ತಮಿಳು ನಟ ಸಿಂಬು ಕಾರು ಹರಿದು ವೃದ್ಧ ಸಾವು: ಚಾಲಕ ಬಂಧನ

Update: 2022-03-24 08:01 GMT
Photo: Twitter

ಚೆನ್ನೈ: ತೆವಳುತ್ತಾ ರಸ್ತೆ ದಾಟುತ್ತಿದ್ದ ವೃದ್ಧರೊಬ್ಬರ ಮೇಲೆ ತಮಿಳು ನಟ ಸಿಲಂಬರಸನ್‌ ಅವರ ಒಡೆತನದಲ್ಲಿರುವ ಕಾರು ಹರಿದಿದೆ. ಅಪಘಾತದಿಂದ ತೀವ್ರ ಗಾಯಗೊಂಡಿದ್ದ 70 ವರ್ಷದ ಮುನುಸ್ವಾಮಿ ಮೃತಪಟ್ಟಿದ್ದಾರೆ ಎಂದು ವರದಿ ಆಗಿದೆ. ಮಾರ್ಚ್‌ 18 ರಂದು ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಪಾಂಡಿ ಬಜಾರು ಠಾಣಾ ವ್ಯಾಪ್ತಿಯ, ರಸ್ತೆ ತಿರುವೊಂದರಲ್ಲಿ ಈ ಅಪಘಾತ ನಡೆದಿದ್ದು, ಸಿಸಿಟಿವಿಯಲ್ಲಿ ದೃಶ್ಯ ದಾಖಲಾಗಿದೆ. ತಿರುವು ಹಾಗೂ ಬೇರೆ ವಾಹನಗಳ ಕಾರಣದಿಂದ ರಸ್ತೆ ಮೇಲೆ ತೆವಳುತ್ತಿದ್ದ ವ್ಯಕ್ತಿ ಚಾಲಕನ ಗಮನಕ್ಕೆ ಬಂದಿರಲಿಲ್ಲ ಎಂದು ವರದಿಯಾಗಿದೆ. ಕಾರಿನಲ್ಲಿ ಸಿಲಂಬರಸನ್‌ ತಂದೆ ನಿರ್ದೇಶಕ, ಹಿರಿಯ ನಟ ಟಿ ರಾಜೇಂದರ್‌ ಪ್ರಯಾಣಿಸುತ್ತಿದ್ದರು. 

ಅಪಘಾತ ಸಂಭವಿಸಿ ಕಾರು ನಿಲ್ಲಿಸದೆ ಹೋಗುವುದು ಸಿಸಿಟಿವಿ ದೃಶ್ಯದಲ್ಲಿ ದಾಖಲಾಗಿದೆ. ಆದರೆ, Times of India ದ ವರದಿ ಪ್ರಕಾರ, ಅಪಘಾತ ನಡೆದ ಸ್ಥಳದಿಂದ 10 ಮೀಟರ್‌ ದೂರದಲ್ಲಿ ಕಾರು ನಿಲ್ಲಿಸಿ, ರಾಜೇಂದರ್‌ ಅವರು ಕಾರಿನಿಂದ ಕೆಳಗಿಳಿದಿದ್ದಾರೆ. ಹಾಗೂ ಅಪಘಾತದಿಂದ ಗಾಯಗೊಂಡಿದ್ದ ಮುನುಸ್ವಾಮಿಯವರನ್ನು ಆಂಬ್ಯುಲೆನ್ಸ್‌ ಮೂಲಕ ಆಸ್ಪತ್ರೆಗೆ ರವಾನಿಸಲು ವ್ಯವಸ್ಥೆ ಮಾಡಿದ್ದರು. 

ಪಾಂಡಿ ಬಜಾರ್ ಟ್ರಾಫಿಕ್ ತನಿಖಾ ವಿಭಾಗದ ಪೊಲೀಸರು ಆರಂಭದಲ್ಲಿ ಐಪಿಸಿಯ ಸೆಕ್ಷನ್ 337, 279 ಅಡಿಯಲ್ಲಿ ಶಿಕ್ಷಾರ್ಹ ಅಪರಾಧಗಳಿಗಾಗಿ ಪ್ರಕರಣವನ್ನು ದಾಖಲಿಸಿದ್ದಾರೆ. ನಂತರ, ಅವರು ಪ್ರಕರಣವನ್ನು ಐಪಿಸಿಯ 304 (ಎ) (ನಿರ್ಲಕ್ಷ್ಯದ ಚಾಲನೆಯಿಂದ ಉಂಟಾದ ಸಾವು) ಎಂದು ಬದಲಾಯಿಸಿದ್ದಾರೆ. ಚಾಲಕ ಸೆಲ್ವಂ ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

 ಮೃತ ಮುನುಸಾಮಿ ಪಾದಚಾರಿ ಮಾರ್ಗದ ನಿವಾಸಿಯಾಗಿದ್ದು, ಸುಮಾರು 15 ವರ್ಷಗಳಿಂದ ನೆರೆಹೊರೆಯಲ್ಲಿ ಸಣ್ಣ ಕೆಲಸಗಳನ್ನು ಮಾಡುತ್ತಿದ್ದರು ಎಂದು ತನಿಖಾಧಿಕಾರಿ ತಿಳಿಸಿದ್ದಾರೆ. ಇತ್ತೀಚೆಗೆ ಮ್ಯಾನ್‌ಹೋಲ್ ಮುಚ್ಚಳವನ್ನು ಎತ್ತುವ ವೇಳೆ ಕಾಲಿಗೆ ಗಾಯವಾಗಿ ರಸ್ತೆಯಲ್ಲಿ ತೆವಳುತ್ತಿದ್ದರು.  

ವಿಚಾರಣೆಯ ಸಮಯದಲ್ಲಿ, ಚಾಲಕ ಸೆಲ್ವಂ ಅವರು ರಸ್ತೆಯಲ್ಲಿ ತೆವಳುತ್ತಿರುವ ವ್ಯಕ್ತಿಯನ್ನು ಗಮನಿಸಲಿಲ್ಲ ಮತ್ತು ವಿರುದ್ಧ ದಿಕ್ಕಿನಲ್ಲಿ ಬಂದ ಮತ್ತೊಂದು ವಾಹನದಿಂದಾಗಿ ರಸ್ತೆಯಲ್ಲಿ ತೆವಳುತ್ತಿದ್ದ ವ್ಯಕ್ತಿ ನನ್ನ ಗಮನಕ್ಕೆ ಬಂದಿಲ್ಲ ಎಂದು ತಿಳಿಸಿರುವುದಾಗಿ ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News