ಜನರಿಗೆ ಏನು ತಿನ್ನಬೇಕು ಅಥವಾ ತಿನ್ನಬಾರದು ಎಂದು ಹೇಳುವುದು ಸರಕಾರದ ಕೆಲಸವಲ್ಲ: ಕೇಂದ್ರ ಸಚಿವ ನಖ್ವಿ

Update: 2022-04-17 11:03 GMT

ಮುಂಬೈ: "ಭಾರತೀಯರಿಗೆ ತಮ್ಮ ನಂಬಿಕೆಯನ್ನು ಆಚರಿಸಲು ಸ್ವಾತಂತ್ರ್ಯವಿದೆ  ಹಾಗೂ ಧಾರ್ಮಿಕ ಸಮುದಾಯಗಳ ನಡುವೆ ಯಾವುದೇ ಅಸಹಿಷ್ಣುತೆ ಬೆಳೆಯುತ್ತಿಲ್ಲ'' ಎಂದು ದೇಶದ ವಿವಿಧ ಭಾಗಗಳಲ್ಲಿ ಧಾರ್ಮಿಕ ಗಲಭೆಗಳ ನಡುವೆ ರವಿವಾರ ಪ್ರಕಟವಾದ ಸಂದರ್ಶನದಲ್ಲಿ ದೇಶದ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಹೇಳಿದ್ದಾರೆ.

ಹನುಮ ಜಯಂತಿ ನಿಮಿತ್ತ ಶನಿವಾರ ಹೊಸದಿಲ್ಲಿಯಲ್ಲಿ ನಡೆದ ಮೆರವಣಿಗೆಯಲ್ಲಿ ಕೋಮು  ಘರ್ಷಣೆಗಳು ನಡೆದಿದ್ದು, ಆರು ಪೊಲೀಸರು ಸೇರಿದಂತೆ ಹಲವಾರು ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರ ಸರಕಾರದಲ್ಲಿ  ಅಲ್ಪಸಂಖ್ಯಾತ ವ್ಯವಹಾರಗಳ ಸಚಿವರಾಗಿರುವ ಮುಖ್ತಾರ್ ಅಬ್ಬಾಸ್ ನಖ್ವಿ ಅವರು “ದಿ ಎಕನಾಮಿಕ್ ಟೈಮ್ಸ್’’ ಪತ್ರಿಕೆಯೊಂದಿಗೆ ಮಾತನಾಡುತ್ತಾ, "ದೇಶದಲ್ಲಿ ಶಾಂತಿ ಹಾಗೂ  ಸಮೃದ್ಧಿಯನ್ನು ಅರಗಿಸಿಕೊಳ್ಳಲು ಸಾಧ್ಯವಾಗದ ಕೆಲವು ದುಷ್ಟ ಶಕ್ತಿಗಳು  ಭಾರತದ ಅಂತರ್ಗತ ಸಂಸ್ಕೃತಿ ಹಾಗೂ ಬದ್ಧತೆಗೆ ಭಂಗ ತರಲು ಪ್ರಯತ್ನಿಸುತ್ತವೆ"ಎಂದರು.

"ಜನರಿಗೆ ಏನು ತಿನ್ನಬೇಕು ಅಥವಾ ತಿನ್ನಬಾರದು ಎಂದು ಹೇಳುವುದು ಸರಕಾರದ ಕೆಲಸವಲ್ಲ. ದೇಶದಲ್ಲಿ ಪ್ರತಿಯೊಬ್ಬ ನಾಗರಿಕರಿಗೂ ಅವರವರ ಇಷ್ಟದ ಆಹಾರವನ್ನು ತಿನ್ನಲು ಸ್ವಾತಂತ್ರ್ಯವಿದೆ" ಎಂದು ನಖ್ವಿ ಹೇಳಿದರು.

ಭಾರತದಲ್ಲಿ ಹಿಜಾಬ್ ಮೇಲೆ ಯಾವುದೇ ನಿಷೇಧವಿಲ್ಲ. ಮಾರುಕಟ್ಟೆಗಳಲ್ಲಿ ಹಾಗೂ ಇತರ ಸ್ಥಳಗಳಲ್ಲಿ ಹಿಜಾಬ್ ಧರಿಸಬಹುದು. ಆದರೆ ಪ್ರತಿಯೊಂದು ಕಾಲೇಜು ಅಥವಾ ಸಂಸ್ಥೆಯು ವಸ್ತ್ರ ಸಂಹಿತೆ(ಡ್ರೆಸ್ ಕೋಡ್), ಶಿಸ್ತು ಮತ್ತು ಗೌರವ ಹೊಂದಿದೆ. ಇದನ್ನು ನಾವು ಒಪ್ಪಿಕೊಳ್ಳಲೇಬೇಕು. ನಿಮಗೆ ಇಷ್ಟವಿಲ್ಲದಿದ್ದರೆ, ನೀವು ಬೇರೆ ಸಂಸ್ಥೆಯನ್ನು ಆಯ್ಕೆ ಮಾಡಬಹುದು ”ಎಂದು ನಖ್ವಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News