ಠಾಣೆಯೊಳಗೆ ಪೊಲೀಸರು ಮತ್ತು ಸಂಘಪರಿವಾರ ಕಾರ್ಯಕರ್ತರ ನಡುವೆ ಮಾರಾಮಾರಿ: ಐವರು ಪೊಲೀಸರಿಗೆ ಗಾಯ

Update: 2022-04-29 10:08 GMT

ನೋಯ್ಡಾ: ಪೊಲೀಸ್ ಠಾಣೆಯೊಳಗೆ ಗುರುವಾರ ಸಂಜೆ ಪೊಲೀಸರು ಮತ್ತು ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ಕಾರ್ಯಕರ್ತರ ನಡುವೆ ನಡೆದ ಮಾರಾಮಾರಿಯಲ್ಲಿ ಐವರು ಪೊಲೀಸರು ಗಾಯಗೊಂಡಿದ್ದಾರೆ. ನಂತರ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿ ಹಲವರನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ ಎಂದು Timesofindia.com ವರದಿ ಮಾಡಿದೆ.

ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ 17ರ ಹರೆಯದ ಬಾಲಕಿಯನ್ನು ಅತ್ಯಾಚಾರಗೈದ ಆರೋಪದ ಮೇಲೆ 13 ವರ್ಷದ ಬಾಲಕನನ್ನು ಬಂಧಿಸಿದ್ದರ ಕುರಿತು ಗುರುವಾರ ಸಂಜೆ 4 ಗಂಟೆಗೆ, ವಿಎಚ್‌ಪಿ ಮತ್ತು ಬಜರಂಗದಳದ 50-60 ಸದಸ್ಯರು ಸೆಕ್ಟರ್ 39 ಪೊಲೀಸ್ ಠಾಣೆಗೆ ಪೊಲೀಸರೊಂದಿಗೆ ʼಮಾತನಾಡಲುʼ ಬಂದಿದ್ದರು. ವಾದವು ಶೀಘ್ರದಲ್ಲೇ ಘರ್ಷಣೆಯಾಗಿ ಮಾರ್ಪಟ್ಟಿತು. ಪೋಲೀಸರ ಮೇಲೆ ಸಂಘಪರಿವಾರ ಕಾರ್ಯಕರ್ತರು ಈ ವೇಳೆ ದಾಳಿ ನಡೆಸಿದ್ದರು. ಪ್ರತಿಯಾಗಿ ಪೊಲೀಸರೂ ಕೆಲವರನ್ನು ಥಳಿಸಿದ್ದರು ಎನ್ನಲಾಗಿದೆ.  ಘಟನೆಯಲ್ಲಿ ಐವರು ಪೊಲೀಸರಿಗೆ ಗಾಯಗಳಾಗಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಕರಣ ಸಂಬಂಧ ಆರೋಪಿಗಳ ವಿರುದ್ಧ ಹಲವಾರು ಸೆಕ್ಷನ್‌ ಗಳನ್ನು ದಾಖಲಿಸಲಾಗಿದೆ.

“ಎಫ್‌ಐಆರ್‌ನಲ್ಲಿ 50-60 ಅಪರಿಚಿತ ವ್ಯಕ್ತಿಗಳು ಶಾಮೀಲಾಗಿರುವುದನ್ನು ಉಲ್ಲೇಖಿಸಲಾಗಿದೆ ಎಂದು ಅಧಿಕಾರಿ ಹೇಳಿದರು. ಕಾನ್‌ಸ್ಟೆಬಲ್ ಅನಿಲ್ ಕುಮಾರ್ ನೀಡಿದ ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಲಾಗಿದೆ. “ಸಂಜೆ 4 ಗಂಟೆ ಸುಮಾರಿಗೆ ಅವರು ಪೊಲೀಸ್ ಠಾಣೆಯ ಹೊರಗೆ ಧರಣಿ ಆರಂಭಿಸಿದರು. ನಾನು ಮತ್ತು ನನ್ನ ನಾಲ್ವರು ಸಹೋದ್ಯೋಗಿಗಳು ಅವರೊಂದಿಗೆ ತರ್ಕಿಸಲು ಪ್ರಯತ್ನಿಸಿದೆವು, ಆದರೆ ಅವರು ಘೋಷಣೆಗಳನ್ನು ಕೂಗುತ್ತಲೇ ಇದ್ದರು. ಗಂಗಾ ನೇತೃತ್ವದಲ್ಲಿ, ಅವರು ಆರಂಭದಲ್ಲಿ ನಮ್ಮ ಮೇಲೆ ನಿಂದನೆಗಳನ್ನು ಮಾಡಿದರು ಮತ್ತು ನಂತರ ನಮ್ಮ ಮೇಲೆ ಹಲ್ಲೆ ನಡೆಸಿದರು. ಅವರು ನಮ್ಮ ಸಮವಸ್ತ್ರವನ್ನು ಹರಿದಿದ್ದಾರೆ ಎಂದು ಕುಮಾರ್ ದೂರಿನಲ್ಲಿ ತಿಳಿಸಿದ್ದಾರೆ.

ದಾಳಿಕೋರರಲ್ಲಿ ಕೆಲವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಹೆಚ್ಚುವರಿ ಡಿಸಿಪಿ ರಣವಿಜಯ್ ಸಿಂಗ್ ತಿಳಿಸಿದ್ದಾರೆ. "ಘರ್ಷಣೆಯಲ್ಲಿ ಇತರರು ಭಾಗಿಯಾಗಿರುವ ಬಗ್ಗೆ ನಾವು ಪರಿಶೀಲಿಸುತ್ತಿದ್ದೇವೆ. ವಿಸ್ತೃತ ತನಿಖೆ ನಡೆಸಲಾಗುತ್ತಿದೆ ಎಂದು ಸಿಂಗ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News