ಜನಗಣತಿ ದತ್ತಾಂಶವನ್ನು ಎನ್‌ಸಿಆರ್ ಸಿದ್ಧಪಡಿಸಲು ಬಳಸುವಂತಿಲ್ಲ:ಕೇಂದ್ರ

Update: 2022-07-20 15:58 GMT

ಹೊಸದಿಲ್ಲಿ,ಜು.20: ಜನಗಣತಿಯನ್ನು ನಡೆಸಿದಾಗ ಅದರ ದತ್ತಾಂಶಗಳನ್ನು ಎನ್‌ಸಿಆರ್ ಸೇರಿದಂತೆ ಇತರ ಯಾವುದೇ ದತ್ತಾಂಶ ಕೋಶವನ್ನು ಸಿದ್ಧಪಡಿಸಲು ಬಳಸುವಂತಿಲ್ಲ ಎಂದು ಸಹಾಯಕ ಗೃಹಸಚಿವ ನಿತ್ಯಾನಂದ ರಾಯ್ ಅವರು ಬುಧವಾರ ರಾಜ್ಯಸಭೆಯಲ್ಲಿ ತಿಳಿಸಿದರು. ಅಸ್ಸಾಮಿನಲ್ಲಿ ಮೊದಲು ನಡೆದ ಎನ್‌ಆರ್‌ಸಿ ಪ್ರಕ್ರಿಯೆಯು ಭಾರತದಲ್ಲಿ ಅಕ್ರಮವಾಗಿ ವಾಸವಾಗಿರುವ ವಿದೇಶಿಯರನ್ನು ಗುರುತಿಸುವ ಮತ್ತು ಅವರನ್ನು ಗಡಿಪಾರುಗೊಳಿಸುವ ಉದ್ದೇಶವನ್ನು ಹೊಂದಿದೆ.

2021ರಲ್ಲಿಯೇ ಜನಗಣತಿ ನಡೆಯಬೇಕಿತ್ತಾದರೂ ಕೋವಿಡ್ ಸಾಂಕ್ರಾಮಿಕದಿಂದಾಗಿ ವಿಳಂಬಗೊಂಡಿದೆ. ಅದು ಯಾವಾಗ ನಡೆಯುತ್ತದೆ ಎನ್ನುವುದು ಗೊತ್ತಿಲ್ಲ ಎಂದು NDTV.com ವರದಿ ಮಾಡಿದೆ.

ರಾಜಸ್ಥಾನದ ಬಿಜೆಪಿ ಸಂಸದ ಕಿರೋಡಿ ಲಾಲ ಮೀನಾ ಅವರ ಪ್ರಶ್ನೆಗೆ ಉತ್ತರಿಸುತ್ತಿದ್ದ ರಾಯ್,1948ರ ಜನಗಣತಿ ಕಾಯ್ದೆಯಡಿ ಸಂಗ್ರಹಿಸಲಾಗುವ ವ್ಯಕ್ತಿಗತ ದತ್ತಾಂಶವನ್ನು ಬಹಿರಂಗಗೊಳಿಸಲು ಕಾನೂನಿನಲ್ಲಿ ಅವಕಾಶವಿಲ್ಲ. ವಿವಿಧ ಆಡಳಿತಾತ್ಮಕ ಹಂತಗಳಲ್ಲಿ ಒಟ್ಟುಗೂಡಿದ ಜನಗಣತಿ ದತ್ತಾಂಶವನ್ನು ಮಾತ್ರ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.

 ಜನಗಣತಿಯನ್ನು ಮೊದಲ ಬಾರಿಗೆ ಡಿಜಿಟಲ್ ಪ್ಲಾಟ್‌ಫಾರ್ಮ್‌ನಲ್ಲಿ ನಡೆಸಲಾಗುವುದು ಮತ್ತು ಸ್ವಯಂ-ಎಣಿಕೆಯ ವೈಶಿಷ್ಟವನ್ನು ಒಳಗೊಂಡಿರಲಿದೆ. ದತ್ತಾಂಶ ಸಂಗ್ರಹಕ್ಕಾಗಿ ಮೊಬೈಲ್ ಆ್ಯಪ್‌ಗಳು ಹಾಗೂ ವಿವಿಧ ಸಂಬಂಧಿತ ಚಟುವಟಿಕೆಗಳ ನಿರ್ವಹಣೆ ಮತ್ತು ಮೇಲ್ವಿಚಾರಣೆಗಾಗಿ ಜನಗಣತಿ ಪೋರ್ಟಲ್ ಅನ್ನು ಅಭಿವೃದ್ಧಿಗೊಳಿಸಲಾಗಿದೆ ಎಂದೂ ರಾಯ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News