ಮುಟ್ಟಾಳೆ ಧರಿಸಿ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ದ.ಕ. ಜಿಲ್ಲೆಯ ಅಮೈ ಮಹಾಲಿಂಗ ನಾಯ್ಕ್

Update: 2022-03-28 14:35 GMT
Photo: Twitter/@rashtrapatibhvn

ಹೊಸದಿಲ್ಲಿ: ಏಕಾಂಗಿಯಾಗಿ ಏಳು ಸುರಂಗಗಳನ್ನು ಕೊರೆದು ಕೃಷಿ ಭೂಮಿಗೆ ನೀರು ಹರಿಸಿದ್ದ ಪ್ರಗತಿಪರ ಕೃಷಿಕ ಅಮೈ ಮಹಾಲಿಂಗ ನಾಯ್ಕ ಅವರು ರಾಷ್ಟ್ರಪತಿಗಳ ಕೈಯಿಂದ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. 

ರಾಷ್ಟ್ರಪತಿ ಭವನದಲ್ಲಿ ನಡೆದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪದ್ಮಶ್ರೀ ಪಡೆದುಕೊಂಡ ಮಹಾಲಿಂಗ ನಾಯ್ಕ ಅವರು ಮುಟ್ಟಾಳೆಯೊಂದಿಗೆ ಆಗಮಿಸಿ ಗಮನ ಸೆಳೆದಿದ್ದಾರೆ. 

ದಕ್ಷಿಣ ಕನ್ನಡದ ಬಂಟ್ವಾಳ ತಾಲೂಕಿನ ಅಡ್ಯನಡ್ಕ ಸಮೀಪದ ಅಮೈ ನಿವಾಸಿ 76ರ ಹರೆಯದ ಮಹಾಲಿಂಗ ನಾಯ್ಕ ಅವರು  ಕೃಷಿಗೆ ನೀರು ಹಾಯಿಸಲು ಪಂಪ್‌ಸೆಟ್‌ಗಳ ಸೌಲಭ್ಯಗಳೇ ಇಲ್ಲದ ಕಾಲದಲ್ಲಿ ಹಿಂದಿನ ತಲೆಮಾರಿನವರು ಅವಲಂಬಿಸಿದ್ದ ಸುರಂಗ ನೀರಿನ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟು, ಇದೇ ವ್ಯವಸ್ಥೆಯಲ್ಲಿ ವಿದ್ಯುತ್ ರಹಿತವಾಗಿ ಗುರುತ್ವದ ನೆರವಿನಲ್ಲಿ ಕೃಷಿಗೆ ತುಂತುರು ನೀರಾವರಿ, ಸ್ಪ್ರಿಂಕ್ಲರ್ ನೀರಾವರಿ ವ್ಯವಸ್ಥೆಯನ್ನು ಕಲ್ಪಿಸಿ ಸಾಧನೆ ಮಾಡಿದ್ದರು.

ಆರು ಸುರಂಗ ಕೊರೆದರೂ ನೀರು ಸಿಕ್ಕಿರಲಿಲ್ಲ. ಆದರೂ, ತನ್ನ ಸತತ ಪ್ರಯತ್ನ ಬಿಡದ ಮಾಹಾಲಿಂಗ ನಾಯ್ಕ ಏಳನೇ ಸುರಂಗ ಕೊರೆದು ತಮ್ಮ ಪ್ರಯತ್ನಕ್ಕೆ ಯಶಸ್ಸು ತಂದುಕೊಂಡಿದ್ದರು. ಇದೇ ಸಾಧನೆಗೆ ಅವರನ್ನು ಗುರುತಿಸಿ ಪದ್ಮಶ್ರೀ ಪ್ರಶಸ್ತಿ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News