊಳ್ಳಿ : ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ

Update: 2022-03-16 16:10 IST

ಮಂಗಳೂರು : ರಾಜ್ಯ ಸರಕಾರದ ನಿರ್ದೇಶನದಂತೆ 12 ರಿಂದ 14 ವರ್ಷ ವಯೋಮಿತಿಯ ಮಕ್ಕಳಿಗೆ ಕೊರೋನ ನಿರೋಧಕ ಲಸಿಕೆ ಹಾಕುವ ಕಾರ್ಯಕ್ರಮವನ್ನು  ಜಿಲ್ಲಾಡಳಿತ ಆರಂಭಿಸುತ್ತಿದ್ದು,  ಜಿಲ್ಲೆಯ ಎಲ್ಲಾ  ಅರ್ಹ ಫಲಾನುಭವಿಗಳು ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ.ಅವರು ಮನವಿ ಮಾಡಿದ್ದಾರೆ.

ಅವರು ಇಂದು ೧೨ರಿಂದ ೧೪ ವರ್ಷದೊಳಗಿನ ಮಕ್ಕಳಿಗೆ ಕೊರ್ಬೆವ್ಯಾಕ್ಸ್ ಲಸಿಕೆ ನೀಡುವ ಅಭಿಯಾನಕ್ಕೆ  ದಕ್ಷಿಣ ಕನ್ನಡ ಜಿಲ್ಲಾಡಳಿತದ ವತಿಯಿಂದ  ನಗರದ ವೆನ್ಲಾಕ್ ಆಸ್ಪತ್ರೆ ಆವರಣದಲ್ಲಿರುವ ಆಯುಷ್ ವಿಭಾಗದಲ್ಲಿ  ಚಾಲನೆ ನೀಡಿ ಮಾತನಾಡಿದರು.

ಜಿಲ್ಲೆಯಲ್ಲಿ ೧೨ ರಿಂದ ೧೪ ವರ್ಷದೊಳಗಿನ ೭೩,೩೬೫ ಮಂದಿ ಮಕ್ಕಳಿದ್ದು, ಅವರಿಗೆ ಹಂತ ಹಂತವಾಗಿ ಲಸಿಕೆ ಹಾಕಲಾಗುವುದು. ಜಿಲ್ಲೆಯಲ್ಲಿ  ೨ ನೇ ಡೋಸ್ ಲಸಿಕೆಯನ್ನು ಶೇ. ೯೨ ರಷ್ಟು  ಮಂದಿ ಪಡೆದುಕೊಂಡಿದ್ದು, ಶೇ. ೮ ರಷ್ಟು ಮಂದಿ ಬಾಕಿ ಇದ್ದಾರೆ. ಮೊದಲ ಡೋಸ್ ಲಸಿಕೆ ಪಡೆದವರು ಮತ್ತು ಎಲ್ಲಾ ಅರ್ಹರು ಲಸಿಕೆ ಹಾಕಿಸಿಕೊಳ್ಳಬೇಕು. ೬೦ ವರ್ಷ  ಮೇಲ್ಪಟ್ಟವರಿಗೆ ಮತ್ತು ಆರೋಗ್ಯ ಕಾರ್ಯಕರ್ತರಿಗೆ ಮುನ್ನೆಚ್ಚರಿಕೆ ಲಸಿಕೆ ಹಾಕುವ ಕಾರ್ಯ ಪ್ರಗತಿಯಲ್ಲಿದೆ. ೧೫ ರಿಂದ ೧೮ ವರ್ಷದೊಳಗಿನವರಿಗೆ ಲಸಿಕೆ ಹಾಕುವ ಕಾರ್ಯಕ್ರಮದಲ್ಲಿ ಶೇ. ೮೫ ರಷ್ಟು  ಪೂರ್ತಿಗೊಂಡಿದೆ ಎಂದವರು ಹೇಳಿದರು.

ನಗರದ ಗಣಪತಿ ಹೈಸ್ಕೂಲಿನ ೨೦ ಮಂದಿ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಲಸಿಕೆ ಹಾಕುವ ಮೂಲಕ ಅಭಿಯಾನವನ್ನು ಆರಂಭಿಸಲಾಯಿತು.

ಮೊದಲ ದಿನ ಗಣಪತಿ ಹೈಸ್ಕೂಲಿನ ೨೦ ಮಂದಿ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಲಸಿಕೆ ಹಾಕಲಾಗಿದೆ. ಮುಂದಿನ ೨ ದಿನ ಇದೇ ರೀತಿ ವಿವಿಧ ಶಾಲೆಗಳ ೨೦ ಮಂದಿಗೆ ಲಸಿಕೆ ಹಾಕಲಾಗುವುದು. ಬಳಿಕ ಎಲ್ಲಾ   ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಸಮುದಾಯ ಆರೋಗ್ಯ ಕೇಂದ್ರ, ತಾಲೂಕು ಆಸ್ಪತ್ರೆಗಳಲ್ಲಿ  ಈ ಲಸಿಕಾ ಅಭಿಯಾನ ನಡೆಯಲಿದೆ ಎಂದು ಆರ್‌ಸಿಎಚ್ ಅಧಿಕಾರಿ ಡಾ. ರಾಜೇಶ್ ಮಾಹಿತಿ  ನೀಡಿದರು.

ಜಿಲ್ಲಾ ಪಂಚಾಯತ್ ಸಿಇಓ ಡಾ. ಕುಮಾರ್, ಜಿಲ್ಲಾ  ಆರೋಗ್ಯ ಅಧಿಕಾರಿ ಡಾ. ಕಿಶೋರ್ ಕುಮಾರ್, ವೆನ್ಲಾಕ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಸದಾಶಿವ ಶಾನುಬಾಗ್, ಆರ್.ಎಂ.ಒ. ಡಾ. ಸುಧಾಕರ್, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ. ರಾಜೇಶ್, ಮಂಗಳೂರು ತಾಲೂಕು ಆರೋಗ್ಯ ಅಧಿಕಾರಿ ಡಾ. ಸುಜಯ್, ಜಿಲ್ಲಾ ಆರೋಗ್ಯ ಶಿಕ್ಷಣ ಅಧಿಕಾರಿ ಜ್ಯೋತಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News