2024ರೊಳಗೆ 67,956 ಕಿ.ಮೀ. ರೈಲು ಮಾರ್ಗ ವಿದ್ಯುದ್ದೀಕರಣ: ಸಚಿವೆ ಶೋಭಾ ಕರಂದ್ಲಾಜೆ
ಉಡುಪಿ: ದೇಶದಲ್ಲಿ 2024ರೊಳಗೆ 67,956 ಕಿ.ಮೀ. ರೈಲು ಮಾರ್ಗವನ್ನು ವಿದ್ಯುತ್ತೀಕರಣಗೊಳಿಸುವ ಯೋಜನೆಯಿದ್ದು, ಇದುವರೆಗೆ 45,881 ಕಿ.ಮೀ. ಮಾರ್ಗದ ವಿದ್ಯುದ್ದೀಕರಣ ಪೂರ್ಣಗೊಂಡಿದ್ದು, ಇದಕ್ಕಾಗಿ ಒಟ್ಟು 13500 ಕೋಟಿ ರೂ. ವೆಚ್ಚವಾಗಿದೆ. ಬಾಕಿ ಉಳಿದಿರುವ ಸುಮಾರು 22 ಸಾವಿರ ಕಿ.ಮೀ.ಮಾರ್ಗದ ಕಾಮಗಾರಿಯನ್ನು ಇನ್ನೆರಡು ವರ್ಷದೊಳಗೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಖಾತೆಯ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಪೂರ್ಣಗೊಂಡ ಕೊಂಕಣ ರೈಲ್ವೆಯ ವಿದ್ಯುದ್ದೀಕರಣ ಯೋಜನೆಯನ್ನು ರಾಷ್ಟ್ರಕ್ಕೆ ಸಮರ್ಪಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಬೆಂಗಳೂರಿನ ವರ್ಚುವಲ್ ಕಾರ್ಯಕ್ರಮವನ್ನು, ಉಡುಪಿ ಇಂದ್ರಾಳಿಯ ಕೊಂಕಣ ರೈಲ್ವೆ ನಿಲ್ದಾಣದಲ್ಲಿ ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಕೊಂಕಣ ರೈಲ್ವೆಯು ಕರಾವಳಿಯ ಜೀವನಾಡಿಯಾಗಿದ್ದು, ನಮ್ಮ ಹೆಮ್ಮೆ ಯಾಗಿದೆ. ಇದು ಕರಾವಳಿಯನ್ನು ಉತ್ತರ ಭಾರತದೊಂದಿಗೆ ಜೋಡಿಸುವ ಮಾರ್ಗವಾಗಿದೆ. ಪರಿಸರದ ಹಲವು ಅಡೆತಡೆಗಳನ್ನು ಎದುರಿಸಿ ಆರಂಭಗೊಂಡ ಈ ರೈಲ್ವೆ ಮಾರ್ಗವನ್ನು ಪ್ರಸ್ತುತ ಸಂಪೂರ್ಣ ವಿದ್ಯುದ್ದೀಕರಣಗೊಳಿಸಿರು ವುದರಿಂದ ಕೊಂಕಣ ರೈಲ್ವೆಗೆ ವಾರ್ಷಿಕವಾಗಿ 300 ಕೋಟಿ ರೂ. ಉಳಿತಾಯ ವಾಗಲಿದೆ ಎಂದರು.
ಮಹಾರಾಷ್ಟ್ರದ ರೋಹಾದಿಂದ ಮಂಗಳೂರಿನ ತೋಕೂರುವರೆಗಿನ ೭೪೦ ಕಿ.ಮೀ. ಉದ್ದದ ಕೊಂಕಣ ರೈಲು ಮಾರ್ಗವನ್ನು ೧೨೮೭ ಕೋಟಿ ರೂ. ವೆಚ್ಚದಲ್ಲಿ ವಿದ್ಯುತ್ತೀಕರಣಗೊಳಿಸಿದ್ದು, ಇದರಿಂದ ನಿರ್ವಹಣಾ ವೆಚ್ಚ ೧೨೦ ಕೋಟಿ ರೂ. ಉಳಿತಾಯವಾಗಲಿದ್ದು, ವಿದ್ಯುತ್ ಬಳಕೆಯಿಂದ ಕಲ್ಲಿದ್ದಲು ಬಳಕೆ ಪ್ರಮಾಣ ಕಡಿಮೆಯಾಗಿ, ಪರಿಸರ ಮಾಲಿನ್ಯ ಕಡಿಮೆಯಾಗಲಿದೆ. ಈ ಮಾರ್ಗದಲ್ಲಿ ೧೬ ಮೈಲ್ ಎಕ್ಸ್ಪ್ರೆಸ್ ಹಾಗೂ ೧೦ ಗೂಡ್ಸ್ ರೈಲುಗಳು ಸಂಚರಿಸುತಿದ್ದು, ಪ್ರಯಾಣಿಕರಿಗೆ ವೇಗವಾಗಿ ತಮ್ಮ ಸ್ಥಳ ತಲುಪಲು ಸಾಧ್ಯವಾಗಲಿದೆ ಎಂದರು.
ಕೇಂದ್ರ ಸರಕಾರದ 8 ವರ್ಷಗಳ ಆಡಳಿತದ ಅವಧಿಯಲ್ಲಿ ಶೌಚಾಲಯ, ವಸತಿ, ವಿದ್ಯುತ್ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾರ್ಯಗಳಾಗಿವೆ. ದೇಶದ ರೈತರ ಆದಾಯವನ್ನು ದ್ವಿಗುಣಗೊಳಿಸುವ ಉದ್ದೇಶದಿಂದ, ರೈತರ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಒದಗಿಸಲು ಮತ್ತು ಆಹಾರ ಪದಾರ್ಥಗಳ ರಫ್ತು ಹೆಚ್ಚಿಸಲು ಆದ್ಯತೆ ನೀಡಲಾಗುತ್ತಿದೆ. ವಿಶ್ವದಲ್ಲಿ ಆಹಾರ ಪದಾರ್ಥಗಳ ರಫ್ತಿನಲ್ಲಿ ಭಾರತ ಈಗ ೯ನೇ ಸ್ಥಾನದಲ್ಲಿದೆ ಎಂದರು.
ಕಾರ್ಯಕ್ರಮದಲ್ಲಿ ಉಡುಪಿ ನಗರಸಭೆಯ ಅಧ್ಯಕ್ಷೆ ಸುಮಿತ್ರಾ ಆರ್ ನಾಯಕ್, ಕೊಂಕಣ ರೈಲ್ವೆಯ ಕಾರವಾರ ಪ್ರಾದೇಶಿಕ ಕಚೇರಿಯ ಕ್ಷೇತ್ರಿಯ ಪ್ರಬಂಧಕ ಬಿ.ಬಿ.ನಿಕ್ಕಂ, ಕೊಂಕಣ ರೈಲ್ವೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಸುಧಾ ಕೃಷ್ಣಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.
ಕೊಂಕಣ ರೈಲ್ವೆಯ ಹಿರಿಯ ಸಾರ್ವಜನಿಕ ಸಂಪರ್ಕಾಧಿಕಾರಿ ರಾಜೇಶ್ ನಾಯಕ್ ಸ್ವಾಗತಿಸಿದರು.