"ಪ್ರವಾದಿ ಕುರಿತ ನೂಪುರ್ ಶರ್ಮಾ ಹೇಳಿಕೆಗಳು ಆಕ್ಷೇಪಾರ್ಹವಲ್ಲವೇ ಎಂದು ನಿಮ್ಮ ಸ್ನೇಹಿತ ಅಬ್ಬಾಸ್ರಲ್ಲಿ ಕೇಳಿ"
ಹೊಸದಿಲ್ಲಿ,ಜೂ.20: ಪ್ರಧಾನಿ ನರೇಂದ್ರ ಮೋದಿಯವರು ತನ್ನ ತಾಯಿಯ 99ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಬ್ಲಾಗ್ ಲೇಖನದಲ್ಲಿ ನೆನಪಿಸಿಕೊಂಡಿದ್ದ ಸ್ನೇಹಿತ ಅಬ್ಬಾಸ್ ರನ್ನು ಪ್ರಸ್ತಾಪಿಸಿರುವ ಹೈದರಾಬಾದ ಸಂಸದ ಅಸದುದ್ದೀನ್ ಉವೈಸಿಯವರು,ಪ್ರವಾದಿ ಮುಹಮ್ಮದ್ ರ ಕುರಿತು ಅವಹೇಳನಕಾರಿ ಹೇಳಿಕೆ ಹಿನ್ನೆಲೆಯಲ್ಲಿ ಅಮಾನತುಗೊಂಡಿರುವ ಬಿಜೆಪಿ ನಾಯಕಿ ನೂಪುರ್ ಶರ್ಮಾರ ಹೇಳಿಕೆಗಳು ಆಕೇಪಾರ್ಹವೇ ಅಲ್ಲವೇ ಎನ್ನುವುದನ್ನು ಪ್ರಧಾನಿಯವರು ತನ್ನ ಬಾಲ್ಯಸ್ನೇಹಿತನಲ್ಲಿ ಕೇಳಬೇಕು ಎಂದು ಹೇಳಿದ್ದಾರೆ.
'ನಮ್ಮ ತಂದೆಯ ಆಪ್ತ ಸ್ನೇಹಿತರೋರ್ವರು ಸಮೀಪದ ಗ್ರಾಮದಲ್ಲಿ ವಾಸವಾಗಿದ್ದರು. ಅವರ ಅಕಾಲಿಕ ನಿಧನದ ಬಳಿಕ ನನ್ನ ತಂದೆ ಅವರ ಪುತ್ರ ಅಬ್ಬಾಸ್ನನ್ನು ನಮ್ಮ ಮನೆಗೆ ಕರೆತಂದಿದ್ದರು. ಆತ ನಮ್ಮಾಂದಿಗೇ ಉಳಿದುಕೊಂಡು ತನ್ನ ವ್ಯಾಸಂಗವನ್ನು ಪೂರ್ಣಗೊಳಿಸಿದ್ದ. ಅಮ್ಮ ನಮ್ಮಷ್ಟೇ ಅಬ್ಬಾಸ್ನನ್ನೂ ಪ್ರೀತಿಸುತ್ತಿದ್ದರು. ಪ್ರತಿವರ್ಷ ಈದ್ನಂದು ಆತನ ಇಷ್ಟದ ಅಡಿಗೆಯನ್ನು ಮಾಡುತ್ತಿದ್ದರು. ಹಬ್ಬದ ದಿನಗಳಲ್ಲಿ ೆರೆಕರೆಯ ಮಕ್ಕಳು ಅಮ್ಮನ ವಿಶೇಷ ಸವಿರುಚಿಗಳಿಗಾಗಿ ನಮ್ಮ ಮನೆಗೆ ಬರುವುದು ಸಾಮಾನ್ಯವಾಗಿತ್ತು'ಎಂದು ಮೋದಿ ತನ್ನ ಬ್ಲಾಗ್ ಲೇಖನದಲ್ಲಿ ಬರೆದಿದ್ದರು.
'ಪ್ರಧಾನಿಯವರು ಎಂಟು ವರ್ಷಗಳ ಬಳಿಕ ತನ್ನ ಸ್ನೇಹಿತನನ್ನು ನೆನಪಿಸಿಕೊಂಡಿದ್ದಾರೆ. ಅವರಿಗೆ ಈ ಗೆಳೆಯ ಇರುವುದು ನಮಗೆ ಗೊತ್ತಿರಲಿಲ್ಲ. ಅಬ್ಬಾಸ್ ಅಸ್ತಿತ್ವದಲ್ಲಿದ್ದರೆ ಅವರಿಗೆ ಕರೆ ಮಾಡಿ ಅಸದುದ್ದೀನ್ ಉವೈಸಿ ಮತ್ತು ಉಲೇಮಾಗಳ ಭಾಷಣಗಳನ್ನು ಅವರಿಗೆ ಕೇಳಿಸಿ ಮತ್ತು ನಾವು ಸುಳ್ಳು ಹೇಳುತ್ತಿದ್ದೇವೆಯೇ ಎಂದು ಅವರನ್ನು ಪ್ರಶ್ನಿಸಿ' ಎಂದು ಮೋದಿಯವರಿಗೆ ಕುಟುಕಿರುವ ಉವೈಸಿ,'ನೀವು ಅಬ್ಬಾಸ್ ರ ವಿಳಾಸವನ್ನು ನೀಡಿದರೆ ನಾನೇ ಅವರ ಬಳಿಗೆ ಹೋಗುತ್ತೇನೆ. ಪ್ರವಾದಿ ಮುಹಮ್ಮದ್ ರ ಕುರಿತು ನೂಪುರ್ ಶರ್ಮಾರ ಹೇಳಿಕೆಗಳು ಆಕೇಪಾರ್ಹವೇ ಅಲ್ಲವೇ ಎಂದು ನಾನು ಅವರನ್ನು ಪ್ರಶ್ನಿಸುತ್ತೇನೆ. ಅವರು ಅಸಂಬಂದ್ಧ ಮಾತುಗಳನ್ನಾಡಿದ್ದಾರೆ ಎನ್ನುವುದನ್ನು ಅಬ್ಬಾಸ್ ಒಪ್ಪಿಕೊಳ್ಳುತ್ತಾರೆ 'ಎಂದಿದ್ದಾರೆ.
'ನೀವು ನಿಮ್ಮ ಸ್ನೇಹಿತನನ್ನು ಸ್ಮರಿಸಿದ್ದೀರಿ. ಅದು ಕಟ್ಟುಕಥೆಯೂ ಆಗಿರಬಹುದು,ನನಗೆ ಹೇಗೆ ಗೊತ್ತು 'ಎಂದು ಉವೈಸಿ ಪ್ರಶ್ನಿಸಿದ್ದಾರೆ.