ವಿಶೇಷ ಚೇತನ ಮಗುವಿಗೆ ಪ್ರವೇಶ ನಿರಾಕರಣೆ ಪ್ರಕರಣ: ಇಂಡಿಗೋ ಏರ್ಲೈನ್ಸ್ ಗೆ ಶೋಕಾಸ್ ನೋಟಿಸ್
ಹೊಸದಿಲ್ಲಿ: ಮೇ 7 ರಂದು ರಾಂಚಿ ವಿಮಾನ ನಿಲ್ದಾಣದಲ್ಲಿ ವಿಶೇಷ ಸಾಮರ್ಥ್ಯವುಳ್ಳ ಮಗುವಿಗೆ ಬೋರ್ಡಿಂಗ್ ನಿರಾಕರಿಸುವಲ್ಲಿ ಏರ್ಲೈನ್ ಸಿಬ್ಬಂದಿ ಪ್ರಾಥಮಿಕ ಹಂತದ ನಿಯಮಗಳನ್ನು ಉಲ್ಲಂಘಿಸಿರುವುದನ್ನು ಸತ್ಯಶೋಧನಾ ಸಮಿತಿಯು ಕಂಡುಕೊಂಡ ಬಳಿಕ ಇಂಡಿಗೋಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ ಎಂದು ವಿಮಾನಯಾನ ನಿಯಂತ್ರಕ ಡಿಜಿಸಿಎ ಸೋಮವಾರ ತಿಳಿಸಿದೆ.
ಮೇ 9 ರಂದು ವಿಮಾನಯಾನ ಸಂಸ್ಥೆಯು ಬಾಲಕನು "ನೋಡಲು ಭಯಭೀತನಾಗಿದ್ದರಿಂದ" ಬೋರ್ಡಿಂಗ್ ನಿರಾಕರಿಸಲಾಗಿದೆ ಎಂದು ಹೇಳಿತ್ತು.
ರಾಂಚಿ-ಹೈದರಾಬಾದ್ ವಿಮಾನವನ್ನು ಹತ್ತಲು ಬಾಲಕನನ್ನು ನಿಷೇಧಿಸಿದ್ದರಿಂದ, ಅವನ ಹೆತ್ತವರು ಕೂಡಾ ವಿಮಾನವನ್ನು ಪ್ರವೇಶಿಸದಿರಲು ನಿರ್ಧರಿಸಿದ್ದರು. ಈ ಕುರಿತು ತನಿಖೆ ನಡೆಸಲು ನಾಗರಿಕ ವಿಮಾನಯಾನ ನಿರ್ದೇಶನಾಲಯವು ಸತ್ಯಶೋಧನಾ ಸಮಿತಿಯನ್ನು ರಚಿಸಿತ್ತು. ಸಮಿತಿಯು ತನ್ನ ವರದಿಯನ್ನು ಸಲ್ಲಿಸಿದೆ ಎಂದು ಡಿಜಿಸಿಎ ಸೋಮವಾರ ಹೇಳಿಕೆಯಲ್ಲಿ ತಿಳಿಸಿದೆ.
"ಸಮಿತಿಯ ಪ್ರಾಥಮಿಕವಾಗಿ ಕಂಡುಕೊಂಡ ವಿಚಾರಗಳು ಇಂಡಿಗೋ ಸಿಬ್ಬಂದಿಯು ಪ್ರಯಾಣಿಕರನ್ನು ಅಸಮರ್ಪಕವಾಗಿ ನಿರ್ವಹಿಸಿರುವುದನ್ನು ತೋರಿಸುತ್ತವೆ. ಇದರಿಂದಾಗಿ ಅನ್ವಯವಾಗುವ ನಿಯಮಗಳೊಂದಿಗೆ ಕೆಲವು ಅಸಂಗತತೆಗಳು ಉಂಟಾಗುತ್ತವೆ" ಎಂದು ಅದು ಉಲ್ಲೇಖಿಸಿದೆ.