ಪಠ್ಯಪುಸ್ತಕಗಳ ಪರಿಷ್ಕರಣೆ ಅವಾಂತರ: ಮರು ಮುದ್ರಣವಾದರೆ ಸರಕಾರಕ್ಕೆ 150 ಕೋ.ರೂ.ಗೂ ಅಧಿಕ ಹೊರೆ

Update: 2022-06-09 02:38 GMT

ಬೆಂಗಳೂರು: ಆರರಿಂದ ಹತ್ತನೇ ತರಗತಿಯ ಸಮಾಜ ವಿಜ್ಞಾನ, ಭಾಷಾ ಪಠ್ಯ ಗಳೂ ಸೇರಿದಂತೆ ಇನ್ನಿತರ ವಿಷಯಗಳ ಪಠ್ಯ ಪುಸ್ತಕಗಳ ಪರಿಷ್ಕರಣೆ ವಿವಾದಕ್ಕೀಡಾಗಿರುವ ಬೆನ್ನಲ್ಲೇ ‘ತಪ್ಪುಗಳನ್ನು ಸರಿಪಡಿಸಿ ಮರುಮುದ್ರಣ ಮಾಡಲು ಸಿದ್ಧರಿದ್ದೇವೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ. ಒಂದೊಮ್ಮೆ ಇಡೀ ಪಠ್ಯಪುಸ್ತಕಗಳನ್ನು ಮರು ಮುದ್ರಣ ಮಾಡಿದ್ದೇ ಆದಲ್ಲಿ 158.21 ಕೋಟಿ ರೂ. ಬೊಕ್ಕಸಕ್ಕೆ ಹೊರೆ ಬೀಳಲಿದೆ. ಇದರ ನೇರ ಹೊಣೆಗಾರಿಕೆಯನ್ನು ಸರಕಾರ ಮತ್ತು ರೋಹಿತ್ ಚಕ್ರತೀರ್ಥ ಸಮಿತಿಯೇ ಹೊರ ಬೇಕಿದೆ!

ಶಾಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ಬೈಸಿಕಲ್ ಮತ್ತು ರಾಜ್ಯಾದಾದ್ಯಂತ ಶಾಲಾ ಮಕ್ಕಳಿಗೆ ಮೊಟ್ಟೆ ವಿತರಿಸಲು ಅನುದಾನ ಇಲ್ಲ ವೆಂದು ಕೈಚೆಲ್ಲಿ ಅಸಹಾಯಕವಾಗಿರುವ ರಾಜ್ಯ ಸರಕಾರ, ರೋಹಿತ್ ಚಕ್ರತೀರ್ಥ ಸಮಿತಿಯು ಮಾಡಿರುವ ಎಡವಟ್ಟಿನಿಂದಾಗಿ ಒಂದೊಮ್ಮೆ ಇಡೀ ಪಠ್ಯಪುಸ್ತಕಗಳನ್ನು ಮರುಮುದ್ರಣ ಮಾಡಿದ್ದೇ ಆದಲ್ಲಿ ಶಿಕ್ಷಣ ಇಲಾಖೆಯು ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೆ ಬೀಳಲಿದೆ.

ಪಠ್ಯ ಪರಿಷ್ಕರಣೆ ಮತ್ತು ಮರು ಪರಿಷ್ಕರಣೆಯು ಕ್ರಮಬದ್ಧವಾಗಿದ್ದು ಮತ್ತು ವಿವಾದಕ್ಕೆ ಕಾರಣ ವಾಗದೇ ಇದ್ದಿದ್ದರೆ ಮರು ಮುದ್ರಣದ ಅಗತ್ಯ ತೆಯೇ ಕಂಡು ಬರುತ್ತಿರಲಿಲ್ಲ. ಅಲ್ಲದೆ 158.21 ಕೋಟಿ ರೂ. ಹೊರೆ ಅಥವಾ ನಷ್ಟದ ಮಾತೂ ಕೇಳಿ ಬರುತ್ತಿರಲಿಲ್ಲ. ಆದರೀಗ ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯ ಸಮಿತಿಯು ಪರಿಷ್ಕರಿಸಿರುವ ವಿವಾದಿತ ಪಠ್ಯಗಳನ್ನೇ 2022-23ನೇ ಶೈಕ್ಷಣಿಕ ಸಾಲಿಗೆ ಮುದ್ರಣ ಮಾಡಲಾಗಿದೆ. ಈಗಾಗಲೇ ಮರು ಪರಿಷ್ಕರಿಸಿರುವ ಪಠ್ಯಪುಸ್ತಕಗಳು ರಾಜ್ಯದ ಶೇ.50ರಷ್ಟು ಶಾಲೆಗಳಿಗೆ ಮಾತ್ರ ತಲುಪಿವೆ ಎಂದು ತಿಳಿದು ಬಂದಿದೆ.

ಈ ಸಮಿತಿಯು ಪರಿಷ್ಕರಿಸಿರುವ ಪಠ್ಯಪುಸ್ತಕಗಳನ್ನು ಶಾಲೆಗಳಿಗೆ ವಿತರಿಸಬಾರದು ಎಂದು ಆಗ್ರಹಿಸಿ ನಡೆಯುತ್ತಿರುವ ಹೋರಾಟ ಇನ್ನೂ ನಿಂತಿಲ್ಲ. ಈ ನಡುವೆ ತಪ್ಪುಗಳನ್ನು ಸರಿಪಡಿಸಿ ಇಡೀ ಪಠ್ಯಪುಸ್ತಕಗಳನ್ನೇ ಮರುಮುದ್ರಣ ಮಾಡಲು ಹೊರಟರೆ ಪುನಃ 158.21 ಕೋಟಿ ರೂ.ಯನ್ನು ವೆಚ್ಚ ಮಾಡಬೇಕಾದ ಅನಿವಾರ್ಯ ತೆಯೂ ಇದೆ.

ಸರಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ 1ನೇ ತರಗತಿಯಿಂದ 10 ನೇ ತರಗತಿಯಲ್ಲಿ ವ್ಯಾಸಂಗ ಮಾಡು ತ್ತಿರುವ 59.30 ಲಕ್ಷ ವಿದ್ಯಾರ್ಥಿಗಳಿಗೆ ಉಚಿತವಾಗಿ ಪಠ್ಯ ಪುಸ್ತಕ ವಿತರಿಸಲು 158.21 ಕೋಟಿ ರೂ. 2021ರ ಡಿಸೆಂ ಬರ್ 21ರಂದೇ ಬಿಡುಗಡೆಯಾಗಿತ್ತು. ಇದರಲ್ಲಿ 1ರಿಂದ 3ನೇ ತರಗತಿ ನಲಿ ಕಲಿ ಘಟಕಗಳಿಗೆ ಹವಾಮಾನ ನಕ್ಷೆ ಮತ್ತು ಪ್ರಗತಿ ನೋಟ, ವಿತರಿಸುವುದು ಮತ್ತು ಪಠ್ಯಪುಸ್ತಕ ರಚನಾ ಕಾರ್ಯಾಗಾರ, ಸಾಗಣೆ ವೆಚ್ಚ ಮತ್ತು ವೇತನೇತರ ವೆಚ್ಚವೂ ಒಳಗೊಂಡಿದೆ.

ಕುವೆಂಪು, ಬಸವೇಶ್ವರ, ಅಂಬೇಡ್ಕರ್ ಅವರಿಗೆ ಸಂಬಂಧಿಸಿದ ಮಹತ್ವದ ಮಾಹಿತಿಗಳನ್ನು ಕೈ ಬಿಟ್ಟಿರುವುದು ಮತ್ತು ತಪ್ಪು ಮಾಹಿತಿಗಳನ್ನು ಸೇರಿಸಿರುವ ಅಂಶಗಳನ್ನು ತೆಗೆದು ಹಿಂದಿನ ಸಮಿತಿ ಪರಿಷ್ಕರಿಸಿರುವ ಪಠ್ಯಪುಸ್ತಕಗಳಲ್ಲಿದ್ದ ಅಂಶಗಳನ್ನೊಳಗೊಂಡ ಕೇವಲ ಪುಟಗಳನ್ನಷ್ಟೇ ಮರು ಮುದ್ರಣ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ ಈ ಪುಟಗಳು ಕೇವಲ ಶಿಕ್ಷಕರಿಗೆ ಮಾತ್ರ ನೀಡಲಾಗುತ್ತದೆಯೇ ವಿನಃ ಮಕ್ಕಳಿಗೆ ನೀಡುವು ದಿಲ್ಲ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

ಪಠ್ಯಪುಸ್ತಕದಲ್ಲಿ ಟಿಪ್ಪುವಿನ ಕುರಿತಾದ ಮಹತ್ವದ ಸಂಗತಿಗಳನ್ನು ಸಮಿತಿಯು ಕೈಬಿಟ್ಟಿತ್ತು. ರಾಕೆಟ್ ತಂತ್ರಜ್ಞಾನ, ಶೃಂಗೇರಿ ಮಠಕ್ಕೆ ನೀಡಿದ ದೇಣಿಗೆ, ರೇಷ್ಮೆ ವ್ಯವಸಾಯ ಪಾಠಾಂಶವನ್ನು ಕೈಬಿಟ್ಟಿತ್ತು.

ಇದಲ್ಲದೆ ಸಿಂಧೂ ಜತೆಗೆ ಸರಸ್ವತಿ ಸೇರ್ಪಡೆ ಮಾಡಿದ್ದ ಸಮಿತಿಯು ಸ್ವಾತಂತ್ರ ಸಂಗ್ರಾಮ ಪಠ್ಯದಲ್ಲಿ ದಂಗೆ ಎಂಬ ಪದವನ್ನು ಕಿತ್ತೊಗೆದಿತ್ತು. ಪಠ್ಯ ಪರಿಷ್ಕರಣೆಯಿಂದಾಗಿ 2.5 ಕೋಟಿ ರೂ. ನಷ್ಟವಾಗಿತ್ತು. ಅಲ್ಲದೆ 6.76 ಲಕ್ಷ ಪುಸ್ತಕಗಳು ಅನುಪಯುಕ್ತವಾಗಿದ್ದವಲ್ಲದೆ ಹರಾಜಿಗೂ ನಕಾರ ವ್ಯಕ್ತವಾಗಿತ್ತು.

Writer - ಜಿ.ಮಹಾಂತೇಶ್

contributor

Editor - ಜಿ.ಮಹಾಂತೇಶ್

contributor

Similar News