ಮಹಾರಾಷ್ಟ್ರ ಬೆಳವಣಿಗೆ ಹಿನ್ನೆಲೆ ಪಕ್ಷಾಂತರ ನಿಷೇಧ ಕಾಯಿದೆಗೆ ಇನ್ನಷ್ಟು ಬಲ ನೀಡಲು ಸುಪ್ರೀಂ ಕೋರ್ಟ್‌ಗೆ ಮೊರೆ

Update: 2022-06-23 10:14 GMT

ಹೊಸದಿಲ್ಲಿ: ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟು ಮುಂದುವರಿದಿರುವಂತೆಯೇ 2020ರಲ್ಲಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾಗಿದ್ದ ಅರ್ಜಿಯೊಂದಕ್ಕೆ ಸಂಬಂಧಿಸಿದೆ ಹೊಸ ಇಂಟರ್‌ಲೊಕ್ಯೂಟರಿ ಅರ್ಜಿ ಸಲ್ಲಿಸಿರುವ ಕಾಂಗ್ರೆಸ್‌ ನಾಯಕಿ ಜಯಾ ಠಾಕುರ್‌, ಅನರ್ಹಗೊಳಿಸಲಾದ ಅಥವಾ ರಾಜೀನಾಮೆ ನೀಡಿದ ಶಾಸಕರನ್ನು ಮುಂದಿನ ಐದು ವರ್ಷಗಳ ತನಕ ಚುನಾವಣೆ ಸ್ಪರ್ಧಿಸುವುದರಿಂದ ನಿಷೇಧಿಸುವ ಮೂಲಕ ಪಕ್ಷಾಂತರ ತಡೆ ಕಾಯಿದೆಯನ್ನು ಬಲಪಡಿಸುವಂತೆ ಕೋರಿದ್ದಾರೆ.

ಅನರ್ಹಗೊಂಡ ಶಾಸಕರು ತಾವು ಮೊದಲು ಆಯ್ಕೆಯಾದ ಅವಧಿಯಲ್ಲಿ ಉಪಚುನಾವಣೆ ಸ್ಪರ್ಧಿಸುವುದಕ್ಕೆ ತಡೆ ಕೋರಿ ಈ ಅರ್ಜಿ ಸಲ್ಲಿಸಲಾಗಿತ್ತು.

ಪಕ್ಷಾಂತರದ ಆಧಾರದಲ್ಲಿ ಅನರ್ಹಗೊಳಿಸುವ ವಿಚಾರವನ್ನು ಸಂವಿಧಾನದ ಹತ್ತನೇ ಶೆಡ್ಯೂಲ್‌ನಲ್ಲಿ ಉಲ್ಲೇಖಿಸಲಾಗಿದ್ದು ಇದನ್ನು ಪಕ್ಷಾಂತರ ತಡೆ ಕಾಯಿದೆಯೆಂದೇ ಸಾಮಾನ್ಯವಾಗಿ ಬಣ್ಣಿಸಲಾಗುತ್ತದೆ.

ಠಾಕುರ್‌ ಅವರು 2020ರಲ್ಲಿ ಸಲ್ಲಿಸಿದ್ದ ಅರ್ಜಿಗೆ  ಸುಪ್ರೀಂ ಕೋರ್ಟ್‌ ಜನವರಿ 2021 ರಲ್ಲಿ ಕೇಂದ್ರ ಸರಕಾರ ಮತ್ತು ಚುನಾವಣಾ ಆಯೋಗಕ್ಕೆ ನೋಟಿಸ್‌ ಜಾರಿಗೊಳಿಸಿ ನಾಲ್ಕು ವಾರಗಳೊಳಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಸೂಚಿಸಿತ್ತು. ಆದರೆ ಅಫಿಡವಿಟ್‌ಗಳನ್ನು ಇನ್ನೂ ಸಲ್ಲಿಸಲಾಗಿಲ್ಲ.

ಈ ಪ್ರಕರಣದಲ್ಲಿ ಇನ್ನೂ ಪ್ರತಿಕ್ರಿಯಿಸದೇ ಇರುವ ಕೇಂದ್ರ ಸರಕಾರ ಮತ್ತು ಚುನಾವಣಾ ಆಯೋಗವನ್ನು ಜಯ ಠಾಕುರ್‌ ತಮ್ಮ ಇಂಟರ್‌ಲೊಕ್ಯೂಟರಿ ಅರ್ಜಿಯಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ.

ʻʻರಾಜಕೀಯ ಪಕ್ಷಗಳು ಪರಿಸ್ಥಿತಿಯ ಲಾಭ ಪಡೆದು ದೇಶದ ವಿವಿಧ ರಾಜ್ಯಗಳಲ್ಲಿ ಚುನಾಯಿತ ಸರಕಾರಗಳನ್ನು ಉರುಳಿಸುತ್ತಿವೆ ಮತ್ತು ಮಹಾರಾಷ್ಟ್ರದಲ್ಲೂ ಈಗ ಅದೇ ನಡೆಯುತ್ತಿದೆ, 10ನೇ ಶೆಡ್ಯೂಲ್‌ ಪ್ರಯೋಜನವಿಲ್ಲದಂತೆ ಮಾಡಲು ರಾಜಕೀಯ ಪಕ್ಷಗಳಿಂದ ದೇಶಾದ್ಯಂತ ಪ್ರಯತ್ನಗಳೂ ನಡೆಯುತ್ತಿವೆ ಎಂದು ಅರ್ಜಿಯಲ್ಲಿ ದೂರಲಾಗಿದೆ.

ಮಣಿಪುರ, ಕರ್ನಾಟಕ ಮತ್ತು ಮಧ್ಯಪ್ರದೇಶದಲ್ಲಿ ರಾಜಕೀಯ ಲಾಭಕ್ಕಾಗಿ ಶಾಸಕರು ಪಕ್ಷ ಬದಲಾಯಿಸಿರುವ ಬೆಳವಣಿಗೆ ಈಗಾಗಲೇ ನಡೆದಿರುವುದನ್ನು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News