ಉನ್ನತ ಶಿಕ್ಷಣ; ನಿಯಂತ್ರಕರ ನೇಮಕಕ್ಕೆ ಕೇಂದ್ರ ಸರ್ಕಾರ ಚಿಂತನೆ

Update: 2022-06-11 01:53 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ದೇಶದಲ್ಲಿ ಉನ್ನತ ಶಿಕ್ಷಣ ಕ್ಷೇತ್ರದ ನಿಯಂತ್ರಣಕ್ಕೆ ಹೊಸ ನಿಯಂತ್ರಣ ಸಂಸ್ಥೆಯನ್ನು ಸ್ಥಾಪಿಸುವ ಸಂಬಂಧ ಮಸೂದೆ ಮಂಡಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎಂದು timesofindia.com ವರದಿ ಮಾಡಿದೆ.

ಈ ಸಂಬಂಧ ಭಾರತದ ಉನ್ನತ ಶಿಕ್ಷಣ ಆಯೋಗ ಮಸೂದೆಯನ್ನು ಜುಲೈನಲ್ಲಿ ಆರಂಭವಾಗುವ ಮುಂಗಾರು ಅಧಿವೇಶನದಲ್ಲಿ ಮಂಡಿಸಲು ಸಿದ್ಧತೆ ನಡೆಸಿದೆ.

ಪ್ರಸ್ತಾವಿತ ಆಯೋಗವು ಶೈಕ್ಷಣಿಕ ಗುಣಮಟ್ಟ ಮಾನದಂಡಗಳನ್ನು ಜಾರಿಗೊಳಿಸುವ ಅಧಿಕಾರ ಹೊಂದಿರುತ್ತದೆ ಹಾಗೂ ಕಳಪೆ ಗುಣಮಟ್ಟದ ಶಿಕ್ಷಣ ಸಂಸ್ಥೆಗಳನ್ನು ಮುಚ್ಚಲು ಆದೇಶಿಸುವ ಅಧಿಕಾರವೂ ಈ ಆಯೋಗಕ್ಕೆ ಇರುತ್ತದೆ. ಆಯೋಗದ ನಿರ್ದೇಶನಗಳಿಗೆ ಬದ್ಧವಾಗದೇ ಇದ್ದಲ್ಲಿ ದಂಡ ಅಥವಾ ಜೈಲು ಶಿಕ್ಷೆ ವಿಧಿಸಲು ಅವಕಾಶ ಇದೆ.

ರಾಷ್ಟ್ರೀಯ ಶಿಕ್ಷಣ ನೀತಿ-2020ರ ಪ್ರಮುಖ ಅಂಶ ಇದಾಗಿದ್ದು, ದೇಶದಲ್ಲಿ ಉನ್ನತ ಶಿಕ್ಷಣ ಕ್ಷೇತ್ರಕ್ಕೆ ಮರು ಶಕ್ತಿ ತುಂಬಲು ಮತ್ತು ವಿಪುಲವಾಗಿ ಬೆಳೆಯಲು ಅನುವು ಮಾಡಿಕೊಡುವ ದೃಷ್ಟಿಯಿಂದ ನಿಯಂತ್ರಣ ವ್ಯವಸ್ಥೆ ಅಗತ್ಯ ಎಂದು ಶಿಕ್ಷಣ ನೀತಿಯಲ್ಲಿ ಪ್ರಸ್ತಾವಿಸಲಾಗಿತ್ತು.

2018ರ ಜೂನ್‍ನಲ್ಲೇ ಸರ್ಕಾರ, ಭಾರತದ ಉನ್ನತ ಶಿಕ್ಷಣ ಆಯೋಗ ಕಾಯ್ದೆ- 2018 ಹೆಸರಿನ ಕರಡು ಕಾನೂನನ್ನು ಅಪ್‍ಲೋಡ್ ಮಾಡಿತ್ತು. ಇದು ಜಾರಿಯಾದ ಬಳಿಕ ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ ಕಾಯ್ದೆ ರದ್ದಾಗಲಿದೆ.

ಹೊಸ ಶಿಕ್ಷಣ ನೀತಿಯ ಅನ್ವಯ ದೇಶದಲ್ಲಿ ಉನ್ನತ ಶಿಕ್ಷಣ ನಿಯಂತ್ರಣ ಹಲವು ಮೂಲ ಸಮಸ್ಯೆಗಳನ್ನು ಎದುರಿಸುತ್ತಿದೆ. ಕೆಲವೇ ಸಂಸ್ಥೆಗಳಲ್ಲಿ ಅಧಿಕಾರ ಕೇಂದ್ರೀಕರಣಗೊಂಡಿದ್ದು, ಈ ಸಂಸ್ಥೆಗಳಲ್ಲಿ ಹಿತಾಸಕ್ತಿಯ ಸಂಘರ್ಷಗಳಿವೆ. ಇದರಿಂದಾಗಿ ಸಂಸ್ಥೆಗಳಿಗೆ ಉತ್ತರದಾಯಿತ್ವ ಇಲ್ಲದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News