ದೇಶ ಹೊತ್ತಿ ಉರಿಯಲು ನೂಪುರ್‌ ಶರ್ಮಾ ಕಾರಣ: ಸುಪ್ರೀಂಕೋರ್ಟ್‌ ಆಕ್ರೋಶ

Update: 2022-07-01 16:54 GMT

  ಹೊಸದಿಲ್ಲಿ,ಜು.1: ಪ್ರವಾದಿ ಮುಹಮ್ಮದ್ ಕುರಿತು ಆಕ್ಷೇಪಕಾರಿಯಾದ ಹೇಳಿಕೆಗಳನ್ನು ನೀಡುವ ಮೂಲಕ ದಅಮಾನತುಗೊಂಡ ಬಿಜೆಪಿ ನಾಯಕಿ ನೂಪುರ್ ಶರ್ಮಾ ಅವರು ದೇಶ ಹೊತ್ತಿ ಉರಿಯುವವಂತೆ ಮಾಡಿದ್ದಾರೆಂದು ಸುಪ್ರೀಂಕೋರ್ಟ್ ಶುಕ್ರವಾರ ಆಕ್ರೋಶವ್ಯಕ್ತಪಡಿಸಿದೆ ಹಾಗೂ ಆಕೆ ಇಡೀ ದೇಶದ ಮುಂದೆ ಕ್ಷಮೆಯಾಚಿಸಬೇಕೆಂದು ಆದೇಶಿಸಿದೆ.

   ‘‘ನೂಪುರ್ ಶರ್ಮಾ ತನ್ನ ಸಡಿಲು ನಾಲಗೆಯಿಂದಾಗಿ ಇಡೀ ದೇಶ ಹೊತ್ತಿ ಉರಿಯುವಂತೆ ಮಾಡಿದ್ದಾರೆ. ದೇಶಾದ್ಯಂತ ಉದ್ವಿಗ್ನ ಭಾವನೆಗಳ ಕಿಡಿಯನ್ನು ಆಕೆ ಹಚ್ಚಿದ್ದಾಳೆ. ಈ ಮಹಿಳೆಯು, ದೇಶದಲ್ಲಿ ಈಗ ನಡೆಯುತ್ತಿರುವುದಕ್ಕೆಲ್ಲಾ ಸಂಪೂರ್ಣವಾಗಿ ಹೊಣೆಗಾರಳಾಗಿದ್ದಾಳೆ’’ ಎಂದು ನ್ಯಾಯಾಧೀಶರು ಕಟುವಾಗಿ ಹೇಳಿದ್ದಾರೆ.

     ಜೂನ್ ತಿಂಗಳ ಆರಂಭದಲ್ಲಿ ಟಿವಿ ಚರ್ಚಾಕೂಟವೊಂದರಲ್ಲಿ ಭಾಗವಹಿಸಿದ್ದ ನೂಪುರ್ ಶರ್ಮಾ ಅವರು ಪ್ರವಾದಿ ಮುಹಮ್ಮದ್ ಅವರ ಬಗ್ಗೆ ನೀಡಿದ ನಿಂದನಾತ್ಮಕ ಹೇಳಿಕೆಗಳನ್ನು ಖಂಡಿಸಿ ದೇಶಾದ್ಯಂತ ಬೃಹತ್ ಪ್ರತಿಭಟನೆಗಳು ನಡೆದಿದ್ದವು. ಹಲವೆಡೆ ಅವು ಹಿಂಸಾತ್ಮಕರೂಪವನ್ನು ಪಡೆದಿದ್ದವು. ಹಲವಾರು ಗಲ್ಫ್ ರಾಷ್ಟ್ರಗಳು ಭಾರತೀಯ ರಾಜತಾಂತ್ರಿಕರಿಗೆ ಸಮನ್ಸ್ ನೀಡಿ, ನೂಪುರ್ ಹೇಳಿಕೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದವು.

 ನೂಪುರ್ ಶರ್ಮಾರನ್ನು ಬೆಂಬಲಿಸಿದ್ದ ಉದಯಪುರದ ಟೈಲರ್ ಕನ್ನಯ್ಯಲಾಲ್ ಎಂಬಾತನನ್ನು ಇಬ್ಬರು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆಗೈದು, ಘಟನೆಯನ್ನು ಮೊಬೈಲ್ ಕ್ಯಾಮರಾದಲ್ಲಿ ಚಿತ್ರೀಕರಿಸಿದ್ದರು. ಇಸ್ಲಾಂಗೆ ಆಗಿರುವ ಅಪಮಾನಕ್ಕಾಗಿ ತಾವು ಆತನನ್ನು ಹತ್ಯೆಗೈದಿರುವುದಾಗಿ ಆರೋಪಿಗಳು ವಿಡಿಯೋದಲ್ಲಿ ಹೇಳಿಕೊಂಡಿದ್ದರು.

‘‘ಟಿವಿ ಚರ್ಚಾಗೋಷ್ಠಿಯಲ್ಲಿ ಆಕೆ ಪ್ರಚೋದನಕಾರಿ ಹೇಳಿಕೆ ನೀಡಿರುವುದನ್ನು ನಾವು ನೋಡಿದ್ದೇವೆ. ಆಕೆ ಅದನ್ನು ಹೇಳಿದ ರೀತಿ ಹಾಗೂ ಆನಂತರ ತಾನೊಬ್ಬ ನ್ಯಾಯವಾದಿ ಆಕೆ ಹೇಳಿಕೊಂಡಿರುವುದು ತೀರಾ ನಾಚಿಕೆಗೇಡು. ನೂಪುರ್ ಇಡೀ ದೇಶಕ್ಕೆ ಕ್ಷಮೆ ಕೇಳಬೇಕು’’ ಎಂದು ನ್ಯಾಯಮೂರ್ತಿ ಸೂರ್ಯಕಾಂತ್ ಹೇಳಿದರು.

   ತನಗೆ ಜೀವಬೆದರಿಕೆಯಿರುವುದರಿಂದ ದೇಶಾದ್ಯಂತ ತನ್ನ ವಿರುದ್ಧ ಸಲ್ಲಿಸಲಾಗಿರುವ ಹಲವಾರು ಎಫ್‌ಐಆರ್‌ಗಳನ್ನು ದಿಲ್ಲಿಗೆ ವರ್ಗಾಯಿಸಬೇಕೆಂದು ನೂಪುರ್ ಶರ್ಮಾ ನ್ಯಾಯಾಲಯವನ್ನು ಕೋರಿದ್ದರು. ಬೆದರಿಕೆಯಿರುವ ಹಿನ್ನೆಲೆಯಲ್ಲಿ ನೂಪುರ್ ಅವರು ಅರ್ಜಿಯಲ್ಲಿ ಆಕೆಯ ಹೆಸರನ್ನು ಬಳಸಿಕೊಂಡಿಲ್ಲವೆಂದು ಅವರ ವಕೀಲರು ನ್ಯಾಯಪೀಠಕ್ಕೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು ‘‘ ಆಕೆ ಬೆದರಿಕೆಗಳನ್ನು ಎದುರಿಸುತ್ತಿದ್ದಾಳೆಯೇ ಅಥವಾ ಆಕೆಯು ಭದ್ರತಾ ಬೆದರಿಕೆಯಾಗಿದ್ದಾಳೆಯೇ’’ಎಂದು ಖಾರವಾಗಿ ಹೇಳಿದರು.

  ತನ್ನ ಅರ್ಜಿಯಲ್ಲಿನ ಅಂಶಗಳನ್ನು ‘‘ ಸಮಾನವಾಗಿ ಪರಿಗಣಿಸಬೇಕು’’ ಹಾಗೂ ‘‘ಯಾವುದೇ ತಾರತಮ್ಯ ಎಸಗಬಾರದು’’ ಎಂಬ ನೂಪುರ್ ಅವರ ವಾದವನ್ನು ನ್ಯಾಯಾಲಯ ತಳ್ಳಿಹಾಕಿತು. ‘‘ ಆದರೆ, ನೀವು ಇತರರ ವಿರುದ್ಧ ಎಫ್‌ಐಆರ್ ಅನ್ನು ಸಲ್ಲಿಸಿದಾಗ ಅವರನ್ನು ತಕ್ಷಣವೇ ಬಂಧಿಸಲಾಗಿದೆ ಹಾಗೂ ಅದರ ನಿಮ್ಮ ವಿರುದ್ಧ ಎಫ್‌ಐಆರ್ ಸಲ್ಲಿಸಿದರೂ, ಯಾರೂ ಕೂಡಾ ನಿಮ್ಮನ್ನು ಮುಟ್ಟುವ ಧೈರ್ಯ ಮಾಡಿಲ್ಲ’’ ಎಂದು ನ್ಯಾಯಾಧೀಶರು ಹೇಳಿದರು.

 ‘‘ಆಕೆ ಪಕ್ಷವೊಂದರ ವಕ್ತಾರೆಯಾಗಿದ್ದರೇನಾಯಿತು. ತನಗೆ ಅಧಿಕಾರದ ಬೆಂಬಲವಿರುವುದರಿಂದ ನೆಲದ ಕಾನೂನನ್ನು ಗೌರವಿಸದೆ ಏನೂ ಬೇಕಾದರೂ ಹೇಳಬಹುದೆಂದು ಆಕೆ ಯೋಚಿಸಿದ್ದಾರೆಯೇ ? ಎಂದು ನ್ಯಾಯಾಲಯ 20 ನಿಮಿಷಗಳ ವಿಚಾರಣೆಯ ವೇಳೆ ಕಟುವಾಗಿ ಹೇಳಿತು.

     ನೂಪುರ್ ಪರವಾಗಿ ಉತ್ತರಿಸಿದ ಆಕೆಯ ನ್ಯಾಯವಾದಿ, ಟಿವಿ ಚರ್ಚಾಗೋಷ್ಠಿಯೊಂದರಲ್ಲಿ ನಿರೂಪಕರು ಕೇಳಿದ ಪ್ರಶ್ನೆಯೊಂದಕ್ಕೆ ಆಕೆ ಉತ್ತರಿಸಿದ್ದಾಳಷ್ಟೇ. ಪೌರರ ವಾಕ್‌ಸ್ವಾತಂತ್ರದ ಹಕ್ಕಿನ ಬಗ್ಗೆ ನ್ಯಾಯವಾದಿ ಪ್ರಸ್ತಾವಿಸಿದಾಗ, ಅದಕ್ಕೆ ಉತ್ತರಿಸಿದ ನ್ಯಾಯಾಧೀಶರು ‘‘ ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ವಾಕ್‌ಸ್ವಾತಂತ್ರದ ಹಕ್ಕಿದೆ. ಪ್ರಜಾಪ್ರಭುತ್ವದಲ್ಲಿ ಹುಲ್ಲಿಗೆ ಬೆಳೆಯುವ ಹಕ್ಕಿದೆ. ಹಾಗೆಯೇ ಕತ್ತೆಗೆ ಅದನ್ನು ತಿನ್ನುವ ಹಕ್ಕಿದೆ’’ ಎಂದು ಹೇಳಿದರು.

     ಮಾಧ್ಯಮಸ್ವಾತಂತ್ರದ ಹಕ್ಕಿನ ರಕ್ಷಣೆಯ ಕುರಿತು ನ್ಯಾಯಾಲಯದ ಆದೇಶವನ್ನು ನೂಪುರ್ ಶರ್ಮಾ ಅವರ ವಕೀಲರು ಉಲ್ಲೇಖಿಸಿದಾಗ ಅದಕ್ಕೆ ಪ್ರತಿಕ್ರಿಯಿಸಿ ಸುಪ್ರೀಂಕೋರ್ಟ್ ‘‘ ಆಕೆಯನ್ನು ಪತ್ರಕರ್ತರ ಪೀಠದಲ್ಲಿ ಕೂರಿಸಲು ಸಾಧ್ಯವಿಲ್ಲ. ಆಕೆ ಟಿವಿ ಚರ್ಚಾಗೋಷ್ಠಿಯಲ್ಲಿ ಭಾಗವವಹಿಸಿ, ಸಾಮಾಜಿಕ ಸಂರಚನೆಯ ಮೇಲೆ ಉಂಟಾಗುವ ಪರಿಣಾಮಗಳನ್ನು ಮುಂಬರುವ ಪರಿಣಾಮಗಳನ್ನು ಊಹಿಸದೆ ಮನಬಂದಂತೆ ಬೇಜವಾಬ್ದಾರಿಯ ಹೇಳಿಕೆಗಳನ್ನು ನೀಡಿದಲ್ಲಿ ಹಾಗೂ ಊಹಿಸದೆ ಆಕೆ ಹೇಳಿಕೆಗಳನ್ನು ನೀಡಿದ್ದಾರೆಂದು ನ್ಯಾಯಾಲಯ ಕಳವಳ ವ್ಯಕ್ತಪಡಿಸಿತು.

 ಆ ಬಳಿಕ ನೂಪುರ್ ಶರ್ಮಾ ಅವರು ತನ್ನ ಅರ್ಜಿಯನ್ನು ಹಿಂಪಡೆದುಕೊಂಡರು.

 ಪ್ರವಾದಿ ಮುಹಮ್ಮದ್ ಅವರ ಕುರಿತಾಗಿ ನಿಂದನಾತ್ಮಕ ಹೇಳಿಕೆಯನ್ನು ನೀಡಿದ್ದಕ್ಕಾಗಿ ನೂಪುರ್ ಶರ್ಮಾ ಈಗಾಗಲೇ ಕ್ಷಮೆಯಾಚಿಸಿದ್ದಾರೆಂದು ಆಕೆಯ ಪರ ವಕೀಲ ಮಣೀಂದರ್ ಸಿಂಗ್ ತಿಳಿಸಿದಾಗ, ಅದಕ್ಕೆ ಕಟುವಾಗಿ ಉತ್ತರಿಸಿದ ನ್ಯಾಯಾಲಯವು, ‘‘ಆಕೆ ಟಿವಿ ವಾಹಿನಿಯ ಮುಂದೆ ಹೋಗಿ ಇಡೀ ದೇಶದೆದುರು ಕ್ಷಮೆ ಯಾಚಿಸಬೇಕಾಗಿತ್ತು. ಈಗ ಆಕೆ ತನ್ನ ಹೇಳಿಕೆಯನ್ನು ಹಿಂಪಡೆಯುವುದು ತುಂಬಾ ತಡವಾಗಿದೆ’’ ಎಂದು ಸುಪ್ರೀಂಕೋರ್ಟ್ ಹೇಳಿತು.

 ನೂಪುರ್ ತನ್ನ ವಿವಾದಾತ್ಮಕ ಹೇಳಿಕೆಯನ್ನು ಹಿಂತೆಗೆದುಕೊಂಡಿರುವುದು ಕೂಡಾ ಶರ್ತಬದ್ಧವಾಗಿತ್ತು ಎಂದು ಗಮನಸೆಳೆದ ನ್ಯಾಯಾಲಯವು ಆಕೆ, ಒಂದು ವೇಳೆ ಯಾರೊಬ್ಬರಾದರೂ ಭಾವನೆಗಳಿಗೆ ನೋವುಂಟಾಗಿದ್ದಲ್ಲಿ ಮಾತ್ರವೇ ತಾನು ತನ್ನ ಹೇಳಿಕೆಯನ್ನು ಹಿಂಪಡೆಯುವುದಾಗಿ ಹೇಳಿಕೊಂಡಿದ್ದರು ಎಂದು ತಿಳಿಸಿತು.

 ಟಿವಿ ಪತ್ರಕರ್ತ ಹಾಗೂ ಸಂಪಾದಕ ಆರ್ನಬ್ ಗೋಸ್ವಾಮಿ ಪ್ರಕರಣಕ್ಕೆ ಸಂಬಂಧಿಸಿ ಸುಪ್ರೀಂಕೋರ್ಟ್ ಈ ಹಿಂದೆ ನೀಡಿದ ತೀರ್ಪಿನಂತೆ ನೂಪುರ್ ಶರ್ಮಾ ಕೂಡಾ ಕಾನೂನುಕ್ರಮಕ್ಕೆ ಒಳಗಾಗದಿರುವ ಹಕ್ಕನ್ನು ಹೊಂದಿದ್ದಾರೆಂಬ ಹಿರಿಯ ವಕೀಲ ಮಣೀಂದರ್ ಸಿಂಗ್ ಅವರ ವಾದವನ್ನು ಅಲ್ಲಗಳೆಯಿತು.

 ಒಂದು ನಿರ್ದಿಷ್ಟ ವಿಷಯಕ್ಕೆ ಸಂಬಂಧಿಸಿ ಪತ್ರಕರ್ತನೊಬ್ಬ ತನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದಕ್ಕೂ, ಪಕ್ಷವೊಂದರ ವಕ್ತಾರರು ಟಿವಿ ಚರ್ಚಾಗೋಷ್ಠಿಯಲ್ಲಿ ಪಾಲ್ಗೊಂಡು ತನ್ನ ಹೇಳಿಕೆಯಿಂದಾಗಬಹುದಾದ ಪರಿಣಾಮಗಳ ಬಗ್ಗೆ ಯೋಚಿಸದೆ ಮನಬಂದಂತೆ ಮಾತನಾಡುವುದಕ್ಕೂ ವ್ಯತ್ಯಾಸವಿದೆ ಎಂದಿತು.

ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವ ವಿಷಯದ ಬಗ್ಗೆ ಟಿವಿ ಚರ್ಚೆಗೆ ಸುಪ್ರೀಂ ಆಕ್ಷೇಪ

   ನೂಪುರ್ ಶರ್ಮಾ ಅವರು ಪಾಲ್ಗೊಂಡ ಚರ್ಚಾಗೋಷ್ಠಿಯಲ್ಲಿನ ವಿಷಯದ ಬಗ್ಗೆಯೂ ನ್ಯಾಯಾಲಯ ಆಕ್ಷೇಪ ವ್ಯಕ್ತಪಡಿಸಿತು. ಜ್ಞಾನವ್ಯಾಪಿ ಮಸೀದಿ ವಿವಾದವು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವುದರಿಂದ ಅದರ ಬಗ್ಗೆ ಟಿವಿ ಚರ್ಚಾಗೋಷ್ಠಿ ನಡೆಸಬಾರದಿತ್ತೆಂದು ನ್ಯಾಯ ಮೂರ್ತಿ ಸೂರ್ಯಕಾಂತ್ ತಿಳಿಸಿದರು. ನ್ಯಾಯಾಲಯ ವಿಚಾರಣೆಗೆ ಕೈಗೆತ್ತಿಕೊಂಡಿರುವ ವಿಷಯದ ಬಗ್ಗೆ ಟಿವಿ ವಾಹಿನಿಯು ಚರ್ಚಿಸುವುದೇಕೆ ಎಂದು ಪ್ರಶ್ನಿಸಿದ ನ್ಯಾಯಾಲಯವು, ಚರ್ಚೆಯ ಉದ್ದೇಶವು ನಿರ್ದಿಷ್ಟ ಕಾರ್ಯಸೂಚಿಯನ್ನು ಉತ್ತೇಜಿಸುವು ಉದ್ದೇಶಹೊಂದಿದೆಯೇ ಹೊರತು ಮತ್ತೇನೂ ಅಲ್ಲವೆಂದು ಅವರು ಹೇಳಿದರು.

     ಚರ್ಚಾಗೋಷ್ಠಿಯಲ್ಲಿ ನೂಪುರ್ ಶರ್ಮಾ ಅವರು ಪ್ರಚೋದಿಸಲ್ಪಟ್ಟಿದ್ದರಿಂದ ಅವರು ಈ ವಿವಾದಾತ್ಮಕ ಹೇಳಿಕೆಯನ್ನು ನೀಡಿದರೆಂದು ಸಿಂಗ್ ವಿವರಿಸಿದರು. ಆಗ ನ್ಯಾಯಾಲಯ ವು ಇದಕ್ಕಾಗಿ ಟಿವಿ ನಿರೂಪಕರ ವಿರುದ್ಧ ನೂಪುರ್ ಅವರು ಎಫ್‌ಐಆರ್ ದಾಖಲಿಸಬೇಕಿತ್ತು ಎಂದಿತು. ಆಗ ಅದಕ್ಕೆ ಸ್ಪಷ್ಟನೆ ನೀಡಿದ ಸಿಂಗ್, ಆಕೆಯನ್ನು ಪ್ರಚೋದಿಸಿದ್ದು ಚರ್ಚಾಕೂಟದಲ್ಲಿ ಪಾಲ್ಗೊಂಡಿದ್ದ ಇನ್ನೋರ್ವ ಸದಸ್ಯರೇ ಹೊರತು ಟಿವಿ ನಿರೂಪಕರಲ್ಲ ಎಂದರು.

  *ತನ್ನ ವಿರುದ್ಧ ಎಫ್‌ಐಆರ್‌ಗಳ ವಿರುದ್ಧ ಶರ್ಮಾ ಅವರು ನೇರವಾಗಿ ಸುಪ್ರೀಂಕೋರ್ಟ್‌ನ ಮೆಟ್ಟಲೇರಿದ್ದಕ್ಕೂ ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿತು. ‘‘ ಈ ಅರ್ಜಿಯು ಆಕೆಯ ಉದ್ದಟತನವನ್ನು ತೋರಿಸುತ್ತದೆ. ಆಕೆಗೆ ಈ ದೇಶದ ಮ್ಯಾಜಿಸ್ಟ್ರೇಟ್ ನ್ಯಾಯಾಲಯಗಳು ತೀರಾ ಸಣ್ಣವರೆಂಬಂತೆ ಕಾಣುತ್ತದೆ’’ಎಂದು ನ್ಯಾಯಾಲಯ ಕಟುವಾಗಿ ವಿಮರ್ಶಿಸಿತು.

  *ದಿಲ್ಲಿ ಪೊಲೀಸರು ದಾಖಲಿಸಿಕೊಂಡಿರುವ ಎಫ್‌ಐಆರ್ ಕುರಿತ ತನಿಖೆಗೆ ನೂಪುರ್‌ಶರ್ಮಾ ಸಹಕರಿಸುತ್ತಿದ್ದಾರೆಂದು ಅವರ ವಕೀಲರು ತಿಳಿಸಿದರು. ಆದಕ್ಕೆ ವ್ಯಂಗ್ಯವಾಡಿದ ನ್ಯಾಯಾಧೀಶರು ಅಲ್ಲಿ ನಿಮಗಾಗಿ ರೆಡ್‌ಕಾರ್ಪೆಟ್ ಹಾಸಿಡಬೇಕಾಗಿದೆ’’ ಎಂದಿತು.

  *‘ಅಲ್ಟ್‌ನ್ಯೂಸ್’ನ ಸಂಪಾದ ಮುಹಮ್ಮದ್ ಝುಬೈರ್ ಅವರ ಬಂಧನದ ಬಗ್ಗೆಯೂ ನ್ಯಾಯಾಲಯವು ತನ್ನ ಆದೇಶದಲ್ಲಿ ಪರೋಕ್ಷವಾಗಿ ಪ್ರಸ್ತಾವಿಸಿತು. ‘‘ ಇತರ ಯಾರೋ ಒಬ್ಬರ ವಿರುದ್ಧ ಎಫ್‌ಐಆರ್ ದಾಖಲಾದಲ್ಲಿ ಅವರ ಬಂಧನವಾಗುತ್ತೆ. ಆದರೆ ನಿಮ್ಮ ಬಂಧನವಾಗುವುದಿಲ್ಲ’’ ಎಂದು ನ್ಯಾಯಾಲಯ ಹೇಳಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News